ಹೈದರಾಬಾದ್: ಆಘಾತಕಾರಿ ಘಟನೆಯೊಂದರಲ್ಲಿ, ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದ ನಂತರ ಬೈಕ್ಗೆ ಡಿಕ್ಕಿ ಹೊಡೆದಿದ್ದು, ಬೈಕ್ ಅನ್ನು ಒಂದು ಕಿಲೋಮೀಟರ್ ಎಳೆದೊಯ್ದಿರುವ ಘಟನೆ ಬುಧವಾರ ಹೈದರಾಬಾದ್ ನಲ್ಲಿ ನಡೆದಿದೆ.
ಲಾರಿ ಚಾಲಕ ಸೂರ್ಯಪೇಟೆಯ ಪೃಥ್ವಿರಾಜ್, ಚಂದ್ರಾಯನಗುಟ್ಟದಿಂದ ವನಸ್ಥಲಿಪುರಂ ಮಾರ್ಗವಾಗಿ ತೆರಳುತ್ತಿದ್ದ ವೇಳೆ ಆಕಸ್ಮಿಕವಾಗಿ ಸಮೀಪದ ಕಾರಿಗೆ ಡಿಕ್ಕಿ ಹೊಡೆಸಿದ್ದಾರೆ. ಇದರಿಂದ ಆಕ್ರೋಶಗೊಂಡ ಬೈಕ್ ಗಳಲ್ಲಿ ತೆರಳುತ್ತಿದ್ದ ಐವರು ಯುವಕರು ಲಾರಿಯನ್ನು ಹಿಂಬಾಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಯುವಕರ ನಡವಳಿಕೆಯಿಂದ ಹೆದರಿದ ಚಾಲಕ, ಅವರಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಹಿಂಬಾಲಿಸುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆಸಿದ್ದಾರೆ. ಮತ್ತಷ್ಟು ಗಾಬರಿಗೊಂಡ ಲಾರಿ ಚಾಲಕ, ಬೈಕ್ ಅನ್ನು ಒಂದು ಕಿಲೋಮೀಟರ್ ದೂರದವರೆಗೆ ಎಳೆದುಕೊಂಡು ಹೋಗಿದ್ದಾರೆ. ಅದೃಷ್ಟವಶಾತ್ ಬೈಕ್ ಸವಾರ ಸುರಕ್ಷಿತವಾಗಿ ರಸ್ತೆಬದಿಯಲ್ಲಿ ಬಿದ್ದಿದ್ದಾರೆ.
ಹಿಂಬಾಲಿಸಿದವರಲ್ಲಿ ಒಬ್ಬ ಯುವಕ ಲಾರಿ ಮೇಲೆ ಹತ್ತಿದ್ದು, ಚಾಲಕನಿಗೆ ವಾಹನ ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ. ಕೊನೆಗೆ ಚಾಲಕ ತನ್ನ ಲಾರಿಯನ್ನು ವನಸ್ಥಲಿಪುರಂನಲ್ಲಿ ನಿಲ್ಲಿಸಿ ವನಸ್ಥಲಿಪುರಂ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ.
ಬೈಕ್ ಸವಾರನ ದೂರಿನ ಆಧಾರದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement