ಭೋಪಾಲ್-ಉಜ್ಜಯಿನಿ ರೈಲು ಸ್ಫೋಟ ಪ್ರಕರಣ: 7 ಅಪರಾಧಿಗಳಿಗೆ ಮರಣ ದಂಡನೆ
ಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯಲ್ಲಿ ರೈಲು ಸ್ಫೋಟ ಪ್ರಕರಣದಲ್ಲಿ ಉತ್ತರ ಪ್ರದೇಶದ ವಿಶೇಷ ಎನ್ಐಎ ಕೋರ್ಟ್ ನ ತೀರ್ಪು ಇಂದು ಹೊರಬಿದ್ದಿದ್ದು ಎಂಟು ಅಪರಾಧಿಗಳ ಪೈಕಿ ಏಳು ಮಂದಿಗೆ ಮರಣದಂಡನೆ ವಿಧಿಸಲಾಗಿದ್ದು, ಒಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
Published: 01st March 2023 12:46 AM | Last Updated: 01st March 2023 03:08 PM | A+A A-

ರೈಲು ಸ್ಫೋಟ ಪ್ರಕರಣ
ಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯಲ್ಲಿ ರೈಲು ಸ್ಫೋಟ ಪ್ರಕರಣದಲ್ಲಿ ಉತ್ತರ ಪ್ರದೇಶದ ವಿಶೇಷ ಎನ್ಐಎ ಕೋರ್ಟ್ ನ ತೀರ್ಪು ಇಂದು ಹೊರಬಿದ್ದಿದ್ದು ಎಂಟು ಅಪರಾಧಿಗಳ ಪೈಕಿ ಏಳು ಮಂದಿಗೆ ಮರಣದಂಡನೆ ವಿಧಿಸಲಾಗಿದ್ದು, ಒಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಆರು ವರ್ಷಗಳ ಹಿಂದೆ ಶಾಜಾಪುರ ಸಮೀಪದ ಜಬ್ಡಿ ರೈಲು ನಿಲ್ದಾಣದಲ್ಲಿ ಭೋಪಾಲ್-ಉಜ್ಜಯಿನಿ ಪ್ಯಾಸೆಂಜರ್ ರೈಲಿನಲ್ಲಿ ಸ್ಫೋಟ ಸಂಭವಿಸಿತ್ತು. ಇದರಲ್ಲಿ ಒಂಬತ್ತು ಮಂದಿ ಗಾಯಗೊಂಡಿದ್ದರು.
ಮಾಹಿತಿಯ ಪ್ರಕಾರ, ಆರು ವರ್ಷಗಳ ಹಿಂದೆ ಮಧ್ಯಪ್ರದೇಶದ ಶಾಜಾಪುರ ಬಳಿಯ ಜಬ್ರಿ ರೈಲು ನಿಲ್ದಾಣದಲ್ಲಿ ಬೆಳಿಗ್ಗೆ 9.38ಕ್ಕೆ ಭೋಪಾಲ್-ಉಜ್ಜಯಿನಿ ಪ್ಯಾಸೆಂಜರ್ ರೈಲಿನಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಈ ಘಟನೆಯಲ್ಲಿ 9 ಮಂದಿ ಪ್ರಯಾಣಿಕರು ಗಾಯಗೊಂಡಿದ್ದು, ರೈಲಿನಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಜನರು ರೈಲಿನಿಂದ ಜಿಗಿದಿದ್ದು, ಅನೇಕ ಪ್ರಯಾಣಿಕರು ಗಾಯಗೊಂಡಿದ್ದರು. ಈ ಘಟನೆಯ ತನಿಖೆಯನ್ನು ಎನ್ಐಎಗೆ ವಹಿಸಲಾಗಿತ್ತು.
ಈ ಪ್ರಕರಣ ವಿಚಾರಣೆ ಲಖನೌದ NIA ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ಕಳೆದ ಶುಕ್ರವಾರವೇ, ಎನ್ಐಎ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ವಿವೇಕಾನಂದ ಶರಣ್ ಪಾಂಡೆ ಅವರು ಎಲ್ಲಾ ಎಂಟು ಆರೋಪಿಗಳನ್ನು ದೋಷಿ ಎಂದು ಘೋಷಿಸಿದ್ದು ಶಿಕ್ಷೆ ಪ್ರಮಾಣವನ್ನು ಇಂದಿಗೆ ಕಾಯ್ದಿರಿಸಲಾಗಿತ್ತು. ಅಪರಾಧಿಗಳನ್ನು ಮೊಹಮ್ಮದ್ ಫೈಸಲ್, ಗೌಸ್ ಮೊಹಮ್ಮದ್, ಅಜರ್, ಅತೀಫ್ ಮುಜಾಫರ್, ಡ್ಯಾನಿಶ್, ಮೀರ್ ಹುಸೇನ್, ಆಸಿಫ್, ಇಕ್ಬಾಲ್ ಮತ್ತು ಅತೀಫ್ ಇರಾನಿ ಸೇರಿದ್ದಾರೆ.
ಎನ್ಕೌಂಟರ್ನಲ್ಲಿ ಓರ್ವ ಭಯೋತ್ಪಾದಕನ ಹತ್ಯೆ
ಎಲ್ಲಾ ಆರೋಪಿಗಳು ದೇಶದ ವಿರುದ್ಧ ಭಯೋತ್ಪಾದನೆ ನಡೆಸುತ್ತಿದ್ದಾರೆ. ಭಯೋತ್ಪಾದಕ ಚಟುವಟಿಕೆಗಳಿಗೆ ನಿಧಿ ಸಂಗ್ರಹಿಸಿದ್ದಾರೆ. ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಎಲ್ಲಾ ಆರೋಪಿಗಳು ಐಎಸ್ನ ಖೊರಾಸನ್ ಮಾಡ್ಯೂಲ್ನೊಂದಿಗೆ ಸಂಬಂಧ ಹೊಂದಿದ್ದರು. ಘಟನೆಯ ನಂತರ ಉತ್ತರ ಪ್ರದೇಶದ ಎಟಿಎಸ್ ಕೂಡ ಪ್ರಕರಣ ದಾಖಲಿಸಿತ್ತು. ಲಕ್ನೋದ ಕಾಕೋರಿಯಲ್ಲಿ ನಡೆದ ಎನ್ಕೌಂಟರ್ನಲ್ಲಿ ಸೈಫುಲ್ಲಾ ಅವರ ಸಹಚರರಲ್ಲಿ ಓರ್ವನನ್ನು ಹತ್ಯೆ ಮಾಡಲಾಗಿತ್ತು. ಘಟನೆ ನಡೆದ ಕೆಲವೇ ಗಂಟೆಗಳ ನಂತರ ಮಧ್ಯಪ್ರದೇಶದ ಪಿಪಾರಿಯಾದಲ್ಲಿ ಮೂವರು ಭಯೋತ್ಪಾದಕರನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ವಿಚಾರಣೆಯ ಆಧಾರದ ಮೇಲೆ ಉತ್ತರ ಪ್ರದೇಶದಿಂದ ಗೌಸ್ ಮೊಹಮ್ಮದ್ ಖಾನ್ ನನ್ನು ಬಂಧಿಸಲಾಗಿತ್ತು. ಉತ್ತರ ಪ್ರದೇಶದ ಎಟಿಎಸ್ ಕೂಡ ಪ್ರಕರಣ ದಾಖಲಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿತ್ತು. ಇದೀಗ ಈ ವಿಚಾರದಲ್ಲಿ ಇಂದು ತೀರ್ಪು ಹೊರಬಿದ್ದಿದೆ. ಎಂಟು ಅಪರಾಧಿಗಳ ಪೈಕಿ ಏಳು ಮಂದಿಗೆ ಮರಣದಂಡನೆ ಮತ್ತು ಒಬ್ಬ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.