ವೆಲ್ಲೂರು: ಕಚ್ಚತೀವು ಮತ್ತು ಶಕ್ತಿ ಹೇಳಿಕೆಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಕಾಂಗ್ರೆಸ್ ಮತ್ತು ತಮಿಳುನಾಡಿನ ಆಡಳಿತಾರೂಢ ಡಿಎಂಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ದೇಶವನ್ನು ಕತ್ತಲೆಯಲ್ಲಿಟ್ಟಿದ್ದಾರೆ ಮತ್ತು ಮಹಿಳೆಯರನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಏಪ್ರಿಲ್ 19 ರಂದು ರಾಜ್ಯದಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆ ಅಂಗವಾಗಿ ಬಿಜೆಪಿ ಮತ್ತು ಎನ್ಡಿಎ ಅಭ್ಯರ್ಥಿಗಳ ಪರವಾಗಿ ಮತಯಾಚಿಸುವ ರ್ಯಾಲಿಯಲ್ಲಿ ಮಾತನಾಡಿದ ಅವರು, 'ಭ್ರಷ್ಟಾಚಾರದ ಮೊದಲ ಹಕ್ಕುಸ್ವಾಮ್ಯವನ್ನು ಡಿಎಂಕೆ ಹೊಂದಿದೆ, ಇಡೀ ಕುಟುಂಬ ತಮಿಳುನಾಡನ್ನು ಲೂಟಿ ಮಾಡುತ್ತಿದೆ. ಡಿಎಂಕೆಯು 'ಕುಟುಂಬ ಕಂಪನಿ'ಯಾಗಿದ್ದು, ತನ್ನ 'ಹಳೆಯ ಮನಸ್ಥಿತಿ'ಯಿಂದ ರಾಜ್ಯದ ಯುವಕರ ಪ್ರಗತಿಯನ್ನು ತಡೆಯುತ್ತಿದೆ' ಎಂದರು.
'ಡಿಎಂಕೆ ಜನರನ್ನು ಭಾಷೆ, ಪ್ರದೇಶ, ನಂಬಿಕೆ ಮತ್ತು ಜಾತಿ ಆಧಾರದ ಮೇಲೆ ವಿಭಜಿಸುತ್ತದೆ. ಜನರಿಗೆ ಇದು ತಿಳಿದ ನಂತರ ಒಂದೇ ಒಂದು ಮತವನ್ನು ನಮಗೆ ನೀಡುವುದಿಲ್ಲ ಎಂಬುದು ಡಿಎಂಕೆಗೆ ತಿಳಿದಿದೆ. ನಾನು ಡಿಎಂಕೆಯ ದಶಕಗಳ ಅಪಾಯಕಾರಿ ರಾಜಕೀಯವನ್ನು ಬಹಿರಂಗಪಡಿಸಲು ನಿರ್ಧರಿಸಿದ್ದೇನೆ. ಬಿಜೆಪಿ ದ್ರಾವಿಡರ ಹೃದಯದಲ್ಲಿ ಗಮನಾರ್ಹ ಸ್ಥಾನ ಪಡೆಯಲು ಉತ್ಸಾಹಭರಿತ ಹೋರಾಟ ಮಾಡುತ್ತಿದೆ' ಎಂದು ಮೋದಿ ಹೇಳಿದರು.
1974ರಲ್ಲಿ ಕಚ್ಚತೀವು ದ್ವೀಪವನ್ನು ಶ್ರೀಲಂಕಾಕ್ಕೆ ಬಿಟ್ಟುಕೊಟ್ಟಾಗ ಕೇಂದ್ರ ಮತ್ತು ರಾಜ್ಯದಲ್ಲಿ ಕ್ರಮವಾಗಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಮತ್ತು ಡಿಎಂಕೆಯನ್ನು ಮತ್ತೊಮ್ಮೆ ಗುರಿಯಾಗಿಸಿದ ಅವರು, ಯಾವ ಕ್ಯಾಬಿನೆಟ್ ಸಭೆಯಲ್ಲಿ ಇಂತಹ ನಿರ್ಧಾರಕ್ಕೆ ಬಂದರು ಮತ್ತು ಯಾರಿಗೆ ಲಾಭ ಮಾಡಿಕೊಡಲು. ಈ ಪ್ರಶ್ನೆಗಳಿಗೆ ಕಾಂಗ್ರೆಸ್ ಉತ್ತರ ನೀಡಿಲ್ಲ ಎಂದರು.
ಕಚ್ಚತೀವು ದ್ವೀಪವನ್ನು ಬಿಟ್ಟುಕೊಟ್ಟ ನಂತರ, ತಮಿಳುನಾಡಿನ ಮೀನುಗಾರರನ್ನು ಬಂಧಿಸಲಾಯಿತು ಮತ್ತು ಅವರ ದೋಣಿಗಳನ್ನು ವಶಪಡಿಸಿಕೊಳ್ಳಲಾಯಿತು. ಇದೀಗ ಕಾಂಗ್ರೆಸ್ ಮತ್ತು ಡಿಎಂಕೆ ಅವರ (ಮೀನುಗಾರರ) ಮೇಲೆ ನಕಲಿ ಸಹಾನುಭೂತಿ ತೋರಿಸುತ್ತವೆ. ಎನ್ಡಿಎ ಸರ್ಕಾರವು ಮೀನುಗಾರರ ಬಂಧನ ಅಥವಾ ಜೈಲುವಾಸದ ಪರಿಸ್ಥಿತಿಯಿಂದ ಶಾಶ್ವತವಾಗಿ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದ ಅವರು, ಶ್ರೀಲಂಕಾದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಐವರು ಭಾರತೀಯ ಮೀನುಗಾರರ ರಕ್ಷಣೆಯನ್ನು ಉಲ್ಲೇಖಿಸಿದರು.
'ರಾಜಕುಮಾರ ರಾಹುಲ್ ಗಾಂಧಿಯವರ' ಶಕ್ತಿ ಟೀಕೆಗಳ ಬಗ್ಗೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಅವರು 'ಹಿಂದೂಘಳ ನಂಬಿಕೆಯ ಶಕ್ತಿಯನ್ನು ನಾಶಪಡಿಸುವ' ಬಗ್ಗೆ ಮಾತನಾಡಿದ್ದಾರೆ. ಅದು ಡಿಎಂಕೆಯ ಮನಸ್ಥಿತಿಯೂ ಹೌದು. ಅವರು ಸನಾತನ ಧರ್ಮದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ, ರಾಮ ಮಂದಿರ ಉದ್ಘಾಟನೆ (ಅಯೋಧ್ಯೆಯಲ್ಲಿ) ಬಹಿಷ್ಕರಿಸುತ್ತಾರೆ, ಜೊತೆಗೆ ಹೊಸ ಸಂಸತ್ತಿನ ಕಟ್ಟಡದಲ್ಲಿ 'ಪವಿತ್ರ ಸೆಂಗೋಲ್' ಪ್ರತಿಷ್ಠಾಪನೆಯನ್ನು ನಿರ್ಲಕ್ಷ್ಯಿಸುತ್ತಾರೆ ಎಂದು ಅವರು ಹೇಳಿದರು.
ಇಂಡಿಯಾ ಮೈತ್ರಿಕೂಟದ ನಾಯಕರು ಮಹಿಳೆಯರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆ ಮತ್ತು ಅವರು ಬದುಕಿದ್ದಾಗ ಜಯಲಲಿತಾ ಅವರನ್ನು ಡಿಎಂಕೆ ಹೇಗೆ ನಡೆಸಿಕೊಂಡಿತು ಎಂಬುದು ಎಲ್ಲರಿಗೂ ತಿಳಿದಿದೆ. ಬಿಜೆಪಿ ಮತ್ತು ಎನ್ಡಿಎಗೆ ನಿಮ್ಮ ಆಶೀರ್ವಾದ ಸಿಕ್ಕರೆ ಸನಾತನ ಶಕ್ತಿಯನ್ನು ರಕ್ಷಿಸುತ್ತದೆ ಮತ್ತು ಮಹಿಳೆಯರ ಗೌರವವನ್ನು ಖಚಿತಪಡಿಸುತ್ತದೆ ಎಂದು ಪ್ರಧಾನಿ ಹೇಳಿದರು.
Advertisement