ತೇಜಸ್ವಿ ಸೂರ್ಯ ಆಕಸ್ಮಿಕವಾಗಿ ಇಂಡಿಗೋ ವಿಮಾನದ ತುರ್ತು ಬಾಗಿಲು ತೆರೆದಿದ್ದರು: ಕೇಂದ್ರ

ಭಾರತೀಯ ಜನತಾ ಪಕ್ಷದ ಸಂಸದ ತೇಜಸ್ವಿ ಸೂರ್ಯ ಅವರು ಕಳೆದ ತಿಂಗಳು ಆಕಸ್ಮಿಕವಾಗಿ ಇಂಡಿಗೋ ವಿಮಾನದ ತುರ್ತು ಬಾಗಿಲನ್ನು ತೆರೆದಿದ್ದರು. ಆದರೆ ಅವರು ಯಾವುದೇ ನಿಯಮ ಉಲ್ಲಂಘಿಸಿದ್ದು ಕಂಡುಬಂದಿಲ್ಲ...
ತೇಜಸ್ವಿ ಸೂರ್ಯ
ತೇಜಸ್ವಿ ಸೂರ್ಯ

ನವದೆಹಲಿ: ಭಾರತೀಯ ಜನತಾ ಪಕ್ಷದ ಸಂಸದ ತೇಜಸ್ವಿ ಸೂರ್ಯ ಅವರು ಕಳೆದ ತಿಂಗಳು ಆಕಸ್ಮಿಕವಾಗಿ ಇಂಡಿಗೋ ವಿಮಾನದ ತುರ್ತು ಬಾಗಿಲನ್ನು ತೆರೆದಿದ್ದರು. ಆದರೆ ಅವರು ಯಾವುದೇ ನಿಯಮ ಉಲ್ಲಂಘಿಸಿದ್ದು ಕಂಡುಬಂದಿಲ್ಲ ಎಂದು ವಿಮಾನಯಾನ ಸಂಸ್ಥೆ ಹೇಳಿರುವುದಾಗಿ ನಾಗರಿಕ ವಿಮಾನಯಾನ ಸಚಿವಾಲಯ ಗುರುವಾರ ತಿಳಿಸಿದೆ.

ಕಳೆದ ವರ್ಷ ಡಿಸೆಂಬರ್ 10 ರಂದು ಚೆನ್ನೈ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆಯ ಬಗ್ಗೆ ಆಡಳಿತಾರೂಢ ಬಿಜೆಪಿಯ ಬೆಂಗಳೂರು ದಕ್ಷಿಣ ಸಂಸದ ಸೂರ್ಯ ಅವರ ವಿರುದ್ಧ ಕಾಂಗ್ರೆಸ್‌ ತೀವ್ರ ವಾಗ್ದಾಳಿ ನಡೆಸಿತ್ತು.

ಚೆನ್ನೈನಲ್ಲಿ ವಿಮಾನದ ತುರ್ತು ಬಾಗಿಲನ್ನು ಅಕ್ರಮವಾಗಿ ತೆರೆದ ಪ್ರಯಾಣಿಕನನ್ನು ವಿಮಾನಯಾನ ನಿಯಂತ್ರಕ ಡಿಜಿಸಿಎ ಮೂಲಕ ಸರ್ಕಾರ ಗುರುತಿಸಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ವಿ ಕೆ ಸಿಂಗ್ ಅವರು ಗುರುತಿಸಿದೆ ಎಂದು ಉತ್ತರಿಸಿದರು.

"ಇಂಟರ್‌ಗ್ಲೋಬ್ ಏವಿಯೇಷನ್ ಲಿಮಿಟೆಡ್ ಸಲ್ಲಿಸಿದ ವರದಿಯ ಪ್ರಕಾರ, ಘಟನೆಯಲ್ಲಿ ಆರೋಪಿಸಲಾದ ಪ್ರಯಾಣಿಕರ ಹೆಸರು ತೇಜಸ್ವಿ ಸೂರ್ಯ. ಅವರು ಡಿಸೆಂಬರ್ 10, 2022 ರಂದು ಚೆನ್ನೈ ವಿಮಾನ ನಿಲ್ದಾಣದಲ್ಲಿ 6E-7339(ಚೆನ್ನೈನಿಂದ ತಿರುಚಿರಾಪಳ್ಳಿ) ವಿಮಾನವನ್ನು ಹತ್ತಿದ್ದರು.

"ಇಂಟರ್ ಗ್ಲೋಬ್ ಏವಿಯೇಷನ್ ಲಿಮಿಟೆಡ್ ಸ್ಪಷ್ಟಪಡಿಸಿದಂತೆ ತೇಜಸ್ವಿ ಸೂರ್ಯ ಆಕಸ್ಮಿಕವಾಗಿ ತುರ್ತು ಬಾಗಿಲು ತೆರೆದರು. ಇದು ಉದ್ದೇಶಪೂರ್ವಕ ಕ್ರಮವಲ್ಲ ಮತ್ತು ಇಂಟರ್ ಗ್ಲೋಬ್ ಏವಿಯೇಷನ್ ಪ್ರಕಾರ, ಪ್ರಯಾಣಿಕ ಯಾವುದೇ ನಿಯಮವನ್ನು ಉಲ್ಲಂಘಿಸಿರುವುದು ಕಂಡುಬಂದಿಲ್ಲ" ಎಂದು ಸಿಂಗ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಬಿಜೆಪಿ ಸಂಸದನ ವಿರುದ್ಧ ಡಿಜಿಸಿಎ ಕ್ರಮ ಕೈಗೊಂಡಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, 'ಘಟನೆಗಳ ಅಧಿಸೂಚನೆ ಮತ್ತು ಅದರ ತನಿಖೆ'ಗೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ಅಗತ್ಯತೆಗಳ ಪ್ರಕಾರ, ಈ ಘಟನೆಯು 'ವರದಿ ಮಾಡಬಹುದಾದ ಘಟನೆ' ವರ್ಗಕ್ಕೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com