ಮಣಿಪುರ ಹಿಂಸಾಚಾರ: ರಾಜ್ಯದಲ್ಲಿ ಭದ್ರತೆ ಹೆಚ್ಚಳ, ಭಾರತೀಯ ಸೇನೆ, ಅಸ್ಸಾಂ ರೈಫಲ್ಸ್ ನಿಯೋಜನೆ

ರಾಜ್ಯದಲ್ಲಿ ಹೊಸ ಹಿಂಸಾಚಾರ ನಡೆದ ಬಗ್ಗೆ ವರದಿಗಳ ನಡುವೆ ಭಾರತೀಯ ಸೇನೆ ಮತ್ತು ಅಸ್ಸಾಂ ರೈಫಲ್ಸ್ ಮಣಿಪುರದಾದ್ಯಂತ ಭದ್ರತೆಯನ್ನು ತೀವ್ರಗೊಳಿಸಿವೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಇಂಫಾಲ: ರಾಜ್ಯದಲ್ಲಿ ಹೊಸ ಹಿಂಸಾಚಾರ ನಡೆದ ಬಗ್ಗೆ ವರದಿಗಳ ನಡುವೆ ಭಾರತೀಯ ಸೇನೆ ಮತ್ತು ಅಸ್ಸಾಂ ರೈಫಲ್ಸ್ ಮಣಿಪುರದಾದ್ಯಂತ ಭದ್ರತೆಯನ್ನು ತೀವ್ರಗೊಳಿಸಿವೆ.

ಕೆಲವು ಶಸ್ತ್ರಸಜ್ಜಿತ ದುಷ್ಕರ್ಮಿಗಳು ಗುಂಡು ಹಾರಿಸಿದರು ಮತ್ತು ಓಡಿದರು. ಈ ವೇಳೆ ಇಂಫಾಲ್ ಪೂರ್ವ ಮತ್ತು ಚರ್ಚಂದ್‌ಪುರದ ಎರಡೂ ಭದ್ರತಾ ತಂಡಗಳು ಎರಡು ಸಮುದಾಯಗಳ ನಡುವೆ ಗುಂಡಿನ ದಾಳಿಯನ್ನು ತಡೆದವು ಎಂದು ಸೇನೆ ತಿಳಿಸಿದೆ.
ಆದಾಗ್ಯೂ, ಯಾವುದೇ ಸಾವು ನೋವುಗಳ ವರದಿಯಾಗಿಲ್ಲ ಮತ್ತು ಹೆಚ್ಚಿನ ಕಾರ್ಯಾಚರಣೆಗಳು ನಡೆಯುತ್ತಿವೆ.

ಮಣಿಪುರವು ಜನಾಂಗೀಯ ಹಿಂಸಾಚಾರವನ್ನು ಕಂಡಿದೆ. ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಈ ತಿಂಗಳ ಆರಂಭದಲ್ಲಿ ಸುಮಾರು 60 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ. ಹಿಂಸಾಚಾರದ ಸಮಯದಲ್ಲಿ ಮನೆಗಳು ಸುಟ್ಟುಹೋಗಿವೆ ಮತ್ತು ರಾಜ್ಯದ ಕೆಲವು ಭಾಗಗಳಿಂದ ಹೊಸದಾಗಿ ಹಿಂಸಾಚಾರ ಘಟನೆಗಳು ವರದಿಯಾಗಿವೆ.

ರಾಜ್ಯಕ್ಕೆ ಹೆಚ್ಚುವರಿ ಭದ್ರತಾ ಪಡೆಗಳನ್ನು ಕರೆತರಲಾಗಿದೆ ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್), ಮಣಿಪುರ ಪೊಲೀಸ್, ಮಣಿಪುರ ರೈಫಲ್ಸ್, ಇಂಡಿಯಾ ರಿಸರ್ವ್ ಬೆಟಾಲಿಯನ್ (ಐಆರ್‌ಬಿ) ಮತ್ತು ವಿಲೇಜ್ ಡಿಫೆನ್ಸ್ ಫೋರ್ಸ್ (ವಿಡಿಎಫ್) ಒಳಗೊಂಡ ಭದ್ರತಾ ಸಿಬ್ಬಂದಿಯನ್ನು 38 ದುರ್ಬಲ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ ಎಂದು ಮುಖ್ಯಮಂತ್ರಿ ಬಿರೇನ್ ಸಿಂಗ್ ಶುಕ್ರವಾರ ತಿಳಿಸಿದ್ದಾರೆ. 

ಆತಂಕಪಡಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ ಮುಖ್ಯಮಂತ್ರಿಗಳು, ರಾಜ್ಯದ ವಿವಿಧ ಪ್ರದೇಶಗಳಲ್ಲಿ ಶಸ್ತ್ರಸಜ್ಜಿತ ಉಗ್ರಗಾಮಿಗಳ ವಿರುದ್ಧ ಕಾರ್ಯಾಚರಣೆ ನಡೆಸಲಾಗಿದೆ. ಎಲ್ಲಾ ವರ್ಗದ ಜನರೊಂದಿಗೆ ಶಾಂತಿ ಮಾತುಕತೆ ನಡೆಸಲು ಪ್ರಯತ್ನಿಸಲಾಗುತ್ತಿದೆ ಮತ್ತು ಮಣಿಪುರದಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರಚಿಸಲಾದ ವಿವಿಧ ಶಾಂತಿ ಸಮಿತಿಗಳೊಂದಿಗೆ ಸರ್ಕಾರ ಮಾತುಕತೆ ನಡೆಸುತ್ತಿದೆ ಎಂದು ಅವರು ಹೇಳಿದರು.

ಹಿಂಸಾತ್ಮಕ ಚಟುವಟಿಕೆಗಳಿಂದ ದೂರವಿರಬೇಕು ಮತ್ತು ವಿವಿಧ ಸಮುದಾಯಗಳಲ್ಲಿ ಉದ್ವಿಗ್ನತೆಯನ್ನು ಉಂಟುಮಾಡುವ ಯಾವುದೇ ಆಧಾರರಹಿತ ಮಾಹಿತಿ ವದಂತಿಗಳನ್ನು ನಂಬಬೇಡಿ ಅಥವಾ ಹರಡಬೇಡಿ ಎಂದು ಅವರು ಜನರಿಗೆ ಮನವಿ ಮಾಡಿದರು. ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ಸರ್ಕಾರದ ಪ್ರಯತ್ನಗಳಿಗೆ ಸಾರ್ವಜನಿಕರ ಬೆಂಬಲ ಕೋರಿದರು.

ಹಿಂಸಾಚಾರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಮೂರು ದಿನಗಳ ಕಾಲ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.

ಶಾಂತಿ ಕಾಪಾಡುವಂತೆ ಜನರಲ್ಲಿ ಮನವಿ ಮಾಡಿದ ಶಾ, 'ನ್ಯಾಯಾಲಯದ ತೀರ್ಪಿನ ನಂತರ ಮಣಿಪುರದಲ್ಲಿ ಘರ್ಷಣೆಗಳು ನಡೆದಿವೆ. ನಾನು ಎರಡೂ ಗುಂಪುಗಳಿಗೆ ಶಾಂತಿ ಕಾಪಾಡಬೇಕು ಮತ್ತು ಎಲ್ಲರಿಗೂ ನ್ಯಾಯ ಸಿಗುತ್ತದೆ ಎಂದು ಮನವಿ ಮಾಡುತ್ತೇನೆ. ಕೆಲವು ದಿನಗಳ ನಂತರ ನಾನೇ ಮಣಿಪುರಕ್ಕೆ ಹೋಗುತ್ತೇನೆ. ಮೂರು ದಿನಗಳ ಕಾಲ ಅಲ್ಲಿಯೇ ಇರುತ್ತೇನೆ ಮತ್ತು ಶಾಂತಿ ಸ್ಥಾಪನೆಗಾಗಿ ಮಣಿಪುರದ ಜನರೊಂದಿಗೆ ಮಾತನಾಡುತ್ತೇನೆ' ಎಂದು ಗುರುವಾರ ತಿಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com