ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಕ್ಕೆ ದಲಿತ ಯುವಕನನ್ನು ಒತ್ತೆಯಾಳಾಗಿ ಇಟ್ಟುಕೊಂಡು ಅಮಾನುಷವಾಗಿ ಥಳಿತ

ಉತ್ತರಕಾಶಿಯ ಸಾಲ್ರಾ ಗ್ರಾಮದ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಹೋಗಿದ್ದ ದಲಿತ ಯುವಕನನ್ನು ಐವರು ಮೇಲ್ಜಾತಿಯ ವ್ಯಕ್ತಿಗಳು ಒತ್ತೆಯಾಳಾಗಿಟ್ಟುಕೊಂಡು ರಾತ್ರೋರಾತ್ರಿ ದೊಣ್ಣೆ ಮತ್ತು ಕೆಂಡಗಳಿಂದ ಥಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಉತ್ತರಕಾಶಿ: ಉತ್ತರಕಾಶಿಯ ಸಾಲ್ರಾ ಗ್ರಾಮದ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಹೋಗಿದ್ದ ದಲಿತ ಯುವಕನನ್ನು ಐವರು ಮೇಲ್ಜಾತಿಯ ವ್ಯಕ್ತಿಗಳು ಒತ್ತೆಯಾಳಾಗಿಟ್ಟುಕೊಂಡು ರಾತ್ರೋರಾತ್ರಿ ದೊಣ್ಣೆಗಳಿಂದ ಥಳಿಸಿದ್ದಾರೆ ಮತ್ತು ಕೆಂಡದಿಂದ ಸುಟ್ಟಿದ್ದಾರೆ.

ಸಂತ್ರಸ್ತ ಮೋರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ತಕ್ಷಣವೇ ಐವರ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಮತ್ತು ಇತರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ, ಆದರೆ ಇದುವರೆಗೆ ಯಾರನ್ನೂ ಬಂಧಿಸಿಲ್ಲ.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಜೊತೆಗೆ ಮಾತನಾಡಿದ ಉತ್ತರಕಾಶಿ ಪೊಲೀಸ್ ಅಧೀಕ್ಷಕ ಅರ್ಪಣ್ ಯದುವಂಶಿ, 'ವಿಷಯದ ಗಂಭೀರತೆಯನ್ನು ಪರಿಗಣಿಸಿ, ಸರ್ಕಲ್ ಅಧಿಕಾರಿ (ಕಾರ್ಯಾಚರಣೆ) ಪ್ರಶಾಂತ್ ಕುಮಾರ್ ಅವರು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದರು.

ಈ ಗಂಭೀರ ಕೃತ್ಯದ ಹಿಂದೆ ಮೇಲ್ಜಾತಿ-ದಲಿತ ದೃಷ್ಟಿಕೋನದ ಹೊರತುಪಡಿಸಿ ಇನ್ನೇನಾದರೂ ಕಾರಣವಿರಬಹುದೇ ಎಂಬ ಬಗ್ಗೆ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು,‘ಆರೋಪಿಗಳ ಬಂಧನದ ನಂತರವೇ ಈ ಕೃತ್ಯದ ಹಿಂದಿರುವ ವಾಸ್ತವ ಮತ್ತು ಕಾರಣ ಗೊತ್ತಾಗಲಿದೆ ಎಂದು ತಿಳಿಸಿದರು.

ಪೊಲೀಸ್ ವರದಿಯ ಪ್ರಕಾರ, ಬನೋಲ್ ಗ್ರಾಮದ ನಿವಾಸಿ ಅತ್ತರ್ ಲಾಲ್ ಅವರ ಪುತ್ರ ಆಯುಷ್ (22) ಎಂಬಾತ ಕೊಲೆ ಯತ್ನ ಸೇರಿದಂತೆ ವಿವಿಧ ಆರೋಪಗಳ ಮೇಲೆ ಮೋರಿ ಪೊಲೀಸ್ ಠಾಣೆಯಲ್ಲಿ ಐವರು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

ಜನವರಿ 9 ರಂದು ಸಂಜೆ 7 ಗಂಟೆಗೆ ಗ್ರಾಮದ ಕೌನ್ವಾಲ್ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಹೋಗಿದ್ದೆ. ದೇವಸ್ಥಾನದಲ್ಲಿದ್ದ ಕೆಲವರು ಏಕಾಏಕಿ ತನ್ನ ಮೇಲೆ ಹಲ್ಲೆ ನಡೆಸಿದರು. ನಂತರ ಅಲ್ಲಿಯೇ ನನ್ನನ್ನು ಕಟ್ಟಿಹಾಕಿದರು. ಬಳಿಕ ಗ್ರಾಮದ ಮೇಲ್ಜಾತಿಯ ಐವರು ವ್ಯಕ್ತಿಗಳು ನನ್ನ ಮೇಲೆ ಹಲ್ಲೆ ಮತ್ತು ಕೆಂಡದಿಂದ ನನ್ನನ್ನು ಸುಟ್ಟರು. ನಾನು ಮೂರ್ಛೆ ಹೋದೆ ಎಂದು ಆಯುಷ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಜನವರಿ 10ರಂದು ಬೆಳಗ್ಗೆ ಪ್ರಜ್ಞೆ ಬಂದಾಗ ನಾನು ಬೆತ್ತಲೆಯಾಗಿದ್ದೆ. ಬಳಿಕ ದೇವಸ್ಥಾನದ ಆವರಣದಿಂದ ತಪ್ಪಿಸಿಕೊಂಡು ಬಂದೆ ಎಂದು ಆಯುಷ್ ಪೊಲೀಸರಿಗೆ ತಿಳಿಸಿದ್ದಾರೆ. ಸಂತ್ರಸ್ತನ ದೇಹದ ತುಂಬ ಹಲ್ಲೆ ಮತ್ತು ಸುಟ್ಟ ಗಾಯಗಳ ಗುರುತುಗಳನ್ನು ಹೊಂದಿದೆ.

ಹಿರಿಯ ಸಬ್‌ಇನ್ಸ್‌ಪೆಕ್ಟರ್ ಬ್ರಿಜ್‌ಪಾಲ್ ಸಿಂಗ್ ಮಾನತಾಡಿ, ಪೊಲೀಸರು ಗ್ರಾಮದ ಐವರು ಆರೋಪಿಗಳ ವಿರುದ್ಧ ಸೆಕ್ಷನ್ 147, 323, 504 ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯ ಅಡಿಯಲ್ಲಿ ಆರೋಪಗಳನ್ನು ದಾಖಲಿಸಿದ್ದಾರೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com