ನವದೆಹಲಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ಗೆ ಪತ್ರ ಬರೆದ ಬೆನ್ನಲ್ಲೇ ಬಿಜೆಪಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಹಳೆಯ ವಿಡಿಯೋವೊಂದನ್ನು ಶೇರ್ ಮಾಡುವ ಮೂಲಕ ತಿರುಗೇಟು ನೀಡಿದೆ.
ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಭಾರಿ ವಾಕ್ಸಮರಕ್ಕೆ ಕಾರಣವಾಗಿರುವ ಕಾಂಗ್ರೆಸ್ ಪ್ರಣಾಳಿಕೆ ಮತ್ತು ಮುಸ್ಲಿಮರಿಗೆ ಸಂಪತ್ತು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಇಂದು ತಿರುಗೇಟು ನೀಡಿದ್ದು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಹಳೆಯ ವಿಡಿಯೋವೊಂದನ್ನು ಅಪ್ಲೋಡ್ ಮಾಡಿದೆ.
ವಿಡಿಯೋದಲ್ಲಿ ಅಲ್ಪಸಂಖ್ಯಾತರು ಇತರರಿಗಿಂತ ಹೆಚ್ಚು ವಿಶೇಷ ಸವಲತ್ತು ಪಡೆಯಲು ಅರ್ಹರು ಎಂದು ಮನಮೋಹನ್ ಸಿಂಗ್ ಹೇಳಿದ್ದಾರೆ ಎನ್ನಲಾಗಿದೆ.
2009ರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿದ್ದು, ಈ ವಿಡಿಯೋದಲ್ಲಿ ಅಲ್ಪಸಂಖ್ಯಾತರು, ಅದರಲ್ಲೂ ಮುಸ್ಲಿಂ ಅಲ್ಪ ಸಂಖ್ಯಾತರು ಒಂದು ವೇಳೆ ಬಡವರಾಗಿದ್ದರೆ ಅವರಿಗೆ ಮೊದಲ ಆದ್ಯತೆ ಕೊಟ್ಟು ಸವಲತ್ತುಗಳನ್ನು ಕೊಡಬೇಕು.
ರಾಷ್ಟ್ರೀಯ ಸಂಪತ್ತಿನ ಹಂಚಿಕೆ ವಿಚಾರ ಬಂದಾಗ ಮುಸ್ಲಿಮರಿಗೆ ಮೊದಲ ಆದ್ಯತೆ ಕೊಡಬೇಕು. ರಾಷ್ಟ್ರೀಯ ಸಂಪತ್ತಿನಲ್ಲಿ ಮೊದಲ ಹಕ್ಕು ಮುಸ್ಲಿಮರದ್ದು ಎಂದು ಮನಮೋಹನ್ ಸಿಂಗ್ ಹೇಳಿದ್ದಾರೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ದೇಶದ ಸಂಪತ್ತಿನಲ್ಲಿ ಮುಸ್ಲಿಮರಿಗೇ ಮೊದಲ ಅಧಿಕಾರ ಇತ್ತು. ಕಾಂಗ್ರೆಸ್ನವರು ದೇಶದ ಸಂಪತ್ತನ್ನು ಒಟ್ಟುಗೂಡಿಸಿ ಅಕ್ರಮ ವಲಸಿಗರು, ಹೆಚ್ಚು ಮಕ್ಕಳನ್ನು ಹೊಂದಿರುವ ಸಮುದಾಯಕ್ಕೆ ನೀಡಲಿದೆ. ನಿಮ್ಮ ಶ್ರಮದ ಹಣವನ್ನು ಅಕ್ರಮ ವಲಸಿಗರಿಗೆ ನೀಡಬೇಕೆ? ನೀವು ಇದನ್ನು ಒಪ್ಪುವಿರೇ? ಕಾಂಗ್ರೆಸ್ ಪ್ರಣಾಳಿಕೆ ಇದನ್ನು ಹೇಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ಭಾಷಣದಲ್ಲಿ ಹೇಳಿದ್ದರು.
ಇದೇ ವಿಡಿಯೋವನ್ನು ಮುಂದಿಟ್ಟುಕೊಂಡು ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕರ ವಿರುದ್ದ ವಾಗ್ದಾಳಿ ನಡೆಸಿದ್ದು, 'ಸಂಪತ್ತಿನ ಹಂಚಿಕೆ ಬಗ್ಗೆ ನೀಡಿರುವ ಹೇಳಿಕೆಗೆ ಸ್ಪಷ್ಟನೆ ನೀಡುತ್ತಿರುವ ಕಾಂಗ್ರೆಸ್ ನಿಜವಾದ ಉದ್ದೇಶ ಏನಿದೆ ಏಂಬುದಕ್ಕೆ ಈ ವಿಡಿಯೋ ಸಾಕ್ಷಿ. ಎಲ್ಲಾ ವಿಚಾರದಲ್ಲಿ ಕಾಂಗ್ರೆಸ್ ಮುಸ್ಲಿಂ ಓಲೈಕೆ ಮನಸ್ಥಿತಿಹ ಹೊಂದಿರುರುವುದು ಸ್ಪಷ್ಟವಾಗಿದೆ. ಕಾಂಗ್ರೆಸ್ ಇದೀಗ ಮೀಸಲಾತಿಯಿಂದ ಸಂಪನ್ಮೂಲ ಹಂಚಿಕೆಯತ್ತ ತನ್ನ ಗುರಿಯನ್ನು ಹೊಂದಿದೆ' ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಮತ್ತೆ ಕಾಂಗ್ರೆಸ್ ಸ್ಪಷ್ಟನೆ
ಈ ವಿಚಾರ ರಾಜಕೀಯ ತಿರುವು ಪಡ್ದುಕೊಳ್ಳುತಿದ್ದಂತೆ ಸ್ಪಷ್ಟನೆ ಕೊಟ್ಟ ಕಾಂಗ್ರೆಸ್, ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಅಂತಹ ಯಾವುದೇ ಭರವಸೆ ನೀಡಿಲ್ಲ ಎಂದು ಹೇಳಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಷ್ಟ್ರ್ರವ್ಯಾಪಿ ಸಾಮಾಜಿಕ-ಆರ್ಥಿಕ ಮತ್ತು ಜಾತಿ ಸಮೀಕ್ಷೆ ನಡೆಸುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಭರವಸೆ ಕೊಟ್ಟಿದೆ.
Advertisement