ಅದಾನಿ ವಿವಾದ: ಕಾಂಗ್ರೆಸ್ ನಾಳೆ ದೇಶಾದ್ಯಂತ ಪ್ರತಿಭಟನೆ
ಹಿಂಡೆನ್ಬರ್ಗ್-ಅದಾನಿ ವಿವಾದ ನಡುವೆ ಕಾಂಗ್ರೆಸ್ ಸೋಮವಾರ ಸಂಸತ್ತಿನಿಂದ ಬೀದಿಗಿಳಿದು ಪ್ರತಿಭಟನೆ ನಡೆಸಲಿದೆ. ಜೀವ ವಿಮಾ ನಿಗಮದ ಕಚೇರಿಗಳು ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗಳ ಮುಂದೆ ದೇಶಾದ್ಯಂತ ಪ್ರತಿಭಟನೆ ನಡೆಸಲು ಪಕ್ಷ ನಿರ್ಧರಿಸಿದೆ.
Published: 05th February 2023 07:59 PM | Last Updated: 05th February 2023 08:52 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಹಿಂಡೆನ್ಬರ್ಗ್-ಅದಾನಿ ವಿವಾದ ನಡುವೆ ಕಾಂಗ್ರೆಸ್ ಸೋಮವಾರ ಸಂಸತ್ತಿನಿಂದ ಬೀದಿಗಿಳಿದು ಪ್ರತಿಭಟನೆ ನಡೆಸಲಿದೆ. ಜೀವ ವಿಮಾ ನಿಗಮದ ಕಚೇರಿಗಳು ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗಳ ಮುಂದೆ ದೇಶಾದ್ಯಂತ ಪ್ರತಿಭಟನೆ ನಡೆಸಲು ಪಕ್ಷ ನಿರ್ಧರಿಸಿದೆ.
ರಾಷ್ಟ್ರ ರಾಜಧಾನಿಯ ಎಸ್ಬಿಐ ಕಚೇರಿ ಮತ್ತು ಪಾರ್ಲಿಮೆಂಟ್ ಪೊಲೀಸ್ ಠಾಣೆಯಲ್ಲಿರುವ ಎಲ್ಐಸಿ ಕಚೇರಿಯ ಹೊರಗೆ ಎನ್ಎಸ್ಯುಐ-ಯೂತ್ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ. ದೇಶಾದ್ಯಂತ ಕಾಂಗ್ರೆಸ್ ನಾಯಕರು ಎಸ್ಬಿಐ ಕಚೇರಿ ಮತ್ತು ಎಲ್ಐಸಿ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಲಿದ್ದು, ರಾಜ್ಯಗಳ ನಾಯಕರು ಇದರಲ್ಲಿ ಭಾಗವಹಿಸಲಿದ್ದಾರೆ. ಕಾಂಗ್ರೆಸ್ ಸಂಸದರು ಸೋಮವಾರ ಸಂಸತ್ ಭವನದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಿದ್ದಾರೆ.
ಅದಾನಿ ವಿಚಾರದಲ್ಲಿ ಕಾಂಗ್ರೆಸ್ಗೆ ಇತರ ವಿರೋಧ ಪಕ್ಷಗಳ ಬೆಂಬಲ ಸಿಗುತ್ತಿದೆಯಾದರೂ, ಸಭೆಗಳಲ್ಲಿ ಒಟ್ಟಾಗಿ ಕಾಣುವ ಭಾರತ ರಾಷ್ಟ್ರ ಸಮಿತಿ, ಆಮ್ ಆದ್ಮಿ ಪಕ್ಷ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷಗಳು ಕಾಂಗ್ರೆಸ್ ಸೇರುತ್ತವೆಯೇ ಎಂಬುದನ್ನು ಕಾದು ನೋಡಬೇಕು. ಆದಾಗ್ಯೂ, ಬಹುಜನ ಸಮಾಜ ಪಕ್ಷ ಮತ್ತು ಜನತಾದಳ-ಜಾತ್ಯತೀತ ಪಕ್ಷಗಳು ಈ ವಿಷಯದಲ್ಲಿ ಕಾಂಗ್ರೆಸ್ನಿಂದ ಅಂತರ ಕಾಯ್ದುಕೊಂಡಿವೆ.
ಸಾರ್ವಜನಿಕ ವಲಯದ ಬ್ಯಾಂಕ್ಗಳಾದ ಎಸ್ಬಿಐ ಮತ್ತು ಎಲ್ಐಸಿಯಲ್ಲಿ ಅದಾನಿ ಸಮೂಹದ ಹೂಡಿಕೆ ಮಧ್ಯಮ ವರ್ಗದ ಉಳಿತಾಯದ ಮೇಲೆ ದೊಡ್ಡ ಪರಿಣಾಮ ಬೀರಿದೆ ಎಂದು ಪ್ರತಿಪಕ್ಷಗಳು ವಾದಿಸುತ್ತಿವೆ. ಈ ವಿಷಯವನ್ನು ಸಂಸತ್ತಿನಲ್ಲಿ ಚರ್ಚಿಸಲು ಸರ್ಕಾರ ಅವಕಾಶ ನೀಡುತ್ತಿಲ್ಲ ಎಂದು ವಿರೋಧ ಪಕ್ಷದ ಸಂಸದರು ಹೇಳಿದ್ದಾರೆ.