ಕುಸ್ತಿಪಟುಗಳ ಪ್ರತಿಭಟನೆ: 11 ದಿನಗಳ ಬಳಿಕ ದೆಹಲಿಯ ಜಂತರ್ ಮಂತರ್ ನಲ್ಲಿ ಕ್ರೀಡಾಪಟುಗಳನ್ನು ಭೇಟಿ ಮಾಡಿದ ಪಿ ಟಿ ಉಷಾ

ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳ ನಡೆಸಿರುವ ಆರೋಪ ಎದುರಿಸುತ್ತಿರುವ ಭಾರತ ಕುಸ್ತಿ ಫೆಡರೇಷನ್ (WFI) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಪದಚ್ಯುತಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳನ್ನು ಭಾರತೀಯ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷೆ (IOA) ಪಿಟಿ ಉಷಾ ಬುಧವಾರ ಭೇಟಿ ಮಾಡಿದ್ದಾರೆ. 
ಜಂತರ್ ಮಂತರ್ ನಲ್ಲಿ ಪ್ರತಿಭಟನಾ ನಿರತ ಕುಸ್ತಿಪಟುಗಳನ್ನು ಭೇಟಿ ಮಾಡಿದ ಪಿ ಟಿ ಉಷಾ
ಜಂತರ್ ಮಂತರ್ ನಲ್ಲಿ ಪ್ರತಿಭಟನಾ ನಿರತ ಕುಸ್ತಿಪಟುಗಳನ್ನು ಭೇಟಿ ಮಾಡಿದ ಪಿ ಟಿ ಉಷಾ

ನವದೆಹಲಿ: ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳ ನಡೆಸಿರುವ ಆರೋಪ ಎದುರಿಸುತ್ತಿರುವ ಭಾರತ ಕುಸ್ತಿ ಫೆಡರೇಷನ್ (WFI) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಪದಚ್ಯುತಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳನ್ನು ಭಾರತೀಯ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷೆ (IOA) ಪಿಟಿ ಉಷಾ ಬುಧವಾರ ಭೇಟಿ ಮಾಡಿದ್ದಾರೆ. 

ದೆಹಲಿಯ ಜಂತರ್ ಮಂತರ್ ನಲ್ಲಿ ಕಳೆದ 11 ದಿನಗಳಿಂದ ದೇಶದ ಪ್ರಮುಖ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಮೊದಲಾದವರು ಪ್ರತಿಭಟನೆ ಮಾಡುತ್ತಿದ್ದು ಪಿ ಟಿ ಉಷಾ ಅವರು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. 

ಕುಸ್ತಿಪಟುಗಳು WFI ಅಧ್ಯಕ್ಷರ ವಿರುದ್ಧ ಬೀದಿಗಿಳಿದು ಪ್ರತಿಭಟನೆ ಮಾಡುವ ಬದಲು ತಮ್ಮನ್ನು ಸಂಪರ್ಕಿಸಬೇಕಿತ್ತು ಎಂದು ಪಿ ಟಿ ಉಷಾ ಕಳೆದ ವಾರ ಪ್ರತಿಕ್ರಿಯೆ ನೀಡಿದ್ದರು. ಲೈಂಗಿಕ ಕಿರುಕುಳ ಆರೋಪದ ಬಗ್ಗೆ ತನಿಖೆ ನಡೆಸಲು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಸಮಿತಿಯನ್ನು ಹೊಂದಿದೆ, ಬೀದಿಗಿಳಿದು ಪ್ರತಿಭಟನೆ ಮಾಡುವ ಬದಲು ಅವರು ನಮ್ಮ ಬಳಿಗೆ ಬರಬಹುದಿತ್ತು. ಆದರೆ ಅವರು ನಮ್ಮ ಸಮಿತಿಗೆ ಬಂದಿಲ್ಲ. ಇದು ಕುಸ್ತಿಪಟುಗಳಿಗೆ ಮಾತ್ರವಲ್ಲ, ಕ್ರೀಡಾಪಟುಗಳಿಗೆ ಉತ್ತಮ ನಡವಳಿಕೆಯಲ್ಲ ಎಂದು ಪಿ ಟಿ ಉಷಾ ಈ ಹಿಂದೆ ಹೇಳಿದ್ದರು. 

ಉಷಾ ಅವರ ಹೇಳಿಕೆಗೆ ಕುಸ್ತಿಪಟುಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಮಹಿಳಾ ಅಥ್ಲೀಟ್ ಆಗಿರುವ ಪಿ ಟಿ ಉಷಾ ಅವರು ಇತರ ಮಹಿಳಾ ಅಥ್ಲೀಟ್‌ಗಳ ಮಾತನ್ನು ಕೇಳುತ್ತಿಲ್ಲ, ನಾವು ಬಾಲ್ಯದಿಂದಲೂ ಅವರನ್ನು ಅನುಸರಿಸಿದ್ದೇವೆ ಮತ್ತು ಅವರಿಂದ ಸ್ಫೂರ್ತಿ ಪಡೆದಿದ್ದೇವೆ, ಇಲ್ಲಿ ಅಶಿಸ್ತು ಎಲ್ಲಿದೆ, ನಾವು ಇಲ್ಲಿ ಶಾಂತಿಯುತವಾಗಿ ಕುಳಿತಿದ್ದೇವೆ ಎಂದು ಸಾಕ್ಷಿ ಮಲಿಕ್ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ್ದರು. 

ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ವಿಜೇತೆ ವಿನೇಶ್ ಫೋಗಟ್ ಕೂಡ ಉಷಾ ಅವರ ಹೇಳಿಕೆ ಅಸೂಕ್ಷ್ಮ ಎಂದು ಬಣ್ಣಿಸಿದ್ದರು. ನಾವು ಸಂವಿಧಾನದ ಪ್ರಕಾರ ಬದುಕುತ್ತೇವೆ ಮತ್ತು ಸ್ವತಂತ್ರ ನಾಗರಿಕರು, ನಾವು ಎಲ್ಲಿ ಬೇಕಾದರೂ ಹೋಗಬಹುದು, ನಾವು ಬೀದಿಯಲ್ಲಿ ಕುಳಿತಿದ್ದರೆ, ಬಲವಾದ ಕಾರಣವಿರಬೇಕು. ಯಾರೂ ನಮ್ಮ ಮಾತನ್ನು ಕೇಳಲಿಲ್ಲ, ಅದು ಐಒಎ ಅಥವಾ ಕ್ರೀಡಾ ಸಚಿವಾಲಯವೇ ಆಗಿರಲಿ. ಸಂವೇದನಾಶೀಲವಲ್ಲ, ನಾನು ಪಿ ಟಿ ಉಷಾ ಅವರಿಗೆ ಕರೆ ಮಾಡಿದ್ದರೂ ಅವರು ನನ್ನ ಫೋನ್ ಎತ್ತಿಕೊಳ್ಳಲಿಲ್ಲ ಎಂದು ವಿನೇಶ್ ಹೇಳಿದ್ದರು. 

ಏಪ್ರಿಲ್ 30 ರಂದು, ದೆಹಲಿ ಪೊಲೀಸರು ಡಬ್ಲ್ಯುಎಫ್ಐ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಮಹಿಳಾ ಕುಸ್ತಿಪಟುಗಳ ಮೇಲೆ ಶೋಷಣೆಯ ಆರೋಪದ ಮೇಲೆ ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com