ನವದೆಹಲಿ: ಅರವಿಂದ್ ಕೇಜ್ರಿವಾಲ್ ಇನ್ಸುಲಿನ್ ಕುರಿತ ವರದಿಯನ್ನು ತಿಹಾರ ಜೈಲಿನ ಅಧಿಕಾರಿಗಳು ದೆಹಲಿ ಲೆಫ್ಟಿನೆಂಟ್ ಗವರ್ನರ್ ಗೆ ತಲುಪಿಸಿದ್ದಾರೆ.
ಜೈಲು ಅಧಿಕಾರಿಗಳು ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ ಅವರಿಗೆ ತಲುಪಿಸಿದ ವರದಿಯನ್ನು ಉಲ್ಲೇಖಿಸಿ ಮಾಹಿತಿ ನೀಡಿರುವ ಅಧಿಕಾರಿಗಳು, ಕೇಜ್ರಿವಾಲ್ ತಾವು ಬಂಧನಕ್ಕೆ ಒಳಗಾಗುವ ಹಲವು ತಿಂಗಳ ಹಿಂದೆಯೇ ಇನ್ಸುಲಿನ್ ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದರು ಹಾಗೂ ಮಧುಮೇಹಕ್ಕೆ ಸಾಮಾನ್ಯವಾದ ಔಷಧಿಯನ್ನೇ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷ ಕೇಜ್ರಿವಾಲ್ ಅವರ ಮಧುಮೇಹ ಸಮಸ್ಯೆ ಬಗ್ಗೆ ಭಯ ಹುಟ್ಟಿಸುವಂತಹ ಕಥೆ ಹೇಳುತ್ತಿದೆ. ಇದು ತೆಲಂಗಾಣ ಮೂಲದ ಖಾಸಗಿ ಚಿಕಿತ್ಸಾಲಯದಿಂದ ಕೇಜ್ರಿವಾಲ್ಗೆ ಉದ್ದೇಶಿಸಲಾದ ಚಿಕಿತ್ಸೆಯನ್ನು ಆಧರಿಸಿದೆ. ತೆಲಂಗಾಣದ ವೈದ್ಯರು ಸೂಚಿಸಿದಂತೆಯೇ ಕೇಜ್ರಿವಾಲ್ ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದರು ಹಾಗೂ ಅವರು ಬಂಧನಕ್ಕೆ ಒಳಗಾಗುವ ಹಲವು ತಿಂಗಳ ಹಿಂದೆಯೇ ಇನ್ಸುಲಿನ್ ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕಿ ಆತಿಶಿ, ವರದಿಯು ಬಿಜೆಪಿಯ "ಪಿತೂರಿ"ಯನ್ನು "ಬಹಿರಂಗಪಡಿಸಿದೆ" ಎಂದಿದ್ದಾರೆ. "ಬಿಜೆಪಿಯವರ ಒತ್ತಾಯದ ಮೇರೆಗೆ ಕೇಜ್ರಿವಾಲ್ ಅವರನ್ನು ಜೈಲಿನಲ್ಲಿ ಕೊಲ್ಲಲು ಸಂಚು ನಡೆಯುತ್ತಿದೆ, ಮುಖ್ಯಮಂತ್ರಿಗಳು 12 ವರ್ಷಗಳಿಂದ ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದಾರೆ, ಅವರಿಗೆ ಇನ್ಸುಲಿನ್ ನೀಡಲು ತಿಹಾರ್ ಆಡಳಿತಕ್ಕೆ ಏನು ತೊಂದರೆ?" ಎಂದು ಪ್ರಶ್ನಿಸಿದ್ದಾರೆ.
ಕೇಜ್ರಿವಾಲ್ ಜೈಲಿಗೆ ಕಳುಹಿಸುವ ಮೊದಲು ಪ್ರತಿದಿನ 50 ಯೂನಿಟ್ ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದರು ಎಂದು ದೆಹಲಿ ಸಚಿವರು ಹೇಳಿದ್ದಾರೆ.
ಆರ್ಎಂಎಲ್ ಆಸ್ಪತ್ರೆಯ ವೈದ್ಯಕೀಯ ದಾಖಲೆಗಳ ಪ್ರಕಾರ, ಕೇಜ್ರಿವಾಲ್ ಅವರಿಗೆ "ಯಾವುದೇ ಇನ್ಸುಲಿನ್ ಅಥವಾ ಯಾವುದೇ ಇನ್ಸುಲಿನ್ ಅಗತ್ಯವನ್ನು ಸೂಚಿಸಲಾಗಿಲ್ಲ" ಎಂದು ತಿಹಾರ್ ವರದಿ ಹೇಳಿದೆ ಮತ್ತು ಏಪ್ರಿಲ್ 10 ಮತ್ತು ಏಪ್ರಿಲ್ 15 ರಂದು ಸಿಎಂ ಆರೋಗ್ಯವನ್ನು ವೈದ್ಯಕೀಯ ತಜ್ಞರು ಪರಿಶೀಲಿಸಿದ್ದಾರೆ ಎಂದು ಜೈಲಿನ ಅಧಿಕಾರಿಗಳು ಹೇಳಿದ್ದಾರೆ.
Advertisement