ಹೈದರಾಬಾದ್: ನವೆಂಬರ್ 30 ರಂದು ನಡೆಯಲಿರುವ ತೆಲಂಗಾಣ ವಿಧಾನಸಭೆ ಚುನಾವಣೆಗೆ ಬಿಜೆಪಿ ಶನಿವಾರ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಅಯೋಧ್ಯೆಯ ರಾಮ ಮಂದಿರಕ್ಕೆ ಉಚಿತ ಭೇಟಿ ಹಾಗೂ ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ಜಾರಿ ಸೇರಿದಂತೆ ಹಲವು ಭರವಸೆಗಳನ್ನು ನೀಡಿದೆ.
ಇಂದುಹೈದರಾಬಾದ್ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.
ಪಕ್ಷದ ಪ್ರಣಾಳಿಕೆಯ ಪ್ರಕಾರ, ಪ್ರತಿ ವರ್ಷ ಸೆಪ್ಟೆಂಬರ್ 17 ರಂದು ಹೈದರಾಬಾದ್ ವಿಮೋಚನಾ ದಿನವನ್ನು ಅಧಿಕೃತವಾಗಿ ಆಚರಿಸಲು ಬಿಜೆಪಿ ನಿರ್ಧರಿಸಿದೆ.
ಬೈರನಪಲ್ಲಿ ಮತ್ತು ಪರ್ಕಲ್ ಹುತಾತ್ಮರಿಗೆ ಗೌರವ ಸಲ್ಲಿಸಲು ನಾವು ಆಗಸ್ಟ್ 27 ಅನ್ನು ರಜಾಕಾರ ಭಯೋತ್ಪಾದಕರ ದಿನವನ್ನಾಗಿ ಆಚರಿಸುತ್ತೇವೆ ಮತ್ತು ಅಧಿಕಾರ ಸ್ವೀಕರಿಸಿದ ನಂತರ ಹೈದರಾಬಾದ್ನಲ್ಲಿ ಮ್ಯೂಸಿಯಂ ಮತ್ತು ಸ್ಮಾರಕವನ್ನು ಸ್ಥಾಪಿಸುತ್ತೇವೆ ಎಂದು ಅಮಿತ್ ಶಾ ಹೇಳಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅಮಿತ್ ಶಾ, ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆಯನ್ನು ಅವರು ಯಾವಾಗಲೂ ವಿರೋಧಿಸುತ್ತಿದ್ದರು ಎಂದು ಆರೋಪಿಸಿದರು.
"ಈ ಪ್ರಣಾಳಿಕೆಯು ತೆಲಂಗಾಣಕ್ಕೆ ಪ್ರಧಾನಿ ಮೋದಿಯವರ ನೀಡುವ ಭರವಸೆಯಾಗಿದೆ. ಅಟಲ್ ಜಿ ಅವರು ಪ್ರಧಾನಿಯಾಗಿದ್ದಾಗ ಮೂರು ರಾಜ್ಯಗಳು ರಚನೆಯಾದವು ಮತ್ತು ಯಾವುದೇ ಹಿಂಸಾಚಾರ ನಡೆದಿಲ್ಲ. ಕಾಂಗ್ರೆಸ್ ಯಾವಾಗಲೂ ತೆಲಂಗಾಣ ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ತಿರಸ್ಕರಿಸಿತ್ತು. ನಂತರ ತಮ್ಮ ಸ್ವಂತ ಚುನಾವಣಾ ಲಾಭಕ್ಕಾಗಿ ಅವರು ತೆಲಂಗಾಣವನ್ನು ರಚಿಸಿದರು. ತೆಲಂಗಾಣ ಪ್ರತ್ಯೇಕ ರಾಜ್ಯವನ್ನು ಅವರು ಎಂದಿಗೂ ಬೆಂಬಲಿಸುವುದಿಲ್ಲ ಎಂದು ಹೇಳಿದರು.
Advertisement