ಜೈಸಲ್ಮೇರ್: ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯಲ್ಲಿ ಭಾರತೀಯ ವಾಯುಪಡೆಯ ಮಾನವ ರಹಿತ ಬೇಹುಗಾರಿಕಾ ವಿಮಾನ ಪತನಗೊಂಡಿದ್ದು, ಪ್ರಕರಣದ ಕುರಿತು ತನಿಖೆಗೆ ಆದೇಶಿಸಲಾಗಿದೆ.
ಜೈಸಲ್ಮೇರ್ ಜಿಲ್ಲಾ ಕೇಂದ್ರದಿಂದ 30 ಕಿಲೋಮೀಟರ್ ದೂರದಲ್ಲಿರುವ ರೋಜಾನಿ ಕಿ ಧನಿ ಜಜಿಯಾ ಗ್ರಾಮದ ಬಳಿ ಅಪಘಾತ ಸಂಭವಿಸಿದ್ದು, ಈ ಬಗ್ಗೆ ಮಾಹಿತಿ ಬಂದ ತಕ್ಷಣ ಜಿಲ್ಲಾಡಳಿತದೊಂದಿಗೆ ವಾಯುಪಡೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.
ಅಪಘಾತದಿಂದ ವಿಮಾನದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಅಗ್ನಿಶಾಮಕ ದಳವು ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದೆ. ಈ ವಿಮಾನವನ್ನು ಬೇಹುಗಾರಿಕೆ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಡಲು ನಿಯೋಜಿಸಲಾಗಿತ್ತು.
ಜೈಸಲ್ಮೇರ್ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಚೌಧರಿ ಘಟನೆ ಬಗ್ಗೆ ಮಾತನಾಡಿ, 'ವಿಮಾನವು ತನ್ನ ದೈನಂದಿನ ತರಬೇತಿ ವೇಳೆ ಅಪಘಾತಕ್ಕೀಡಾಗಿ ಗ್ರಾಮೀಣ ಪ್ರದೇಶದ ಖಾಲಿ ಜಾಗದಲ್ಲಿ ಬಿದ್ದಿದ್ದು, ಯಾವುದೇ ಪ್ರಾಣ ಅಥವಾ ಆಸ್ತಿ ಹಾನಿಯಾಗಿಲ್ಲ ಎಂದು ತಿಳಿಸಿದ್ದಾರೆ.
ತನಿಖೆಗೆ ಆದೇಶ
ಈ ಬೇಹುಗಾರಿಕಾ ವಿಮಾನವು ಗಡಿ ಪ್ರದೇಶದಲ್ಲಿ ಕಣ್ಗಾವಲು ಕಾಯುವುದಾಗಿದೆ. ಇದು ಮಾನವರಹಿತ ವಿಮಾನವಾಗಿದೆ. ಹೀಗಾಗಿ ಈ ಘಟನೆಯಿಂದ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಅಪಘಾತಕ್ಕೆ ಕಾರಣವೇನೆಂಬುದನ್ನು ಪತ್ತೆ ಹಚ್ಚಲು ವಾಯುಪಡೆ ತನಿಖೆಗೆ ಆದೇಶಿಸಿದೆ.
Advertisement