ಬಿಜೆಪಿ ಪ್ರಣಾಳಿಕೆಯನ್ನು ಮತ್ತೆ ನಂಬುವುದು ಸರಿಯಲ್ಲ: ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದು, ಆಡಳಿತ ಪಕ್ಷವು ತನ್ನ ಅಧಿಕಾರವಧಿಯಲ್ಲಿ ದೇಶದ ಯುವಕರು ಮತ್ತು ರೈತರಿಗೆ ಲಾಭದಾಯಕವಾಗಬಹುದಾದಂತ ಯಾವುದೇ ದೊಡ್ಡ ಬದಲಾವಣೆಯನ್ನು ಮಾಡಿಲ್ಲ ಎಂದು ದೂರಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದು, ಆಡಳಿತ ಪಕ್ಷವು ತನ್ನ ಅಧಿಕಾರವಧಿಯಲ್ಲಿ ದೇಶದ ಯುವಕರು ಮತ್ತು ರೈತರಿಗೆ ಲಾಭದಾಯಕವಾಗಬಹುದಾದಂತ ಯಾವುದೇ ದೊಡ್ಡ ಬದಲಾವಣೆಯನ್ನು ಮಾಡಿಲ್ಲ ಎಂದು ದೂರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ಬಿಜೆಪಿಯ ಪ್ರಣಾಳಿಕೆಯನ್ನು ಮತ್ತೆ ನಂಬಲು ಸಾಧ್ಯವಿಲ್ಲ ಎಂದಿದ್ದಾರೆ.

ಲೋಕಸಭಾ ಚುನಾವಣೆ ಅಂಗವಾಗಿ ಭಾನುವಾರ ಬಿಜೆಪಿ ಸಂಕಲ್ಪ ಪತ್ರ ಹೆಸರಿನಲ್ಲಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ರಾಜನಾಥ್ ಸಿಂಗ್ ಅವರ ಉಪಸ್ಥಿತಿಯಲ್ಲಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.

'ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ, ಎಂಎಸ್‌ಪಿ ಹೆಚ್ಚಿಸುವುದಾಗಿ ಮತ್ತು ಕಾನೂನು ಖಾತರಿ ನೀಡುವುದಾಗಿ ಅವರು (ಪ್ರಧಾನಿ ನರೇಂದ್ರ ಮೋದಿ) ಹೇಳಿದ್ದರು. ಆದರೆ, ಅವುಗಳೆಲ್ಲಾ ಗ್ಯಾರಂಟಿಗಳಾಗಿಯೇ ಉಳಿದಿವೆ. ಅವರು ತಮ್ಮ ಅಧಿಕಾರಾವಧಿಯಲ್ಲಿ ದೇಶದ ಜನರಿಗೆ ಒಳಿತಾಗುವಂತಹ ಯಾವುದೇ ದೊಡ್ಡ ಕೆಲಸವನ್ನು ಮಾಡಲಿಲ್ಲ. ಯುವಕರು ಉದ್ಯೋಗಕ್ಕಾಗಿ ಎದುರು ನೋಡುತ್ತಿದ್ದಾರೆ. ಹಣದುಬ್ಬರ ಏರಿಕೆಯಾಗಿದೆ. ಮೋದಿಯವರು ದೇಶದಲ್ಲಿನ ನಿರುದ್ಯೋಗ ಮತ್ತು ಹಣದುಬ್ಬರದ ಬಗ್ಗೆ ಗಮನ ಹರಿಸುತ್ತಿಲ್ಲ' ಎಂದು ಆರೋಪಿಸಿದರು.

ಲೋಕಸಭೆ ಚುನಾವಣೆಗೆ ಬಿಜೆಪಿ ತನ್ನ ಪ್ರಣಾಳಿಕೆಯನ್ನು 'ಮೋದಿ ಅವರ ಗ್ಯಾರಂಟಿ 2024' ಎಂಬ ಅಡಿಬರಹದೊಂದಿಗೆ ಬಿಡುಗಡೆ ಮಾಡಿದೆ. 'ಸಂಕಲ್ಪ ಪತ್ರ'ವು ಮಹಿಳಾ ಸಬಲೀಕರಣ ಮತ್ತು ಯುವಕರು ಮತ್ತು ಬಡವರ ಉನ್ನತಿಯನ್ನು ಕೇಂದ್ರೀಕರಿಸಿದೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ಬಿಜೆಪಿ 'ಸಂಕಲ್ಪ ಪತ್ರ': ಬಡವರು, ಯುವಜನರು, ರೈತರು, ಮಹಿಳೆಯರಿಗೆ 'ಮೋದಿ ಗ್ಯಾರಂಟಿ'

ಆಡಳಿತ ಪಕ್ಷದ ಬಳಿ ಜನರಿಗೆ ನೀಡಲು ಏನೂ ಇಲ್ಲ ಎಂಬುದನ್ನು ಬಿಜೆಪಿಯ ಪ್ರಣಾಳಿಕೆ ಸಾಬೀತುಪಡಿಸುತ್ತದೆ. ಅವರ ಪ್ರಣಾಳಿಕೆಯನ್ನು ಮತ್ತೆ ನಂಬುವುದು ಸರಿಯಲ್ಲ. ಇದು ಜನರಿಗೆ ಹೊಸದಾಗಿ ನೀಡಲು ಏನೂ ಇಲ್ಲ ಎಂಬುದನ್ನು ತೋರಿಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದರು.

ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯೂ ಆಗಿರುವ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ, 'ಜನಸಾಮಾನ್ಯರು ಹಣದುಬ್ಬರದಿಂದಾಗಿ ಏಕೆ ತತ್ತರಿಸುತ್ತಿದ್ದಾರೆ ಎಂಬುದನ್ನು ಜನರು ತಿಳಿದುಕೊಳ್ಳಲು ಬಯಸುತ್ತಾರೆ. ಕಳೆದ 10 ವರ್ಷಗಳಿಂದ ಜನರಿಗೆ ತೊಂದರೆ ಕೊಡುವ ನೈಜ ಸಮಸ್ಯೆಗಳಿವೆ. ಈ ಅಸಮಾಧಾನವು ಎನ್‌ಡಿಎ-ಬಿಜೆಪಿಗೆ ಚುನಾವಣಾ ಸೋಲಿಗೆ ಕಾರಣವಾಗಲಿದೆ ಎಂದು ಅವರು ಹೇಳಿದರು.

18ನೇ ಲೋಕಸಭೆಗೆ 543 ಪ್ರತಿನಿಧಿಗಳನ್ನು ಆಯ್ಕೆ ಮಾಡಲು ದೇಶದಲ್ಲಿ ಲೋಕಸಭೆ ಚುನಾವಣೆಯು ಏಪ್ರಿಲ್ 19 ರಿಂದ ಜೂನ್ 1 ರವರೆಗೆ ಏಳು ಹಂತಗಳಲ್ಲಿ ನಡೆಯಲಿದೆ. ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com