ಜೋಧ್ಪುರ: ರಾಜಸ್ಥಾನ ಮತ್ತೊಂದು ಅದ್ಧೂರಿ ಮದುವೆಗೆ ಸಾಕ್ಷಿಯಾಗುತ್ತಿದ್ದು, ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಜುಬಿನ್ ಇರಾನಿ ಅವರ ಪುತ್ರಿ ಶಾನೆಲ್ ಅವರು ಅನಿವಾಸಿ ಭಾರತೀಯ ವಕೀಲ ಅರ್ಜುನ್ ಭಲ್ಲಾ ಅವರೊಂದಿಗೆ ಗುರುವಾರ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ನಿನ್ನೆಯಷ್ಟೇ ಬಾಲಿವುಡ್ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ನಟಿ ಕಿಯಾರಾ ಅಡ್ವಾಣಿ ಅವರು ರಾಜಸ್ಥಾನದ ಜೈಸಲ್ಮೇರ್ನಲ್ಲಿ ಅದ್ಧೂರಿಯಾಗಿ ವಿವಾಹವಾದರು. ಸೂರ್ಯಗಢ ಪ್ಯಾಲೆಸ್ ನಲ್ಲಿ ನಡೆದ ಸ್ಟಾರ್ ದಂಪತಿಯ ಮದುವೆಯಲ್ಲಿ ಕುಟುಂಬದವರು ಮತ್ತು ಆಪ್ತ ಸ್ನೇಹಿತರು ಮಾತ್ರ ಭಾಗವಹಿಸಿದ್ದರು.
ಜೋಧ್ಪುರ ಸಮೀಪದ ನಾಗೌರ್ ಜಿಲ್ಲೆಯ ಪ್ರಸಿದ್ಧ ಖಿಮ್ಸರ್ ಕೋಟೆಯಲ್ಲಿ ಶಾನೆಲ್ ಅವರು ಅರ್ಜುನ್ ಭಲ್ಲಾ ಅವರೊಂದಿಗೆ ನಾಳೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಸ್ಮೃತಿ ಇರಾನಿ ಪುತ್ರಿ ಶಾನೆಲ್ ಅವರು ಅನಿವಾಸಿ ಭಾರತೀಯ ಅರ್ಜುನ್ ಭಲ್ಲಾ ಅವರೊಂದಿಗೆ 2021 ರ ಡಿಸೆಂಬರ್ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಮಾಜಿ ರಾಜ್ಯ ಸಚಿವ ಗಜೇಂದ್ರ ಸಿಂಗ್ ಖಿಮ್ಸರ್ ಒಡೆತನದ 16ನೇ ಶತಮಾನದ ಕೋಟೆಯಲ್ಲಿ ಇಂದಿನಿಂದಲೇ ಮದುವೆ ಕಾರ್ಯಕ್ರಮಗಳು ಆರಂಭವಾಗಿದ್ದು, ಶಾನೆಲ್ ಜುಬಿನ್ ಮತ್ತು ಮದುಮಗ ಮಂಗಳವಾರ ಈಗಾಗಲೇ ಸ್ಥಳಕ್ಕೆ ತಲುಪಿದ್ದರೆ, ಸಂಸತ್ತಿನ ಅಧಿವೇಶನದ ಕಾರಣದಿಂದ ಸ್ಮೃತಿ ಇರಾನಿ ಅವರು ಇಂದು ಬೆಳಿಗ್ಗೆ ಜೋಧ್ಪುರಕ್ಕೆ ಆಗಮಿಸಿದ್ದಾರೆ.
ಈ ಅದ್ಧೂರಿ ವಿವಾಹ ಸಮಾರಂಭಕ್ಕೆ ಕೇವಲ 50 ಸದಸ್ಯರಿಗೆ ಮಾತ್ರ ಆಹ್ವಾನಿಸಲಾಗಿದೆ ಮತ್ತು ಅವರು ಎಲ್ಲರೂ ಕುಟುಂಬ ಸದಸ್ಯರು ಮತ್ತು ಅತ್ಯಂತ ಆತ್ಮೀಯರು ಎಂದು ಹೇಳಲಾಗುತ್ತಿದೆ.
Advertisement