ಲೋಕಸಭಾ ಚುನಾವಣೆ: ಅಂಬೇಡ್ಕರ್ ಜನ್ಮದಿನದಂದು ಬಿಜೆಪಿ ಪ್ರಣಾಳಿಕೆ ಬಿಡುಗಡೆ
ನವದೆಹಲಿ: ಲೋಕಸಭೆ ಚುನಾವಣೆಗೆ ಬಿಜೆಪಿ ತನ್ನ ಪ್ರಣಾಳಿಕೆಯನ್ನು ಭಾನುವಾರ ಬಿಡುಗಡೆ ಮಾಡಲಿದ್ದು, ಕಲ್ಯಾಣ ಮತ್ತು ಅಭಿವೃದ್ಧಿಯ ಯೋಜನೆಗಳ ಜೊತೆಗೆ 'ವಿಕಸಿತ ಭಾರತಕ್ಕಾಗಿ ಮಾರ್ಗಸೂಚಿಯನ್ನು ತನ್ನ ಚುನಾವಣಾ ಕಾರ್ಯಸೂಚಿಯಲ್ಲಿ ಪ್ರಮುಖವಾಗಿ ಗುರುತಿಸುವ ನಿರೀಕ್ಷೆಯಿದೆ.
ದಲಿತ ಸಮುದಾಯದ ನಾಯಕ ಮತ್ತು ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಪ್ರಣಾಳಿಕೆ ಬಿಡುಗಡೆಯಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತಿತರ ಪಕ್ಷದ ಇತರ ಹಿರಿಯ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆಯಿದೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮತ್ತು 370 ನೇ ವಿಧಿ ರದ್ದು ಸೇರಿದಂತೆ ತನ್ನ ಪ್ರಮುಖ ಸೈದ್ಧಾಂತಿಕ ಭರವಸೆಗಳನ್ನು ಬಿಜೆಪಿ ಸರ್ಕಾರ ಈಡೇರಿಸಿರುವುದರಿಂದ, ಆಡಳಿತ ಪಕ್ಷದ ದೊಡ್ಡ ಸಾಂಸ್ಕೃತಿಕ ಮತ್ತು ಹಿಂದುತ್ವದ ಅಜೆಂಡಾಗಳು ಪ್ರಣಾಳಿಕೆಯಲ್ಲಿ ಹೇಗೆ ಇರುತ್ತವೆ ಎಂಬುದರ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ. ಯುವಕರು, ಮಹಿಳೆಯರು, ರೈತರು ಮತ್ತು ಬಡವರು ಎಂಬುದೇ ನಾಲ್ಕು ಜಾತಿಗಳು ಎಂದು ಆಗಾಗ್ಗೆ ಮಾತನಾಡುವ ಪ್ರಧಾನಿ ಮೋದಿ, ಇವರಿಗೆ ಪ್ರಣಾಳಿಕೆಯಲ್ಲಿ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆ ಹೆಚ್ಚಿದೆ.
ಬಿಜೆಪಿಯು ಜನರ ಸಲಹೆ ಪಡೆಯಲು ದೇಶಾದ್ಯಂತ ವಾಹನಗಳ ಮೂಲಕ ಪ್ರಚಾರ, ಸಾಮಾಜಿಕ ಮಾಧ್ಯಮ ಪ್ರಚಾರ ಸೇರಿದಂತೆ ಹಲವು ಕಸರತ್ತುಗಳನ್ನು ಪ್ರಾರಂಭಿಸಿದ ನಂತರ ಅದರ ವಿಷಯಗಳ ಕುರಿತು ಚರ್ಚಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಪ್ರಣಾಳಿಕೆ ಸಮಿತಿ ಎರಡು ಭಾರಿ ಸಭೆ ಸೇರಿತ್ತು.