ಶಾಲಾ ಸಮವಸ್ತ್ರ ವಿವಾದ: ಶಿಕ್ಷಣಾಧಿಕಾರಿ ಮೇಲೆ ಶಾಯಿ ಎರಚಿದ್ದ ಮೂವರು ಬಿಜೆಪಿ ಪದಾಧಿಕಾರಿಗಳ ವಿರುದ್ಧ ಪ್ರಕರಣ
ದಾಮೋಹ್: ಖಾಸಗಿ ಶಾಲೆಯೊಂದರ ಸಮವಸ್ತ್ರ ವಿವಾದಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದ ದಾಮೋಹ್ನ ಜಿಲ್ಲಾ ಶಿಕ್ಷಣಾಧಿಕಾರಿ (ಡಿಇಒ) ಮೇಲೆ ಶಾಯಿ ಎರಚಿದ್ದ ಮೂವರು ಬಿಜೆಪಿ ಪದಾಧಿಕಾರಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಮಂಗಳವಾರ ಮಧ್ಯಾಹ್ನ ಡಿಇಒ ಎಸ್.ಕೆ. ಮಿಶ್ರಾ ಅವರ ವಾಹನ ಕಚೇರಿ ಆವರಣದಿಂದ ಹೊರ ಹೋಗುತ್ತಿದ್ದಾಗ ಸಮವಸ್ತ್ರವಾಗಿ ಹೆಡ್ ಸ್ಕಾರ್ಫ್ ಬಳಸುತ್ತಿರುವ ಖಾಸಗಿ ಶಾಲೆಯೊಂದರ ಪರವಾಗಿದ್ದಾರೆ ಎಂದು ಆರೋಪಿಸಿ ಅವರ ಮೇಲೆ ಇಂಕ್ ಅನ್ನು ಎರಚಿರುವ ಘಟನೆ ನಡೆದಿದೆ.
ಬಿಜೆಪಿಯ ದಾಮೋಹ್ ಜಿಲ್ಲಾ ಉಪಾಧ್ಯಕ್ಷ ಅಮಿತ್ ಬಜಾಜ್ ಅವರು ಶಾಯಿ ದಾಳಿಯ ಹೊಣೆ ಹೊತ್ತುಕೊಂಡಿದ್ದರು. ಘಟನೆಯನ್ನು ಮಧ್ಯಪ್ರದೇಶ ಬಿಜೆಪಿ ಘಟಕದ ಅಧ್ಯಕ್ಷ ವಿಡಿ ಶರ್ಮಾ ಖಂಡಿಸಿದ್ದಾರೆ.
ಹಿಂದೂ ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ವಿದ್ಯಾರ್ಥಿನಿಯರು ಸಮವಸ್ತ್ರದ ಭಾಗವಾಗಿ ಹಿಜಾಬ್ನಂತೆ ಕಾಣುವ ಸ್ಕಾರ್ಫ್ಗಳನ್ನು ಧರಿಸಿರುವ ಪೋಸ್ಟರ್ನ ವಿವಾದದ ನಂತರ ರಾಜ್ಯ ಶಿಕ್ಷಣ ಇಲಾಖೆ ಕಳೆದ ವಾರ ಗಂಗಾ ಜಮುನಾ ಹೈಯರ್ ಸೆಕೆಂಡರಿ ಶಾಲೆಯ ಮಾನ್ಯತೆಯನ್ನು ಅಮಾನತುಗೊಳಿಸಿದೆ.
ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳನ್ನು ಹಿಜಾಬ್ ಧರಿಸಿ ನಮಾಜ್ ಮಾಡುವಂತೆ ಒತ್ತಾಯಿಸಲಾಗುತ್ತಿದೆ ಎಂದು ಶಾಲೆಯ ಒಂದೆರಡು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಆರಂಭದಲ್ಲಿ ಡಿಇಒ ಶಾಲೆಗೆ ಕ್ಲೀನ್ ಚಿಟ್ ನೀಡಿದ್ದರು. ಆದರೆ, ನಂತರ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ನಿರ್ದೇಶನದ ಮೇರೆಗೆ ಜಿಲ್ಲಾಧಿಕಾರಿಗಳು ತನಿಖಾ ಸಮಿತಿಯನ್ನು ರಚಿಸಿದರು.
ಡಿಇಒ ಮೇಲೆ ಶಾಯಿ ಎಸೆದ ನಂತರ, ಬಜಾಜ್ ಮಿಶ್ರಾ ಶಾಲೆಯಲ್ಲಿ ಅಕ್ರಮ ಚಟುವಟಿಕೆಗಳ ಬಗ್ಗೆ ತಿಳಿದಿದ್ದರೂ ಸಮಸ್ಯೆಯನ್ನು ಹತ್ತಿಕ್ಕಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದರು.
ಘಟನೆ ನಂತರ, ಜಿಲ್ಲಾ ಬಿಜೆಪಿ ಮುಖ್ಯಸ್ಥ ಪ್ರೀತಮ್ ಸಿಂಗ್ ಲೋಧಿ ಅವರು ಬಜಾಜ್, ಸ್ಥಳೀಯ ಕಾರ್ಯಕಾರಿ ಮಾಂಟಿ ರೈಕ್ವಾರ್ ಮತ್ತು ಅವರ ಭಾಗಿಯಾಗಿದ್ದಕ್ಕಾಗಿ ಇನ್ನೊಬ್ಬ ನಾಯಕನಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ.
ಡಿಇಒ ಮಿಶ್ರಾ ಅವರು ನೀಡಿದ ದೂರಿನ ಮೇರೆಗೆ ಅಮಿತ್ ಬಜಾಜ್, ಮಾಂಟಿ ರೈಕ್ವಾರ್ ಮತ್ತು ಸಂದೀಪ್ ಶರ್ಮಾ ವಿರುದ್ಧ ಸರ್ಕಾರಿ ಅಧಿಕಾರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಮತ್ತು ವ್ಯಕ್ತಿಯನ್ನು ಅವಮಾನಿಸುವ ಉದ್ದೇಶದಿಂದ ಹಲ್ಲೆ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಕೇಶ್ ಕುಮಾರ್ ಸಿಂಗ್ ಬುಧವಾರ ತಿಳಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿದ ಮಿಶ್ರಾ, ಬಜಾಜ್ ಗುತ್ತಿಗೆದಾರರಾಗಿದ್ದು, ಶಾಲೆಯ ನಿರ್ವಹಣಾ ಕಾರ್ಯಕ್ಕೆ ಸಂಬಂಧಿಸಿದ ಅವರ ಬಿಲ್ ಬಾಕಿ ಉಳಿದಿದೆ ಮತ್ತು ನಿರ್ವಹಣಾ ಕಾರ್ಯಕ್ಕೆ ಮೀಸಲಾದ ಹಣವು ಲ್ಯಾಪ್ಸ್ ಆಗಿದೆ. ಇದು ಅವರ ಕೋಪಕ್ಕೆ ಕಾರಣವಾಯಿತು. ಮಿಶ್ರಾ ಅವರು ಶಾಲೆಯ ಸಮಸ್ಯೆಯ ಬಗ್ಗೆ ಯಾವುದೇ ವಿಚಾರಣೆ ನಡೆಸಿಲ್ಲ ಮತ್ತು ಅವರು ಆರೋಪಿಸಿದಂತೆ ನೇರವಾಗಿ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ