ಅದಾನಿ ಸಮೂಹದ ಬಿಕ್ಕಟ್ಟು: ಜೆಪಿಸಿ ಅಥವಾ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ತನಿಖೆಗೆ ಕಾಂಗ್ರೆಸ್ ಮತ್ತಿತರ ವಿಪಕ್ಷಗಳ ಒತ್ತಾಯ

ಅದಾನಿ ಸಮೂಹ ಸಂಸ್ಥೆಯ ಬಿಕ್ಕಟ್ಟನ್ನು ಸಂಸತ್ತಿಸ ಜಂಟಿ ಸದನ ಸಮಿತಿ ಅಥವಾ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಮತ್ತಿತರ ವಿಪಕ್ಷಗಳು ಗುರುವಾರ ಒತ್ತಾಯಿಸಿವೆ. 
ಖರ್ಗೆ ಮತ್ತಿತರ ವಿಪಕ್ಷಗಳ ಸದಸ್ಯರು
ಖರ್ಗೆ ಮತ್ತಿತರ ವಿಪಕ್ಷಗಳ ಸದಸ್ಯರು

ನವದೆಹಲಿ: ಅದಾನಿ ಸಮೂಹ ಸಂಸ್ಥೆಯ ಬಿಕ್ಕಟ್ಟನ್ನು ಸಂಸತ್ತಿಸ ಜಂಟಿ ಸದನ ಸಮಿತಿ ಅಥವಾ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಮತ್ತಿತರ ವಿಪಕ್ಷಗಳು ಗುರುವಾರ ಒತ್ತಾಯಿಸಿವೆ. 

ಸಾರ್ವಜನಿಕರ ಹಣಕ್ಕೆ ಸಂಬಂಧಿಸಿದ ವಿಷಯದ ಕುರಿತು ಜಂಟಿ ಸದನ ಸಮಿತಿ (ಜೆಪಿಸಿ) ಅಥವಾ ಸುಪ್ರೀಂ ಮೇಲ್ವಿಚಾರಣೆಯ ತನಿಖೆಯ ದೈನಂದಿನ ವರದಿಗೂ ವಿರೋಧ ಪಕ್ಷಗಳು  ಕರೆ ನೀಡಿವೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು. 

ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ಸಾರ್ವಜನಿಕರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು, ಅದಾನಿ ಸಮೂಹ ಸಂಸ್ಥೆಯ ಬಿಕ್ಕಟ್ಟಿನ ಬಗ್ಗೆ ಜಂಟಿ ಸದನ ಸಮಿತಿ (ಜೆಪಿಸಿ) ಅಥವಾ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ತನಿಖೆಯಾಗಬೇಕೆಂದು ನಾವು ಬಯಸುತ್ತೇವೆ. ಈ ವಿಷಯದ ತನಿಖೆ ಕುರಿತು ದೈನಂದಿನ ವರದಿಯಾಗಬೇಕು ಎಂದರು. 

ಇದಕ್ಕೂ ಮುನ್ನಾ ಹಲವು ವಿರೋಧ ಪಕ್ಷಗಳ ನಾಯಕರು ಸಂಸತ್ತಿನಲ್ಲಿ ಸಭೆ ನಡೆಸಿ ಉಭಯ ಸದನಗಳಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲು ನಿರ್ಧರಿಸಿದರು.

ಖರ್ಗೆ ಸೇರಿದಂತೆ ಹಲವು ಪ್ರತಿಪಕ್ಷಗಳ ಸದಸ್ಯರು ಅದಾನಿ ವಿಷಯದ ಬಗ್ಗೆ ಚರ್ಚಿಸಲು ನೋಟಿಸ್ ನೀಡಿದ್ದರು, ಆದರೆ ಅವುಗಳನ್ನು ಸಭಾಪತಿ ತಿರಸ್ಕರಿಸಿದ ನಂತರ ಪ್ರತಿಪಕ್ಷಗಳು ಗದ್ದಲ ಎಬ್ಬಿಸಿದ್ದರಿಂದ ಉಭಯ ಸದನಗಳನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.

ಇತ್ತೀಚಿನ ದಿನಗಳಲ್ಲಿ ಕೋಟ್ಯಂತರ ಭಾರತೀಯರ ಉಳಿತಾಯಕ್ಕೆ ಅಪಾಯ ತಂದೊಡ್ಡಿರುವ ಎಲ್‌ಐಸಿ, ಎಸ್‌ಬಿಐ ಮತ್ತು ಇತರ ಸಾರ್ವಜನಿಕ ಸಂಸ್ಥೆಗಳ ಬಲವಂತದ ಹೂಡಿಕೆಗಳ ತನಿಖೆಗೆ ಸರ್ಕಾರವು ಒಪ್ಪದ ಕಾರಣ ಸಂಸತ್ತಿನ ಉಭಯ ಸದನಗಳನ್ನು ಇಂದು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿದೆ ಎಂದು ಎಐಸಿಸಿ ಪ್ರಧಾನ  ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

ಜನರು ತಮ್ಮ ಹಣವನ್ನು ಅದಾನಿಗೆ ಸಾಲ ನೀಡಿರುವ ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಸಂಸ್ಥೆಗಳಲ್ಲಿ ಹೂಡಿಕೆ ಮಾಡಿರುವುದರಿಂದ ಜನರು ಭಯಭೀತರಾಗಿದ್ದಾರೆ ಎಂದು ಸಮಾಜವಾದಿ ಪಕ್ಷದ ರಾಮ್ ಗೋಪಾಲ್ ಯಾದವ್  
ಸುದ್ದಿಗಾರರಿಗೆ ತಿಳಿಸಿದ್ದಾರೆ. ರಾಜ್ಯಸಭೆಯಲ್ಲಿ ಒಂಬತ್ತು ಪಕ್ಷಗಳು ನಿಲುವಳಿ ಸೂಚನೆಗಳನ್ನು ನೀಡಿವೆ, ಆದರೆ ಅಧ್ಯಕ್ಷರು ನೋಟಿಸ್‌ಗಳು ಕ್ರಮಬದ್ಧವಾಗಿಲ್ಲ ಎಂದು ಹೇಳಿರುವುದಾಗಿ  ಭಾರತ್ ರಾಷ್ಟ್ರ ಸಮಿತಿಯ (ಬಿಆರ್‌ಎಸ್) ಕೇಶವ ರಾವ್ ತಿಳಿಸಿದರು. 

ನಿಯಮ 267 ರ ಅಡಿಯಲ್ಲಿ ವಿಷಯದ ಬಗ್ಗೆ ಚರ್ಚೆಗೆ ವಿರೋಧ ಪಕ್ಷದ ಬೇಡಿಕೆಯು ತರ್ಕಬದ್ಧವಾಗಿದ್ದು ಅದಕ್ಕೆ ಅವಕಾಶ ನೀಡಬೇಕು ಎಂದು ಟಿಎಂಸಿಯ ಶಾಂತನು ಸೇನ್ ಒತ್ತಾಯಿಸಿದ್ದಾರೆ. 

ಕೈಗಾರಿಕೋದ್ಯಮಿ ಗೌತಮ್ ಅದಾನಿ ಮತ್ತು ಅವರ ಕಂಪನಿ ದೇಶವನ್ನು ಲೂಟಿ ಮಾಡಿದೆ ಎಂದು ಆರೋಪಿಸಿದ ಸಿಪಿಎಂ ನಾಯಕ ಎಳಮರಮ್ ಕರೀಂ ಎಲ್‌ಐಸಿ ಮತ್ತು ಎಸ್‌ಬಿಐ ಹಣವು ಸರ್ಕಾರದ ಆಶ್ರಯದಲ್ಲಿದ್ದು, ಇದು ದೊಡ್ಡ ಹಗರಣ ಮತ್ತು ಸಾಮಾನ್ಯ ಜನರಿಗೆ ಜ್ವಲಂತ ಸಮಸ್ಯೆಯಾಗಿದೆ ಮತ್ತು ತನಿಖೆಗೆ ಅರ್ಹವಾಗಿದೆ ಎಂದು ಹೇಳಿದರು.

ಈ ಬೃಹತ್ ಹಗರಣದ ಬಗ್ಗೆ ಸರ್ಕಾರ ಏಕೆ ಮೌನವಾಗಿದೆ? ಎಂದು ಪ್ರಶ್ನಿಸಿದ  ಎಎಪಿ ಸಂಸದ ಸಂಜಯ್ ಸಿಂಗ್ , ಅದಾನಿ ಇದರ ಕಿಂಗ್ ಪಿನ್ ಎಂದು ಆರೋಪಿಸಿದರು. ಪ್ರತಿಪಕ್ಷಗಳ ಸಭೆಯಲ್ಲಿ ಶಿವಸೇನೆಯ (ಠಾಕ್ರೆ) ಪ್ರಿಯಾಂಕಾ ಚತುರ್ವೇದಿ ಮತ್ತು ಡಿಎಂಕೆ ನಾಯಕಿ ಕನಿಮೊಳಿ ಕೂಡ ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com