Tinder ನಲ್ಲಿ ಸ್ನೇಹ, Night Club ನಲ್ಲಿ ದ್ರೋಹ; ಡೇಟಿಂಗ್ ವಂಚನೆಗೆ 61 ಸಾವಿರ ರೂ ಕಳೆದುಕೊಂಡ ಭೂಪ!
ಮುಂಬೈ: ಇತ್ತೀಚಿನ ದಿನಗಳಲ್ಲಿ ಯುವತಿಯರನ್ನು ಬಳಸಿಕೊಂಡು ವಂಚಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು, ಪ್ರಮುಖವಾಗಿ Dating App, Night Clubಗಳು ಯುವತಿಯರನ್ನು ಬಳಸಿಕೊಂಡು ಅಮಾಯಕ ಯುವಕರನ್ನು ವಂಚಿಸುತ್ತಿರುವ ಜಾಲವೊಂದು ಬಯಲಾಗಿದೆ.
ಹೌದು.. ಡೇಟಿಂಗ್ ಆ್ಯಪ್, ನೈಟ್ ಕ್ಲಬ್ ಜತೆ ಸೇರಿ ಅಮಾಯಕ ಪುರುಷರನ್ನು ವಂಚಿಸುತ್ತಿರುವ ಯುವತಿಯರ ಜಾಲವೊಂದನ್ನು ಮಹಿಳಾ ವಕೀಲರೊಬ್ಬರು ಬಯಲಿಗೆಳೆದಿದ್ದು, ಡೇಟಿಂಗ್ ಹೆಸರಿನಲ್ಲಿ ಹತ್ತಾರು ಪುರುಷರಿಗೆ ಲಕ್ಷಾಂತರ ರೂ ವಂಚಿಸಿರುವ ಪ್ರಕರಣವನ್ನು ಬಯಲಿಗೆಳೆಯಲಾಗಿದೆ.
ಯುವತಿಯರು ನೈಟ್ ಕ್ಲಬ್ಗಳ ಜೊತೆ ಸೇರಿಕೊಂಡು ಅಮಾಯಕ ಪುರುಷರನ್ನು ಡೇಟಿಂಗ್ ಕರೆದುಕೊಂಡು ಹೋಗಿ ನೈಟ್ ಕ್ಲಬ್ ನಲ್ಲಿ ಬಿಲ್ ಕೊಡುವ ನೆಪದಲ್ಲಿ ಸಾವಿರಾರು ರೂಪಾಯಿ ಹಣವನ್ನು ವಂಚಿಸುತ್ತಿದ್ದಾರೆ.
ಅಂದೇರಿ ನೈಟ್ ಕ್ಲಬ್ ಜೊತೆ ಕೈ ಜೋಡಿಸಿದ್ದ ಯುವತಿ
ಮುಂಬೈನ ಅಂಧೇರಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು, ಒಂದಷ್ಟು ಯುವತಿಯರು ಇಲ್ಲಿನ ಗಾಡ್ಫಾದರ್ ಕ್ಲಬ್ & ಲಾಂಜ್ ನ ಜೊತೆ ಸೇರಿ ಅಮಾಯಕ ಪುರುಷರಿಂದ ದುಡ್ಡು ದೋಚುವ ಕೆಲಸ ಮಾಡುತ್ತಿದ್ದಾರೆ.
ನೈಟ್ ಕ್ಲಬ್ ಗಳ ಜೊತೆ ಸೇರಿ ಕೆಲ ಯುವತಿಯರು ಟಿಂಡರ್ (Tinder), ಬಂಬಲ್ ನಂತಹ ಡೇಟಿಂಗ್ ಆ್ಯಪ್ ಗಳಲ್ಲಿ ಯುವಕರು ಅಥವಾ ಪುರುಷರನ್ನು ಬಲೆಗೆ ಬೀಳಿಸಿಕೊಂಡು, ನೈಟ್ ಕ್ಲಬ್ ಗೆ ಡೇಟಿಂಗ್ ಹೋಗುವ ನೆಪದಲ್ಲಿ ವಂಚನೆ ಮಾಡುತ್ತಿದ್ದಾರೆ.
ತಾವು ಡೀಲ್ ಮಾಡಿಕೊಂಡಿರುವ ಕ್ಲಬ್ ಗಳಿಗೆ ಹೋಗಿ, ಅಲ್ಲಿ ರೆಡ್ ಬುಲ್, ಕಾಕ್ಟೆಲ್ ಸೇರಿದಂತೆ ಇತರೆ ಒಂದೊಂದು ಜ್ಯೂಸ್ ಹಾಗೂ 100 ರಿಂದ 200 ರೂ ಒಳಗೆ ಸಿಗುವ ಇತ್ಯಾದಿ ಪಾನೀಯಗಳಿಗೆ 1 ರಿಂದ 2 ಸಾವಿರ ಬಿಲ್ ಹಾಕಿಸಿ ಯುವತಿಯರೊಂದಿಗೆ ಡೇಟ್ ಗೆ ಹೋದ ಅಮಾಯಕ ಪುರುಷರಿಂದ ಒಟ್ಟಾಗಿ 40 ರಿಂದ 50 ಸಾವಿರ ಹಣವನ್ನು ದೋಚುವ ಕೆಲಸ ಮಾಡುತ್ತಿದ್ದಾರೆ. 1 ಲೀಟರ್ ನೀರಿನ ಬಾಟಲಿಗೂ ಬರೊಬ್ಬರಿ 200 ರೂ ಬಿಲ್ ಹಾಕಿರುವ ಘಟನೆಯೂ ನಡೆದಿದೆ.
ಹಗರಣ ಬಯಲಿಗೆಳೆದ ಮಹಿಳಾ ವಕೀಲೆ
ಯುವತಿಯರು ಮತ್ತು ನೈಟ್ ಕ್ಲಬ್ ಗಳ ಈ ಮೋಸದಾಟವನ್ನು ಮಹಿಳಾ ವಕೀಲೆ ದೀಪಿಕಾ ನಾರಾಯಣ ಭಾರದ್ವಾಜ್ (DeepikaBhardwaj) ಎಂಬುವವರು ಬಯಲಿಗೆಳೆದಿದ್ದು, ತಮ್ಮ ಎಕ್ಸ್ ಖಾತೆಯಲ್ಲಿ ಈ ಕುರಿತ ಮಾಹಿತಿ ಹಂಚಿಕೊಂಡಿದ್ದಾರೆ. ಪೋಸ್ಟ್ ನಲ್ಲಿ “ಬಯಲಾಯಿತು ಮುಂಬೈನ ದಿ ಗಾಡ್ಫಾದರ್ ಕ್ಲಬ್ ನ ಡೇಟಿಂಗ್ ಹಗರಣ ಬಹಿರಂಗ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್ ಫೋಟೋದಲ್ಲಿ ಗಾಡ್ಫಾದರ್ ಕ್ಲಬ್ ನಲ್ಲಿ ಕಮ್ಮಿಗೆ ಸಿಗುವ ಆಹಾರ ಪಾನೀಯಗಳಿಗೂ ಸಾವಿರಾರು ಬಿಲ್ ಬಿಲ್ ಹಾಕಿರುವಂತಹ ದೃಶ್ಯವನ್ನು ಕಾಣಬಹುದು.
ಇದೀಗ ಈ ಪೋಸ್ಟ್ ವೈರಲ್ ಆಗುತ್ತಿದ್ದು, 8 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ ಗಳು ಬಂದಿವೆ. ಒಬ್ಬ ಬಳಕೆದಾರರು ‘ಇಲ್ಲಿ ನನ್ನ ಸ್ನೇಹಿತನೂ ಕೂಡಾ ಮೋಸ ಹೋಗಿದ್ದಾನೆ. ಈ ರೆಸ್ಟೋರೆಂಟ್ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಮತ್ತೊಬ್ಬ ಬಳಕೆದಾರರು ‘ರಾಜಕಾರಣಿಗಳು ಮತ್ತು ಪೋಲೀಸರ ಬೆಂಬಲವಿಲ್ಲದೆ ಇಂತಹ ದೊಡ್ಡ ಹಗರಣ ನೆಡೆಯಲು ಸಾಧ್ಯವಿಲ್ಲ ಎಂದಿದ್ದಾರೆ.


