ಬಿಹಾರ ಜಾತಿ ಗಣತಿಯಲ್ಲಿ ಮುಸ್ಲಿಂ, ಯಾದವರ ಸಂಖ್ಯೆ ಹೆಚ್ಚು ತೋರಿಸಲಾಗಿದೆ: ಅಮಿತ್ ಶಾ
ಪಾಟ್ನಾ: ಬಿಹಾರ ಜಾತಿ ಗಣತಿ ವಿಷಯವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಹಾರದ ನಿತೀಶ್ ಕುಮಾರ್ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಬಿಹಾರ ಸರ್ಕಾರ ತನ್ನ ತುಷ್ಟೀಕರಣ ರಾಜಕಾರಣದ ಭಾಗವಾಗಿ ಮುಸ್ಲಿಮರು ಹಾಗೂ ಯಾದವರ ಜನಸಂಖ್ಯೆಯನ್ನು ಉದ್ದೇಶಪೂರ್ವಕವಾಗಿ ಹೆಚ್ಚು ತೋರಿಸಿದೆ ಎಂದು ಅಮಿತ್ ಶಾ ಗಂಭೀರ ಆರೋಪ ಮಾಡಿದ್ದಾರೆ.
ಮುಜಾಫರ್ ಜಿಲ್ಲೆಯಲ್ಲಿ ರ್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ರಾಜ್ಯದಲ್ಲಿ ಜಾತಿ ಗಣತಿ ನಡೆಸಲು , ನಿತೀಶ್ ಕುಮಾರ್ ಅವರ ಸಂಯುಕ್ತ ಜನತಾದಳ ಎನ್ ಡಿಎ ಮಿತ್ರಪಕ್ಷವಾಗಿದ್ದಾಗ ತೀರ್ಮಾನ ತೆಗೆದುಕೊಳ್ಳಲಾಗಿತ್ತು ಎಂದು ಅಮಿತ್ ಶಾ ಹೇಳಿದ್ದಾರೆ.
ಕಳೆದ ವರ್ಷ ಜೆಡಿಯು ಬಿಜೆಪಿ ಜೊತೆ ಮೈತ್ರಿ ಮುರಿದುಕೊಂಡು ಕಾಂಗ್ರೆಸ್, ಆರ್ ಜೆಡಿ, ಎಡಪಕ್ಷಗಳ ಮಹಾಘಟಬಂಧನ್ ಜೊತೆ ಸೇರಿ ಮತ್ತೆ ಸರ್ಕಾರ ರಚಿಸಿದ್ದರು.
ವಿಪಕ್ಷಗಳ ಮೈತ್ರಿಕೂಟ INDIA ವಿರುದ್ಧ ವಾಗ್ದಾಳಿ ನಡೆಸಿರುವ ಅಮಿತ್ ಶಾ, ಈ ಮೈತ್ರಿಕೂಟದ ಒಂದೇ ಒಂದು ಉದ್ದೇಶ ಅಂದರೆ ಅದು ಪ್ರಧಾನಿ ಮೋದಿ ಅವರನ್ನು ವಿರೋಧಿಸುವುದಾಗಿದೆ ಎಂದು ಆರೋಪಿಸಿದ್ದಾರೆ.
"ನಿತೀಶ್ ಕುಮಾರ್ ಮುಂದಿನ ಪ್ರಧಾನಿಯಾಗುವ ಕನಸು ಕಾಣುವುದನ್ನು ನಿಲ್ಲಿಸಬೇಕು. ವಿಪಕ್ಷಗಳ ಮೈತ್ರಿಕೂಟ ಅವರನ್ನು ಅದರ ಸಂಚಾಲಕನನ್ನಾಗಿ ಕೂಡಾ ಮಾಡಲಿಲ್ಲ" ಎಂದು ಅಮಿತ್ ಶಾ ಟೀಕಾ ಪ್ರಹಾರ ನಡೆಸಿದ್ದಾರೆ.
ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಹಾರದ ಎಲ್ಲಾ 40 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ