ತ್ರಿವಳಿ ರೈಲು ಅಪಘಾತ: ಮೃತರ ಸಂಖ್ಯೆ 288ಕ್ಕೆ ಏರಿಕೆ, ಒಡಿಶಾ ಸರಕಾರದ ಪರಿಷ್ಕೃತ ಮಾಹಿತಿ
ಒಡಿಶಾದ ಬಾಲಸೋರ್ ನಲ್ಲಿ ಜೂನ್ 2 ರಂದು ಸಂಭವಿಸಿದ ತ್ರಿವಳಿ ರೈಲು ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 288ಕ್ಕೆ ಏರಿಕೆಯಾಗಿದೆ. ಒಡಿಶಾ ಸರ್ಕಾರದ ಅಧಿಕೃತ ಪರಿಷ್ಕೃತ ಮಾಹಿತಿಯಲ್ಲಿ ಈ ವಿಷಯ ದೃಢಪಡಿಸಲಾಗಿದೆ.
Published: 06th June 2023 10:39 PM | Last Updated: 06th June 2023 10:41 PM | A+A A-

ರೈಲು ದುರಂತದ ಮೃತದೇಹಗಳ ಚಿತ್ರ
ಬಾಲಾಸೋರ್: ಒಡಿಶಾದ ಬಾಲಸೋರ್ ನಲ್ಲಿ ಜೂನ್ 2 ರಂದು ಸಂಭವಿಸಿದ ತ್ರಿವಳಿ ರೈಲು ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 288ಕ್ಕೆ ಏರಿಕೆಯಾಗಿದೆ. ಒಡಿಶಾ ಸರ್ಕಾರದ ಅಧಿಕೃತ ಪರಿಷ್ಕೃತ ಮಾಹಿತಿಯಲ್ಲಿ ಈ ವಿಷಯ ದೃಢಪಡಿಸಲಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯ ಕಾರ್ಯದರ್ಶಿ ಪಿಕೆ ಜಿನಾ, ಸೋಮವಾರದವರೆಗೂ 275 ಜನರ ಸಾವಿನ ಬಗ್ಗೆ ದೃಢಪಟ್ಟಿತ್ತು. ಮೃತದೇಹಗಳ ಪರಿಶೀಲನೆ ನಂತರ ಈ ಸಂಖ್ಯೆ 288ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದರು.
ಒಟ್ಟು 288 ಮೃತದೇಹಗಳ ಪೈಕಿ ಇದುವರೆಗೆ 205 ಶವಗಳನ್ನು ಗುರುತಿಸಿ ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ. ಉಳಿದ 83 ಶವಗಳನ್ನು ಗುರುತಿಸಲು ಏಮ್ಸ್-ಭುವನೇಶ್ವರ ಮತ್ತು ಇತರ ಆಸ್ಪತ್ರೆಗಳಲ್ಲಿ ಇಡಲಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಒಡಿಶಾ ರೈಲು ದುರಂತ: 40 ಪ್ರಯಾಣಿಕರು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿರಬಹುದು
ಸರ್ಕಾರ ತೆರೆದಿರುವ ಸಹಾಯವಾಣಿ ಸಂಖ್ಯೆಗಳಲ್ಲಿ ಹಲವರ ಕುರಿತು ವಿಚಾರಿಸಲಾಗಿದೆ. ಎಲ್ಲಾ ದೇಹಗಳನ್ನು ಗುರುತಿಸಲಾಗುವುದು ಎಂಬ ಆಶಾ ಭಾವನೆ ಹೊಂದಿದ್ದೇವೆ. ಗಾಯಾಳುಗಳ ಚಿಕಿತ್ಸಾ ವೆಚ್ಚ ಮತ್ತು ಮೃತದೇಹಗಳನ್ನು ಆಯಾ ಸ್ಥಳಗಳಿಗೆ ಸಾಗಿಸುವ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸುತ್ತಿದೆ ಎಂದು ಅವರು ಹೇಳಿದರು.
ಈ ಮಧ್ಯೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಒಡಿಶಾದ 39 ಮೃತ ವ್ಯಕ್ತಿಗಳ ಕುಟುಂಬಗಳಿಗೆ 1.95 ಕೋಟಿ ರೂಪಾಯಿ ಪರಿಹಾರ ಮಂಜೂರು ಮಾಡಿದ್ದಾರೆ.