ಜೈಪುರ: ರಾಜಸ್ಥಾನದ ಅಲ್ವಾರ್ ಜಿಲ್ಲೆಯ ರಾಮಗಢ ಪ್ರದೇಶದಲ್ಲಿ ಮೇಲ್ಜಾತಿ ವ್ಯಕ್ತಿಯೊಬ್ಬನ ಬಕೆಟ್ ಮುಟ್ಟಿದ್ದಕ್ಕಾಗಿ ಎಂಟು ವರ್ಷದ ದಲಿತ ಬಾಲಕನನ್ನು ಥಳಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಬಾಲಕನ ತಂದೆ ನೀಡಿದ ದೂರಿನ ಪ್ರಕಾರ, ರತೀರಾಮ್ ಠಾಕೂರ್ ಶನಿವಾರ ಸರ್ಕಾರಿ ಶಾಲೆಯ ಕೈಪಂಪ್ ಬಳಿ ಇಟ್ಟಿದ್ದ ತನ್ನ ಬಕೆಟ್ ಅನ್ನು ಮುಟ್ಟಿದ ಕಾರಣಕ್ಕೆ ಬಾಲಕನ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾನೆ.
ಶಾಲೆಯ 4ನೇ ತರಗತಿ ವಿದ್ಯಾರ್ಥಿಯಾಗಿರುವ ಬಾಲಕ ಕೈಪಂಪ್ನಿಂದ ನೀರು ತರಲು ಹೋಗಿದ್ದ ವೇಳೆ ಆಕಸ್ಮಿಕವಾಗಿ ಬಕೆಟ್ ಮುಟ್ಟಿದ್ದಾನೆ.
"ತನ್ನ ಬಕೆಟ್ ಅನ್ನು ಮುಟ್ಟಿದ್ದಕ್ಕಾಗಿ ಠಾಕೂರ್ ನನ್ನ ಮಗನನ್ನು ಥಳಿಸಿದ್ದಾನೆ ಎಂದು ಆರೋಪಿಸಿ ಬಾಲಕನ ತಂದೆ ದೂರು ದಾಖಲಿಸಿದ್ದಾರೆ. ದೂರಿನ ಬಗ್ಗೆ ತನಿಖೆ ನಡೆಸಲಾಗುತ್ತಿದೆ" ಎಂದು ರಾಮಗಢ ಎಸ್ಎಚ್ಒ ಸವಾಯಿ ಸಿಂಗ್ ಅವರು ಹೇಳಿದ್ದಾರೆ.
ಠಾಕೂರ್ ತಮ್ಮ ಗ್ರಾಮದಲ್ಲಿ ಟೀ ಸ್ಟಾಲ್ ನಡೆಸುತ್ತಿದ್ದಾರೆ.
Advertisement