ಪಾಟ್ನಾ: ಕೇಂದ್ರದಲ್ಲಿರುವ ಈ ಸರ್ವಾಧಿಕಾರಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಮುಂದೆ ಚುನಾವಣೆಯೇ ಇರುವುದಿಲ್ಲ ಅಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
2024 ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ವಿಪಕ್ಷಗಳ ಸಭೆಯಲ್ಲಿ ಮಮತಾ ಬ್ಯಾನರ್ಜಿ ಭಾಗಿಯಾದ ಬಳಿಕ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಾವು ಒಗ್ಗಟ್ಟಿನಿಂದ ಇದ್ದೇವೆ, ನಾವು ಒಗ್ಗಟ್ಟಿನಿಂದ ಹೋರಾಡುತ್ತೇವೆ. ನಮ್ಮನ್ನು ವಿಪಕ್ಷವೆಂದು ಕರೆಯಬೇಡಿ, ನಾವು ದೇಶಭಕ್ತರು ಹಾಗೂ ಭಾರತಮಾತೆಯನ್ನು ಪ್ರೀತಿಸುತ್ತೇವೆ. ಮಣಿಪುರ ಹೊತ್ತಿ ಉರಿದಾಗ ನಮಗೂ ನೋವಾಗುತ್ತದೆ. ಬಿಜೆಪಿ ಸರ್ಕಾರವನ್ನು ಸರ್ವಾಧಿಕಾರಿ ಧೋರಣೆಯಿಂದ ನಡೆಸುತ್ತಿದೆ ಎಂದು ಬ್ಯಾನರ್ಜಿ ಹೇಳಿದ್ದಾರೆ.
ಮೊದಲ ವಿಪಕ್ಷದ ಸಭೆ ಪಾಟ್ನಾದಲ್ಲೇ ಆಯೋಜಿಸಲಾಗಿತ್ತು. ಪಾಟ್ನಾದಲ್ಲಿ ಏನು ಪ್ರಾರಂಭವಾಗುತ್ತದೆಯೋ ಅದು ಸಾರ್ವಜನಿಕ ಚಳುವಳಿಯ ರೂಪವನ್ನು ಪಡೆದುಕೊಳ್ಳಲಿದೆ ಎಂದು ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ.
ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಮತ್ತು ಬಿಜೆಪಿ ವಿರುದ್ಧ ಒಗ್ಗಟ್ಟಿನಿಂದ ಹೋರಾಡುತ್ತೇವೆ ಎಂದು ನಾವು ನಿರ್ಧರಿಸಿದ್ದೇವೆ ಮತ್ತು "ಬಿಜೆಪಿ ಇತಿಹಾಸವನ್ನು ಬದಲಾಯಿಸಲು ಬಯಸುತ್ತದೆ, ಆದರೆ ಇತಿಹಾಸ ಉಳಿಯುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ" ಎಂದು ಬ್ಯಾನರ್ಜಿ ಹೇಳಿದ್ದಾರೆ.
ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಮತ್ತು ಪಕ್ಷದ ಇತರ ನಾಯಕರೊಂದಿಗೆ ಬಂದಿದ್ದ ಬ್ಯಾನರ್ಜಿ ಪತ್ರಿಕಾಗೋಷ್ಠಿಯಲ್ಲಿ, ಹಲವಾರು ಮುಖ್ಯಮಂತ್ರಿಗಳು ಭಾಗವಹಿಸಿದ್ದ ಈ ಸಭೆ ಉತ್ತಮವಾಗಿತ್ತು ಎಂದು ಹೇಳಿದ್ದಾರೆ.
ಬಿಜೆಪಿ ಸರ್ಕಾರ ಮಾಡಿದ 'ದೌರ್ಜನ್ಯಗಳು' "ಭಯಾನಕ" ಎಂದಿರುವ ಅವರು, ಆಡಳಿತ ತಮ್ಮ ವಿರುದ್ಧ ಮಾತನಾಡುವ ವಿರೋಧ ಪಕ್ಷದ ನಾಯಕರ ಹಿಂದೆ ಚುಪಾ ರುಸ್ತುಮ್ ರೀತಿಯಲ್ಲಿ ಸಿಬಿಐ, ಇಡಿಯನ್ನು ಬಿಟ್ಟಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
Advertisement