ನವದೆಹಲಿ: ಜಾರಿ ನಿರ್ದೇಶನಾಲಯ(ಇಡಿ)ವು ತಾನು ಜೈಲಿನಲ್ಲಿ ತಿನ್ನುವ ಆಹಾರದಲ್ಲೂ "ಕ್ಷುಲ್ಲಕ ರಾಜಕೀಯ" ಮಾಡುತ್ತಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶುಕ್ರವಾರ ನ್ಯಾಯಾಲಯದಲ್ಲಿ ಕೇಂದ್ರ ತನಿಖಾ ಸಂಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ತಾನು ಸೇವಿಸಿದ ಆಹಾರವು ತಮ್ಮ ವೈದ್ಯರು ಸಿದ್ಧಪಡಿಸಿದ ಡಯಟ್ ಚಾರ್ಟ್ಗೆ ಅನುಗುಣವಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ವೈದ್ಯಕೀಯ ಆಧಾರದ ಮೇಲೆ ಜಾಮೀನು ಪಡೆಯಲುಕೇಜ್ರಿವಾಲ್ ಅವರು ಟೈಪ್ 2 ಡಯಾಬಿಟಿಸ್ನ ಹೊರತಾಗಿಯೂ ಪ್ರತಿದಿನ ಮಾವಿನಹಣ್ಣು ಮತ್ತು ಸಿಹಿತಿಂಡಿಗಳಂತಹ ಸಕ್ಕರೆಯ ಆಹಾರವನ್ನು ಸೇವಿಸುತ್ತಿದ್ದಾರೆ ಎಂದು ಇಡಿ ಗುರುವಾರ ನ್ಯಾಯಾಲಯದ ಮುಂದೆ ಆರೋಪಿಸಿತ್ತು.
ಎಎಪಿ ನಾಯಕ ಇಂದು ಹೊಸ ಅರ್ಜಿಯನ್ನು ಸಲ್ಲಿಸಿದ್ದು, ಜೈಲು ಅಧಿಕಾರಿಗಳಿಗೆ ಇನ್ಸುಲಿನ್ ನೀಡಲು ನಿರ್ದೇಶನ ನೀಡುವಂತೆ ಕೋರಿದ್ದಾರೆ ಮತ್ತು ತನ್ನ ತೀವ್ರವಾದ ಮಧುಮೇಹ ಮತ್ತು ರಕ್ತದಲ್ಲಿನ ಸಕ್ಕರೆಯ ಪ್ರಮಾಣದಲ್ಲಿ ಏರಿಳಿತವಾಗುತ್ತಿರುವುದರಿಂದ, ಪ್ರತಿದಿನ 15 ನಿಮಿಷಗಳ ಕಾಲ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ವೈದ್ಯರೊಂದಿಗೆ ಸಮಾಲೋಚಿಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.
ದೆಹಲಿ ಮುಖ್ಯಮಂತ್ರಿಯವರ ಪತ್ನಿ ಸುನೀತಾ ಕೇಜ್ರಿವಾಲ್ ಅವರಿಗೂ ವಿಡಿಯೋ ಕಾನ್ಫರೆನ್ಸ್ ಮೂಲಕ ಡಾ. ರವಿಚಂದ್ರರಾವ್ ಅವರೊಂದಿಗೆ ಸಮಾಲೋಚನೆಗೆ ಅವಕಾಶ ನೀಡಬೇಕು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
"ನಾನು ಜಾಮೀನು ಪಡೆಯಲು ನನ್ನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಬಯಸುತ್ತೇನೆ ಎಂದು ಇಡಿ ಹೇಳಿದೆ. ಜಾಮೀನು ಪಡೆಯಲು ನಾನು ಪ್ಯಾರಾಲಿಸಿಸ್ ಅಪಾಯಕ್ಕೆ ಒಳಗಾಗುತ್ತೇನೆಯೇ? ನನ್ನ ವೈದ್ಯರು ಬಂಧಿಸುವ ಮೊದಲು ಸಿದ್ಧಪಡಿಸಿದ ಆಹಾರಕ್ರಮದ ಚಾರ್ಟ್ ಪ್ರಕಾರವೇ ನಾನು ಆಹಾರ ತೆಗೆದುಕೊಳ್ಳುತ್ತಿದ್ದೇನೆ" ಎಂದು ಕೇಜ್ರಿವಾಲ್ ಪರ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
''ಮಾವಿನ ಹಣ್ಣನ್ನು ಸೇವಿಸುತ್ತಿದ್ದೇನೆ ಎಂಬ ಇಡಿ ಆರೋಪಕ್ಕೆ.... ಮನೆಯಿಂದ ಕಳುಹಿಸಿದ 48 ಊಟಗಳಲ್ಲಿ ಮೂರು ಬಾರಿ ಮಾತ್ರ ಮಾವಿನ ಹಣ್ಣು ಇತ್ತು. ಏಪ್ರಿಲ್ 8ರ ನಂತರ ಯಾವುದೇ ಮಾವಿನ ಹಣ್ಣುಗಳನ್ನು ನೀಡಿಲ್ಲ. ಮಾವಿನ ಕಾಯಿಗಳನ್ನು ಶುಗರ್ ಬುಲೆಟ್ನಂತೆ ಬಳಸಲಾಗಿದೆ. ಅವುಗಳ ಸಕ್ಕರೆ ಮಟ್ಟ (ಗ್ಲೈಸೆಮಿಕ್ ಇಂಡೆಕ್ಸ್) ಬ್ರೌನ್ ರೈಸ್ ಅಥವಾ ವೈಟ್ ರೈಸ್ಗಿಂತ ತುಂಬಾ ಕಡಿಮೆ" ಎಂದು ಸಿಂಘ್ವಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
Advertisement