
ಚೆನ್ನೈ: ಡಿಎಂಕೆ ಸಂಸ್ಥಾಪಕ ದಿವಂಗತ ಎಂ. ಕರುಣಾನಿಧಿ ಅವರ ಜನ್ಮಶತಮಾನೋತ್ಸವ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಾಲ್ಗೊಂಡ ಬಳಿಕ ಬಿಜೆಪಿಯೊಂದಿಗೆ ರಹಸ್ಯ ಮೈತ್ರಿ ಕುರಿತ ಊಹಾಪೋಹಗಳು ಕೇಳಿಬರುತ್ತಿವೆ.
ಈ ಕುರಿತು ಸೋಮವಾರ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಕರುಣಾನಿಧಿ ಅವರ ಸ್ಮರಣಾರ್ಥ ನಾಣ್ಯ ಬಿಡುಗಡೆ ಮಾಡಲು ರಕ್ಷಣಾ ಸಚಿವರನ್ನು ಆಹ್ವಾನಿಸದ ಮಾತ್ರಕ್ಕೆ ಬಿಜೆಪಿಯೊಂದಿಗೆ ಯಾವುದೇ ಸಂಬಂಧ ಹೊಂದುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಡಿಎಂಕೆ ತನ್ನ ತತ್ವ ಸಿದ್ಧಾಂತಗಳನ್ನು ಬದ್ಧವಾಗಿದ್ದು, ವಿರೋಧಿಸಬೇಕೆ ಅಥವಾ ಬೆಂಬಲ ನೀಡಬೇಕೆ" ಎಂಬ ಅದರ ನಿಲುವು ಪಕ್ಷದ ಸಿದ್ಧಾಂತವನ್ನು ಆಧರಿಸಿದೆ ಎಂದು ತಿಳಿಸಿದ್ದಾರೆ.
ಭಾನುವಾರ ಚೆನ್ನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಜನಾಥ್ ಸಿಂಗ್, ಕರುಣಾನಿಧಿ ಅವರು ದೇಶದ ಅತ್ಯಂತ ಗೌರವಾನ್ವಿತ ನಾಯಕರಲ್ಲಿ ಒಬ್ಬರು, ಸಮರ್ಥ ಆಡಳಿತಗಾರ, ಸಾಮಾಜಿಕ ನ್ಯಾಯದ ಪ್ರತಿಪಾದಕ ಮತ್ತು ಸಾಂಸ್ಕೃತಿಕ ದಿಗ್ಗಜ" ಎಂದು ಶ್ಲಾಘಿಸಿದ್ದರು.
ಇಂದು ಡಿಎಂಕೆ ಶಾಸಕ ಕೆ.ಪಿ ಶಂಕರ್ ಅವರ ಪುತ್ರನ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಂಕೆ ಸ್ಟಾಲಿನ್, ರಕ್ಷಣಾ ಸಚಿವರನ್ನು ಆಹ್ವಾನಿಸಿದ ಮಾತ್ರಕ್ಕೆ ಬಿಜೆಪಿಯೊಂದಿಗೆ ಸಂಬಂಧ ಹೊಂದಿದ್ದೇವೆ ಎಂಬ ಊಹಾಪೋಹಗಳಿವೆ. ನಾವು ಬಿಜೆಪಿಯೊಂದಿಗೆ ರಹಸ್ಯ ಒಪ್ಪಂದ ಮಾಡಿಕೊಳ್ಳುವ ಅಗತ್ಯವಿಲ್ಲ. ಯಾವುದೇ ವಿಷಯದ ಬಗ್ಗೆ ಡಿಎಂಕೆ ಮತ್ತು ಅದರ ನಾಯಕ ಎಂ ಕರುಣಾನಿಧಿ ಅವರ ಬೆಂಬಲ ಅಥವಾ ವಿರೋಧ ಸೈದ್ಧಾಂತಿಕ ಆಧಾರಿತವಾಗಿರುತ್ತದೆ ಎಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಒಮ್ಮೆ ಹೇಳಿದ್ದರು ಎಂದು ಅವರು ನೆನಪಿಸಿಕೊಂಡರು.
Advertisement