ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚಿನ ಬೆಳವಣಿಗೆಯಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಮಂಗಳವಾರ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಆಪ್ತ ಸಹಾಯಕ (ಪಿಎ) ದೇವೇಂದ್ರ ಶರ್ಮಾ ಅವರನ್ನು ವಿಚಾರಣೆ ನಡೆಸುತ್ತಿದೆ.
ಹಣ ಅಕ್ರಮ ವರ್ಗಾವಣೆ ವಿರೋಧಿ ಸಂಸ್ಥೆಯು ಮತ್ತೆ ತನಿಖೆಗೆ ಹಾಜರಾಗುವಂತೆ ಶರ್ಮಾ ಅವರಿಗೆ ಸೂಚಿಸಿತ್ತು. ಅದರಂತೆ, ವಿಚಾರಣೆಗೆ ಹಾಜರಾಗಿದ್ದು, ಸದ್ಯ ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಕಳೆದ ಬಾರಿ ಅವರು ಮನೀಶ್ ಸಿಸೋಡಿಯಾ ಅವರೊಂದಿಗೆ ವಿಚಾರಣೆಯನ್ನು ಎದುರಿಸಿದ್ದರು. ಮಾಜಿ ಕಾರ್ಯದರ್ಶಿ ಸಿ.ಅರವಿಂದ್, ಅಬಕಾರಿ ಕಾರ್ಯದರ್ಶಿ ಅರವ ಗೋಪಿ ಕೃಷ್ಣ ಮತ್ತು ಸಂಜಯ್ ಗೋಯಲ್ ಅವರನ್ನು ಒಟ್ಟಿಗೆ ವಿಚಾರಣೆ ನಡೆಸುವುದಾಗಿ ಇ.ಡಿ ಈ ಹಿಂದೆಯೇ ನ್ಯಾಯಾಲಯಕ್ಕೆ ತಿಳಿಸಿತ್ತು.
ಈ ಪ್ರಕರಣದಲ್ಲಿ ಇ.ಡಿ ಇದೀಗ ಒಂದು ಚಾರ್ಜ್ ಶೀಟ್ ಮತ್ತು ಪೂರಕ ಚಾರ್ಜ್ ಶೀಟ್ ಸಲ್ಲಿಸಿದೆ. ಶೀಘ್ರದಲ್ಲೇ ಎರಡನೇ ಪೂರಕ ಚಾರ್ಜ್ ಶೀಟ್ ಸಲ್ಲಿಸಲು ಅಧಿಕಾರಿಗಳು ಸಜ್ಜಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
Advertisement