ಕೇರಳದಲ್ಲಿ ಮತ್ತೊಂದು ನಿಫಾ ವೈರಸ್ ಸೋಂಕು ದೃಢ; ಸಲಹೆ-ಸೂಚನೆ ನೀಡಿ ಸುತ್ತೋಲೆ ಹೊರಡಿಸಿದ ಕರ್ನಾಟಕ ಸರ್ಕಾರ
ಕೇರಳದ ಕೋಝಿಕ್ಕೋಡ್ನಲ್ಲಿ ಮತ್ತೊಬ್ಬರಿಗೆ ನಿಫಾ ನಿಪಾಹ್ ಸೋಂಕು ತಗುಲಿರುವುದು ಪತ್ತೆಯಾಗಿದೆ ಎಂದು ಕೇರಳ ಆರೋಗ್ಯ ಸಚಿವರ ಕಚೇರಿ ದೃಢಪಡಿಸಿದೆ.
Published: 15th September 2023 09:29 AM | Last Updated: 15th September 2023 02:25 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು/ತಿರುವನಂತಪುರ: ಕೇರಳದ ಕೋಝಿಕ್ಕೋಡ್ನಲ್ಲಿ ಮತ್ತೊಬ್ಬರಿಗೆ ನಿಫಾ ನಿಪಾಹ್ ಸೋಂಕು ತಗುಲಿರುವುದು ಪತ್ತೆಯಾಗಿದೆ ಎಂದು ಕೇರಳ ಆರೋಗ್ಯ ಸಚಿವರ ಕಚೇರಿ ದೃಢಪಡಿಸಿದೆ. ಸೋಂಕು ತಗುಲಿರುವ 39 ವರ್ಷದ ವ್ಯಕ್ತಿಯನ್ನು ಕೋಝಿಕ್ಕೋಡ್ನ ಆಸ್ಪತ್ರೆಯಲ್ಲಿ ನಿಗಾ ಇರಿಸಲಾಗಿದೆ ಎಂದು ಹೇಳಿದ್ದಾರೆ. ಈ ಮೂಲಕ ಕೇರಳದಲ್ಲಿ ನಿಫಾ ವೈರಸ್ ಗೆ ತುತ್ತಾಗಿರುವವರ ಸಂಖ್ಯೆ 6ಕ್ಕೇರಿದೆ.
ಕರ್ನಾಟಕದಲ್ಲಿ ತೀವ್ರ ಕಟ್ಟೆಚ್ಚರ: ಪಕ್ಕದ ಕೇರಳ ರಾಜ್ಯದಲ್ಲಿ ನಿಫಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವಂತೆ ಕರ್ನಾಟಕ ಸರ್ಕಾರ ಸಾರ್ವಜನಿಕರಿಗೆ ಸಲಹೆ-ಸೂಚನೆಗಳನ್ನು ಹೊರಡಿಸಿದೆ.
ಕೇರಳದಲ್ಲಿ ಸೋಂಕು ಪೀಡಿತ ಪ್ರದೇಶಗಳಿಗೆ ಜನರು ಅನಗತ್ಯವಾಗಿ ಪ್ರಯಾಣಿಸದಂತೆ ಸರ್ಕಾರ ಸೂಚಿಸಿದ್ದು, ಗಡಿ ಜಿಲ್ಲೆಗಳಾದ ಕೊಡಗು, ದಕ್ಷಿಣ ಕನ್ನಡ, ಮೈಸೂರು, ಚಾಮರಾಜನಗರಗಳಲ್ಲಿ ತೀವ್ರ ಕಟ್ಟೆಚ್ಚರ, ತಪಾಸಣೆ, ಕಣ್ಗಾವಲನ್ನು ಹೆಚ್ಚಿಸಲಾಗಿದೆ. ಕರ್ನಾಟಕಕ್ಕೆ ಪ್ರವೇಶಿಸುವ ಕೇರಳದ ಗಡಿಭಾಗಗಳಲ್ಲಿ ತಪಾಸಣೆ ಹೆಚ್ಚಿಸಲಾಗಿದೆ ಎಂದು ಕರ್ನಾಟಕ ಆರೋಗ್ಯ ಇಲಾಖೆಯ ಅಧಿಸೂಚನೆ ತಿಳಿಸಿದೆ.
ರಾಜ್ಯದಲ್ಲಿ ಇದುವರೆಗೂ ಯಾವುದೇ ನಿಪಾ ಪ್ರಕರಣಗಳು ಪತ್ತೆಯಾಗಿಲ್ಲ. ಆದರೆ ಕೇರಳದ ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲು ಸೂಚಿಸಿದ್ದೇನೆ. ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ಆದರೆ ಆತಂಕ ಪಡುವ ಅಗತ್ಯವಿಲ್ಲ. ಆರೋಗ್ಯ ಇಲಾಖೆಯು ಎಲ್ಲಾ ಮುಂಜಾಗೃತ ಕ್ರಮಗಳನ್ನು ಕೈಗೊಂಡಿದೆ.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) September 14, 2023
We have not identified any Nipah cases in our state… pic.twitter.com/fP7YT4tfkd
ಕೇರಳದ ಕೋಝಿಕ್ಕೋಡ್ ಜಿಲ್ಲೆಯಲ್ಲಿ ನಿಫಾ ವೈರಸ್ ಏಕಾಏಕಿ ಏರಿಕೆಯಾದ ಹಿನ್ನೆಲೆಯಲ್ಲಿ ಮಾರಣಾಂತಿಕ ವೈರಸ್ ನ್ನು ಎದುರಿಸಲು ರಾಜ್ಯ ಸರ್ಕಾರಕ್ಕೆ ಪ್ರತಿಕಾಯವನ್ನು ಐಸಿಎಂಆರ್ ತಲುಪಿಸಿದೆ.
ನಿಫಾ ಮಾದರಿಗಳನ್ನು ಪರೀಕ್ಷೆಯನ್ನು ತ್ವರಿತವಾಗಿಸಲು ಮೊಬೈಲ್ ಪ್ರಯೋಗಾಲಯವನ್ನು ಕಳುಹಿಸಲಾಗಿದೆ. ಮೊನೊಕ್ಲೋನಲ್ ಪ್ರತಿಕಾಯವನ್ನು ಕೋಝಿಕ್ಕೋಡ್ನಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ವಿತರಿಸಿದೆ.
ವೈರಸ್ಗೆ ಚಿಕಿತ್ಸೆ ನೀಡಲು ಸರ್ಕಾರಕ್ಕೆ ಲಭ್ಯವಿರುವ ಏಕೈಕ ಆಯ್ಕೆ ಆಂಟಿವೈರಲ್ ಆಗಿದೆ, ಆದರೂ ಅದರ ಪರಿಣಾಮಕಾರಿತ್ವವನ್ನು ಪ್ರಾಯೋಗಿಕವಾಗಿ ಇನ್ನೂ ಸಾಬೀತುಪಡಿಸಲಾಗಿಲ್ಲ.
ನಿಫಾ ವೈರಸ್ ಗೆ ಎರಡು ಸಾವುಗಳು ಸೇರಿದಂತೆ ಐದು ಪ್ರಕರಣಗಳು ವರದಿಯಾದ ನಂತರ ಪುಣೆಯಲ್ಲಿರುವ ಐಸಿಎಂಆರ್ನ ರಾಷ್ಟ್ರೀಯ ವೈರಾಲಜಿ ಸಂಸ್ಥೆಯು ತನ್ನ ಮೊಬೈಲ್ ಬಿಎಸ್ಎಲ್ -3 (ಬಯೋಸೇಫ್ಟಿ ಲೆವೆಲ್ -3) ಪ್ರಯೋಗಾಲಯವನ್ನು ಕೋಝಿಕ್ಕೋಡ್ಗೆ ನಿಫಾ ವೈರಸ್ನ ಮಾದರಿಗಳನ್ನು ಪರೀಕ್ಷಿಸಲು ಕಳುಹಿಸಿದೆ.
ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ, ಆರ್ಎಂಎಲ್ ಆಸ್ಪತ್ರೆ ಮತ್ತು ನಿಮ್ಹಾನ್ಸ್ನ ತಜ್ಞರನ್ನೊಳಗೊಂಡ ಐದು ಸದಸ್ಯರ ಕೇಂದ್ರ ತಂಡವು ಕೇರಳದಲ್ಲಿ ಪರಿಸ್ಥಿತಿಯನ್ನು ಅವಲೋಕಿಸಲು ಮತ್ತು ನಿಫಾ ಸೋಂಕಿನ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರಕ್ಕೆ ಸಹಾಯ ಮಾಡಲು ಬೀಡುಬಿಟ್ಟಿದೆ.
ನಿಫಾ ವೈರಸ್ ಇರುವಿಕೆಯನ್ನು ಪರೀಕ್ಷಿಸಲು ಬಾವಲಿಗಳಿಂದ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ. ಆಂಟಿವೈರಲ್ನ ಸ್ಥಿರತೆಯ ಕುರಿತು ಕೇಂದ್ರ ತಜ್ಞರ ಸಮಿತಿಯೊಂದಿಗೆ ಚರ್ಚಿಸಲಾಗಿದೆ ಎಂದು ಕೇರಳ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ಮುಂದಿನ ಕ್ರಮಗಳನ್ನು ತಜ್ಞರ ಸಮಿತಿಯು ನಿರ್ಧರಿಸುತ್ತದೆ ಎಂದು ಹೇಳಿರುವ ಸಚಿವೆ ರಾಜ್ಯ ಮತ್ತು ಕೇಂದ್ರ ಆರೋಗ್ಯ ಸಚಿವಾಲಯದ ನಡುವಿನ ಸಮಾಲೋಚನೆಗಳನ್ನು ಉಲ್ಲೇಖಿಸಿದರು.
ಇದನ್ನೂ ಓದಿ: ಕೇರಳದಲ್ಲಿ 5ನೇ ನಿಫಾ ವೈರಸ್ ಪ್ರಕರಣ: ಆರೋಗ್ಯ ಸಿಬ್ಬಂದಿಗೆ ಸೋಂಕು ದೃಢ
ICMR ನ mBSL-3, ದಕ್ಷಿಣ ಏಷ್ಯಾದ ಮೊದಲ ಜೈವಿಕ ಸುರಕ್ಷತೆ ಮಟ್ಟ-3 ಕಂಟೈನ್ಮೆಂಟ್ ಮೊಬೈಲ್ ಪ್ರಯೋಗಾಲಯವು ಜಿಲ್ಲೆಯಲ್ಲಿ ಸೋಂಕಿನ ಆರಂಭಿಕ ಪರೀಕ್ಷೆ ಮತ್ತು ಪತ್ತೆಗೆ ಸಹಾಯ ಮಾಡುತ್ತದೆ.
ಇಲ್ಲಿಯವರೆಗೆ, ಮಾದರಿಗಳನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿತ್ತು.
ಹೆಚ್ಚು ಸಾಂಕ್ರಾಮಿಕ ಮತ್ತು ಮನುಷ್ಯರಿಗೆ ಮಾರಣಾಂತಿಕವಾಗಿ ಹೊಸದಾಗಿ ಹೊರಹೊಮ್ಮುತ್ತಿರುವ ಮತ್ತು ಮರುಕಳಿಸುವ ವೈರಲ್ ಸೋಂಕುಗಳನ್ನು ತನಿಖೆ ಮಾಡಲು ಕಳೆದ ವರ್ಷ ಫೆಬ್ರವರಿಯಲ್ಲಿ ಮೊಬೈಲ್ ಪ್ರಯೋಗಾಲಯವನ್ನು ಸ್ಥಾಪಿಸಲಾಯಿತು.
ವೈರಸ್ ಪರೀಕ್ಷೆ ಮತ್ತು ಪತ್ತೆಯನ್ನು ಬಲಪಡಿಸಲು ಉತ್ತರ ಕೇರಳ ಜಿಲ್ಲೆಗೆ ರಾಜೀವ್ ಗಾಂಧಿ ಸೆಂಟರ್ ಫಾರ್ ಬಯೋಟೆಕ್ನಾಲಜಿ (RGCB) ಯ ಸಂಪೂರ್ಣ ಸುಸಜ್ಜಿತ ಮೊಬೈಲ್ ವೈರಾಲಜಿ ಪರೀಕ್ಷಾ ಪ್ರಯೋಗಾಲಯವನ್ನು ಕಳುಹಿಸಲಾಗಿದೆ. ರಾಜ್ಯದಲ್ಲಿ ನಾಲ್ಕನೇ ಬಾರಿಗೆ ವೈರಲ್ ಸೋಂಕು ದೃಢಪಟ್ಟಿದೆ.
2018 ಮತ್ತು 2021 ರಲ್ಲಿ ಇದು ಕೋಝಿಕ್ಕೋಡ್ನಲ್ಲಿ ಮತ್ತು 2019 ರಲ್ಲಿ ಎರ್ನಾಕುಲಂನಲ್ಲಿ ಪತ್ತೆಯಾಗಿತ್ತು.
ICMR ನ ಬೆಂಬಲದೊಂದಿಗೆ ಅದರ ಬಳಕೆಗಾಗಿ ಪ್ರಮಾಣಿತ ಕಾರ್ಯಾಚರಣೆಯ ಕಾರ್ಯವಿಧಾನಗಳು ಮತ್ತು ಪ್ರೋಟೋಕಾಲ್ಗಳನ್ನು ಆ ಸಮಯದಲ್ಲಿ ಸಿದ್ಧಪಡಿಸಲಾಯಿತು.
ಆರ್ಜಿಸಿಬಿ ನಿರ್ದೇಶಕ ಪ್ರೊ.ಚಂದ್ರಭಾಸ್ ನಾರಾಯಣ, ಮೊಬೈಲ್ ಘಟಕದಲ್ಲಿ ಆರು ತಜ್ಞರ ಗುಂಪಿನ ಸೇವೆ ಲಭ್ಯವಿದ್ದು, ಮಾದರಿಗಳನ್ನು ಪರೀಕ್ಷಿಸಿದ ನಂತರ ಆರು ಗಂಟೆಗಳಲ್ಲಿ ಫಲಿತಾಂಶ ನೀಡಬಹುದು.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವೆ ಡಾ ಭಾರತಿ ಪ್ರವೀಣ್ ಪವಾರ್ ಅವರು ನಿಫಾ ಏಕಾಏಕಿ ನಿಯಂತ್ರಣಕ್ಕೆ ತೆಗೆದುಕೊಂಡ ಕ್ರಮಗಳನ್ನು ಪರಿಶೀಲಿಸಿದರು. ಸಿದ್ಧತೆಗಳ ಅವಲೋಕನಕ್ಕಾಗಿ ಪುಣೆಯ ಎನ್ಐವಿಗೆ ಭೇಟಿ ನೀಡಿದರು.
ಕೋಝಿಕ್ಕೋಡ್ ನಲ್ಲಿ ರಜೆ ಘೋಷಣೆ: ಇಂದು ಮತ್ತು ನಾಳೆ ಕೋಝಿಕೋಡ್ನಲ್ಲಿ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.
ಕೋಝಿಕ್ಕೋಡ್ನಲ್ಲಿ ನಿಫಾ ಏಕಾಏಕಿ ಸಂಭವಿಸುವ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಆದರೆ ಜನರು ತಮ್ಮ ದೈನಂದಿನ ಚಟುವಟಿಕೆಗಳಿಗೆ ಹೋಗುವಾಗ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಕೇರಳದಲ್ಲಿ ನಿಫಾ ಅಬ್ಬರ, ಮಹಾರಾಷ್ಟ್ರದಲ್ಲಿ ಝಿಕಾ ವೈರಸ್ ಹಾವಳಿ; ಇಬ್ಬರಿಗೆ ಸೋಂಕು
"ಯಾವುದೇ ಆತಂಕದ ಅಗತ್ಯವಿಲ್ಲ, ನಾವೆಲ್ಲರೂ ಒಟ್ಟಾಗಿ ಸಮಸ್ಯೆಯನ್ನು ಎಚ್ಚರಿಕೆಯಿಂದ ನಿಭಾಯಿಸಬಹುದು" ಎಂದು ಅವರು ಹೇಳಿದರು.ಕೋಝಿಕ್ಕೋಡ್ನ ನೆರೆಯ ಜಿಲ್ಲೆಗಳಾದ ಕಣ್ಣೂರು, ವಯನಾಡ್ ಮತ್ತು ಮಲಪ್ಪುರಂ ಜನತೆ ಕೂಡ ಜಾಗರೂಕರಾಗಿರಬೇಕು ಎಂದರು.
ಕೋಝಿಕ್ಕೋಡ್ ಜಿಲ್ಲೆಯಲ್ಲಿ 19 ಸದಸ್ಯರ ಕೋರ್ ಕಮಿಟಿ, ಕಾಲ್ ಸೆಂಟರ್ಗಳು ಮತ್ತು ನಿಯಂತ್ರಣ ಕೇಂದ್ರವನ್ನು ಸ್ಥಾಪಿಸಲಾಗಿದೆ, ಜೊತೆಗೆ ಅಲ್ಲಿನ ವೈದ್ಯಕೀಯ ಕಾಲೇಜಿನಲ್ಲಿ ಪ್ರತ್ಯೇಕತೆ, ವೆಂಟಿಲೇಟರ್ ಮತ್ತು ಐಸಿಯು ಸೌಲಭ್ಯಗಳನ್ನು ಸಹ ಸ್ಥಾಪಿಸಲಾಗಿದೆ ಎಂದು ಸಚಿವೆ ಹೇಳಿದರು.
ಹೆಚ್ಚುವರಿಯಾಗಿ, ಸೋಂಕಿತರಿಗೆ ಅಥವಾ ಅವರ ಕುಟುಂಬದ ಸದಸ್ಯರಿಗೆ ಸಲಹೆ ನೀಡಲು ಮಾನಸಿಕ ಸಾಮಾಜಿಕ ಬೆಂಬಲ ತಂಡಗಳನ್ನು ರಚಿಸಲಾಗಿದೆ. ಚಿಕಿತ್ಸೆಯ ಪ್ರೋಟೋಕಾಲ್ ನ್ನು ಇನ್ನಷ್ಟು ಸುಧಾರಿಸಲಾಗಿದೆ ಎಂದರು.
ಯಾರಿಗಾದರೂ ಶೀತ, ಜ್ವರ, ತಲೆನೋವು ಅಥವಾ ಕೆಮ್ಮಿನ ಲಕ್ಷಣಗಳು ಕಂಡುಬಂದಲ್ಲಿ ಮಾಸ್ಕ್ ಧರಿಸಲು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಮತ್ತು ಆರೋಗ್ಯ ಕಾರ್ಯಕರ್ತರನ್ನು ಸಂಪರ್ಕಿಸಲು ಸಲಹೆ ನೀಡಿದರು.
ಬಾವಲಿಗಳು ಇರುವ ಪ್ರದೇಶಗಳಲ್ಲಿ ತೆಂಗಿನಕಾಯಿ ಮತ್ತು ತಾಳೆ ಮರಗಳಿಂದ ತೆರೆದ ಪಾತ್ರೆಗಳಲ್ಲಿ ಸಂಗ್ರಹಿಸಿದ ಮದ್ಯವನ್ನು ಸೇವಿಸಬಾರದು.
ರಾಜ್ಯದಲ್ಲಿ ಕಂಡುಬರುವ ವೈರಸ್ ಸ್ಟ್ರೈನ್ ಬಾಂಗ್ಲಾದೇಶದ ರೂಪಾಂತರವಾಗಿದ್ದು ಅದು ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ. ಹೆಚ್ಚಿನ ಮರಣ ಪ್ರಮಾಣವನ್ನು ಹೊಂದಿದೆ, ಆದರೂ ಕಡಿಮೆ ಸಾಂಕ್ರಾಮಿಕವಾಗಿದೆ ಎಂದರು.
ಇದನ್ನೂ ಓದಿ: ಕೇರಳದಲ್ಲಿ ಹೆಚ್ಚಿದ ನಿಫಾ ವೈರಸ್, ಗಡಿ ಜಿಲ್ಲೆಗಳಲ್ಲಿ ತೀವ್ರ ಕಟ್ಟೆಚ್ಚರ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದೇನು?
WHO ಮತ್ತು ICMR ಅಧ್ಯಯನಗಳು ಕೋಝಿಕ್ಕೋಡ್ ಮಾತ್ರವಲ್ಲದೆ ಇಡೀ ಕೇರಳ ರಾಜ್ಯವು ಇಂತಹ ಸೋಂಕುಗಳಿಗೆ ಒಳಗಾಗುವ ಸಾಧ್ಯತೆಯಿದೆ ಎಂದು ಕಂಡುಹಿಡಿದಿದೆ.
ಅರಣ್ಯ ಪ್ರದೇಶದಲ್ಲಿ ವಾಸಿಸುವ ಜನರು ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ನಿಫಾ ವೈರಸ್ ಪ್ರಕರಣವು ಕಾಡಿನ ಪ್ರದೇಶದ ಐದು ಕಿಲೋಮೀಟರ್ಗಳಲ್ಲಿ ಹುಟ್ಟಿಕೊಂಡಿದೆ ಎಂದು ಹೇಳಿದೆ.
ಮೊನ್ನೆ ಬುಧವಾರ ಸಂಜೆಯವರೆಗೆ ಕೋಝಿಕ್ಕೋಡ್ ಜಿಲ್ಲೆಯಲ್ಲಿ ಸುಮಾರು 11 ವಾರ್ಡ್ಗಳನ್ನು ಕಂಟೈನ್ಮೆಂಟ್ ವಲಯ ಎಂದು ಘೋಷಿಸಲಾಗಿದೆ.