ದೇಶದಲ್ಲಿ ಮತ್ತೊಂದು ಚೀತಾ ಸಾವು; ಮಧ್ಯಪ್ರದೇಶದ ಕುನೋ ಪಾರ್ಕ್ ನಲ್ಲಿ ನಮೀಬಿಯಾದ 'ಸಾಷಾ' ನಿಧನ

ದೇಶದಲ್ಲಿ ಮತ್ತೊಂದು ಚೀತಾ ಸಾವಿಗೀಡಾಗಿದ್ದು, ಮಧ್ಯಪ್ರದೇಶದ ಕುನೋ ಪಾರ್ಕ್ ನಲ್ಲಿದ್ದ ನಮೀಬಿಯಾದಿಂದ ತರಲಾಗಿದ್ದ 'ಸಾಷಾ' ಎಂಬ ಹೆಣ್ಣು ಚೀತಾ ಸಾವನ್ನಪ್ಪಿದೆ.
ನಮೀಬಿಯಾದಿಂದ ಬಂದಿದ್ದ 'ಸಾಷಾ' ಚೀತಾ ಸಾವು
ನಮೀಬಿಯಾದಿಂದ ಬಂದಿದ್ದ 'ಸಾಷಾ' ಚೀತಾ ಸಾವು

ಭೋಪಾಲ್: ದೇಶದಲ್ಲಿ ಮತ್ತೊಂದು ಚೀತಾ ಸಾವಿಗೀಡಾಗಿದ್ದು, ಮಧ್ಯಪ್ರದೇಶದ ಕುನೋ ಪಾರ್ಕ್ ನಲ್ಲಿದ್ದ ನಮೀಬಿಯಾದಿಂದ ತರಲಾಗಿದ್ದ 'ಸಾಷಾ' ಎಂಬ ಹೆಣ್ಣು ಚೀತಾ ಸಾವನ್ನಪ್ಪಿದೆ.

ಮೀಬಿಯಾದಿಂದ ಭಾರತಕ್ಕೆ ಸ್ಥಳಾಂತರಿಸಲಾದ ಎಂಟು ಚೀತಾಗಳ ಪೈಕಿ ಒಂದು ಚೀತಾ ಸೋಮವಾರ ಸಾವನ್ನಪ್ಪಿದ್ದು,  'ಸಾಷಾ' ಎಂಬ ಹೆಣ್ಣು ಚೀತಾ ಕಿಡ್ನಿ ಕಾಯಿಲೆಯಿಂದ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ. ಕಳೆದ ವರ್ಷ ಮಹತ್ವಾಕಾಂಕ್ಷೆಯ 'ಚೀತಾ ಮರುಪರಿಚಯ' ಕಾರ್ಯಕ್ರಮದ ಭಾಗವಾಗಿ ನಮೀಬಿಯಾದಿಂದ ತರಿಸಲಾಗಿದ್ದ ಐದು ಹೆಣ್ಣು ಚೀತಾಗಳಲ್ಲಿ ಈ ಸಾಷಾ ಕೂಡ ಒಂದಾಗಿತ್ತು. 

ಕಳೆದ ಕೆಲ ತಿಂಗಳುಗಳಿಂದ 'ಸಾಷಾ'  ಹೆಣ್ಣು ಚೀತಾ ಕಿಡ್ನಿ ಕಾಯಿಲೆಯಿಂದ ಬಳಲುತ್ತಿತ್ತು. ಜನವರಿಯಿಂದಲೇ ಸಾಷಾ ಚೀತಾದಲ್ಲಿ ಮೂತ್ರಪಿಂಡದ ಸೋಂಕು ಕಂಡುಬಂದಿತ್ತು. ದಿನನಿತ್ಯದ ವೈದ್ಯಕೀಯ ಪರೀಕ್ಷೆ ಸಮಯದಲ್ಲಿ ಸಾಷಾ ಆಯಾಸ ಮತ್ತು ದೌರ್ಬಲ್ಯದ ಲಕ್ಷಣಗಳನ್ನು ತೋರಿಸಿತ್ತು. ವೈದ್ಯಕೀಯ ಪರೀಕ್ಷೆಯಲ್ಲಿ ಚೀತಾ ನಿರ್ಜಲೀಕರಣಗೊಂಡಿದ್ದು, ಕಿಡ್ನಿ ಸಂಬಂಧಿ ಸಮಸ್ಯೆ ಇರುವುದು ಪತ್ತೆಯಾಗಿತ್ತು. ಅಂದಿನಿಂದ ಚೀತಾಗೆ ತಜ್ಞರು ಚಿಕಿತ್ಸೆ ನೀಡುತ್ತಿದ್ದರು. ಆದರೆ ಇಂದು ಸಾಷಾ ಚೀತಾ ಸಾವನ್ನಪ್ಪಿದೆ.

ಇತ್ತೀಚೆಗಷ್ಟೇ ಸೌದಿ ಅರೇಬಿಯಾದ ದೊರೆ ಹೈದರಾಬಾದ್‌ನ ಜವಾಹರಲಾಲ್ ನೆಹರು ಮೃಗಾಲಯಕ್ಕೆ ನೀಡಿದ್ದ ‘ಅಬ್ದುಲ್ಲಾ’ ಎಂಬ ಗಂಡು ಚೀತಾ ಹೃದಯಾಘಾತದಿಂದ ಮೃತಪಟ್ಟಿತ್ತು. 2013 ರಲ್ಲಿ ಸೌದಿ ದೊರೆ ಮೊಹಮ್ಮದ್ ಅಲ್ ಸೌದ್ ಅವರು ಭಾರತ ಭೇಟಿ ವೇಳೆ ಹಿಬಾ ಎಂಬ ಒಂದು ಹೆಣ್ಣು ಚೀತಾ ಹಾಗೂ ಅಬ್ದುಲ್ಲಾ ಎಂಬ ಒಂದು ಗಂಡು ಚೀತಾವನ್ನು ಸ್ನೇಹಾರ್ಥವಾಗಿ ಜವಾಹರಲಾಲ್ ನೆಹರು ಮೃಗಾಲಯಕ್ಕೆ ಉಡುಗೊರೆಯಾಗಿ ನೀಡಿದ್ದರು.

ಚೀತಾ ಮರುಪರಿಚಯ ಕಾರ್ಯಕ್ರಮದಡಿಯಲ್ಲಿ ಭಾರತಕ್ಕೆ ಬಂದಿದ್ದ ಚೀತಾಗಳು
ಕಳೆದ ವರ್ಷ ಅವರ ಜನ್ಮದಿನವಾದ ಸೆಪ್ಟೆಂಬರ್ 17 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕುನೋ ಜೈವಿಕ ಉದ್ಯಾನವನದಲ್ಲಿ ಐದು ವರ್ಷದ ಎರಡು ಹೆಣ್ಣು ಚೀತಾಗಳನ್ನು ಬಿಡಲಾಗಿತ್ತು. ಈ ಎರಡು ಹೆಣ್ಣು ಚೀತಾಗಳ ಪೈಕಿ ಸಾಷಾ ಕೂಡ ಒಂದಾಗಿತ್ತು. ಕಳೆದ ವಾರ, ಇನ್ನೂ ಎರಡು ಚಿರತೆಗಳಾದ ಎಲ್ಟನ್ ಮತ್ತು ಫ್ರೆಡ್ಡಿಯನ್ನು ಮಧ್ಯಪ್ರದೇಶದಲ್ಲಿ ಕಾಡಿಗೆ ಬಿಡಲಾಗಿತ್ತು. ಅದರೊಂದಿಗೆ, ನಮೀಬಿಯಾದಿಂದ ತರಲಾದ ಎಂಟು ಚೀತಾಗಳ ಪೈಕಿ ನಾಲ್ಕನ್ನು ಶಿಯೋಪುರ್ ಜಿಲ್ಲೆಯ ಉದ್ಯಾನವನದಲ್ಲಿ ಕಾಡಿಗೆ ಬಿಡಲಾಗಿದೆ.

ಎಂಟು ನಮೀಬಿಯನ್ ಚಿರತೆಗಳು -- ಐದು ಹೆಣ್ಣು ಮತ್ತು ಮೂರು ಗಂಡು -- ಭಾರತದಲ್ಲಿ ಜಾತಿಗಳ ಜನಸಂಖ್ಯೆಯನ್ನು ಪುನರುಜ್ಜೀವನಗೊಳಿಸುವ ಗುರಿಯನ್ನು ಹೊಂದಿರುವ ಮರುಪರಿಚಯ ಕಾರ್ಯಕ್ರಮದ ಭಾಗವಾಗಿ KNP (ಕುನೋ ರಾಷ್ಟ್ರೀಯ ಜೈವಿಕ ಉದ್ಯಾನವನ) ಗೆ ತರಲಾಗಿತ್ತು. ಕಳೆದ ವರ್ಷ ನವೆಂಬರ್‌ನಲ್ಲಿ ಅವುಗಳನ್ನು ಮೊದಲ ಬಾರಿಗೆ ಕ್ವಾರಂಟೈನ್ ಬೊಮಾಸ್ (ಪ್ರಾಣಿ ಆವರಣಗಳು) ನಿಂದ ಉದ್ಯಾನದ ಬೇಟೆಯ ಆವರಣಗಳಿಗೆ ಬಿಡುಗಡೆ ಮಾಡಲಾಗಿತ್ತು.

ಇನ್ನೂ ಒಂದು ಡಜನ್ ಚಿರತೆಗಳನ್ನು - ಏಳು ಗಂಡು ಮತ್ತು ಐದು ಹೆಣ್ಣು - ಈ ವರ್ಷ ಫೆಬ್ರವರಿ 18 ರಂದು ದಕ್ಷಿಣ ಆಫ್ರಿಕಾದಿಂದ ಕೆಎನ್‌ಪಿಗೆ ತರಲಾಯಿತು. ಕೆಎನ್‌ಪಿ ಈಗ  20 ಚಿರತೆಗಳಿಗೆ ನೆಲೆಯಾಗಿದೆ. ಮುಂದಿನ ದಶಕದಲ್ಲಿ ದೇಶಕ್ಕೆ ಡಜನ್ಗಟ್ಟಲೆ ಆಫ್ರಿಕನ್ ಚೀತಾಗಳನ್ನು ಪರಿಚಯಿಸಲು ದಕ್ಷಿಣ ಆಫ್ರಿಕಾವು ಭಾರತದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ವಿಶ್ವದ ಮೊದಲ ಖಂಡಾಂತರ ಸ್ಥಳಾಂತರ ಯೋಜನೆಯು ದೇಶದಲ್ಲಿ ಚೀತಾಗಳನ್ನು ಮರುಪರಿಚಯಿಸುವ ಗುರಿಯನ್ನು ಹೊಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com