ಪಾಟ್ನಾ: ಕಳೆದ ವಾರ ದೆಹಲಿಯ ನಮ್ಮ ಮನೆಯ ಮೇಲೆ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು "ಅರ್ಧ ಗಂಟೆಯಲ್ಲಿ" ಶೋಧ ಕಾರ್ಯ ಮುಗಿಸಿದ್ದರು. ಆದರೆ "ಮೇಲಿನಿಂದ ಆದೇಶ" ಬರುವುದನ್ನೇ ಕಾಯುತ್ತಿದ್ದ ಅಧಿಕಾರಿಗಳು ಗಂಟೆಗಟ್ಟಲೆ ನಿವಾಸದಲ್ಲೇ ಉಳಿದಿದ್ದರು ಎಂದು ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಸೋಮವಾರ ಆರೋಪಿಸಿದ್ದಾರೆ.
ಇಂದು ರಾಜ್ಯ ವಿಧಾನಸಭೆಯ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಯಾದವ್, ದಾಳಿ ವೇಳೆ 600 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ ಎಂಬ ಇಡಿ ಹೇಳಿಕೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.
ಇಡಿ ಅಧಿಕಾರಿಗಳು ನನ್ನ ವಿವಾಹಿತ ಸಹೋದರಿಯರು ಮತ್ತು ಅವರ ಪತಿಯರು ಧರಿಸಿದ್ದ ಆಭರಣಗಳನ್ನು ಬಿಚ್ಚಿಸಿ ಅವುಗಳ ಫೋಟೋ ತೆಗೆಯಲಾಗಿದೆ ಮತ್ತು ವಶಕ್ಕೆ ಪಡೆಯಲಾಗಿದೆ ಎಂದು ಆರ್ ಜೆಡಿ ನಾಯಕ ಆರೋಪಿಸಿದ್ದಾರೆ.
"ನಾವು ಬಿಜೆಪಿ-ಆರ್ಎಸ್ಎಸ್ನಂತೆ ಸಂಪೂರ್ಣ ರಾಜಕೀಯ ವಿಜ್ಞಾನದ ವಿದ್ಯಾರ್ಥಿಗಳಲ್ಲ. ನಾವು ನೈಜ ರಾಜಕೀಯ ಮಾಡುತ್ತೇವೆ ಮತ್ತು ಅವರನ್ನು ಎದುರಿಸಲು ಸಾರ್ವಜನಿಕ ಬೆಂಬಲ ಹೊಂದಿದ್ದೇವೆ. ಆದರೆ ಅವರು ನಿಜವಾದ ರಾಜಕೀಯ ರಣರಂಗದಿಂದ ಓಡಿಹೋಗಲು ಯತ್ನಿಸುತ್ತಿದ್ದಾರೆ" ಯಾದವ್ ಹೇಳಿದ್ದಾರೆ.
Advertisement