
ನವದೆಹಲಿ: ಕೇಂದ್ರ ಸರ್ಕಾರ ಬಲವಾಗಿರದೇ ಹೋಗಿದ್ದರೆ ಭಾರತದಲ್ಲೂ ಪರಿಸ್ಥಿತಿ ಬಾಂಗ್ಲಾದೇಶದಂತಾಗುತ್ತಿತ್ತು ಎಂದು ರೈತರ ಪ್ರತಿಭಟನೆ ವಿಚಾರವಾಗಿ ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಹೇಳಿದ್ದಾರೆ.
ಹರಿಯಾಣದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿರುವ ಸಂದರ್ಭದಲ್ಲೇ ಕಂಗನಾ ರಣಾವತ್ ತಮ್ಮ ಎಕ್ಸ್ (ಟ್ವಿಟರ್) ಹ್ಯಾಂಡಲ್ನಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದು ವಿಡಿಯೋದಲ್ಲಿ, 'ರೈತರ ಚಳವಳಿಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳದೇ ಹೋಗಿದಿದ್ದರೆ, ಇಂದು ಚಳವಳಿಯು ದೇಶದಲ್ಲಿ ಬಾಂಗ್ಲಾದೇಶದಂತಹ ಪರಿಸ್ಥಿತಿಗೆ ಕಾರಣವಾಗಬಹುದಿತ್ತು ಎಂದು ಹೇಳಿದ್ದಾರೆ. ಅಲ್ಲದೆ ರೈತರ ಪ್ರತಿಭಟನೆಗೆ ವಿದೇಶಿ ಶಕ್ತಿಗಳೇ ಕಾರಣ ಎಂದೂ ಆರೋಪಿಸಿದ್ದಾರೆ.
ಕಂಗನಾ ಹೇಳಿಕೆಗೆ ಬಿಜೆಪಿಯಲ್ಲೇ ಮಿಶ್ರ ಪ್ರತಿಕ್ರಿಯೆ
ಇನ್ನು ಸಂಸದೆ ಕಂಗನಾ ಹೇಳಿಕೆಗೆ ಬಿಜೆಪಿ ಪಕ್ಷದಲ್ಲೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಹರಿಯಾಣ ಬಿಜೆಪಿ ಘಟಕದ ಹಿರಿಯ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕಂಗನಾ ಅವರ ಹೇಳಿಕೆ ಕುರಿತು ವರಿಷ್ಠರೊಂದಿಗೆ ಚರ್ಚಿಸುತ್ತೇವೆ ಎಂದಿದ್ದಾರೆ.
ಕಂಗನಾ ಹೇಳಿಕೆಯು ಚುನಾವಣೆಯ ಮೇಲೆ ಪರಿಣಾಮ ಬೀರಬಹುದು ಮತ್ತು ರೈತ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಬಿಜೆಪಿಯ ಮತಗಳ ಮೇಲೆ ಪರಿಣಾಮ ಬೀರಬಹುದು ಎಂದು ಬಿಜೆಪಿ ನಾಯಕರು ಅತಂಕ ವ್ಯಕ್ತಪಡಿಸಿದ್ದಾರೆ. ಚುನಾವಣಾ ಸಮಯದಲ್ಲಿ ಬಿಜೆಪಿ ಸಂಸದರು ಇಂತಹ ಹೇಳಿಕೆಗಳನ್ನು ನೀಡುವ ಅಗತ್ಯವಿಲ್ಲ ಎಂದು ಕಿಡಿಕಾರಿದ್ದಾರೆ.
ಬಿಜೆಪಿ ಅಭ್ಯರ್ಥಿಗಳಿಗೆ ಸಮಸ್ಯೆ
ಹರ್ಯಾಣ ಬಿಜೆಪಿಯ ಮತ್ತೋರ್ವ ನಾಯಕ ಮಾತನಾಡಿ, ಪ್ರಸ್ತುತ ರಾಜ್ಯದಲ್ಲಿ ಬಿಜೆಪಿ ಬಗ್ಗೆ ರೈತರಲ್ಲಿ ಯಾವುದೇ ಅಸಮಾಧಾನವಿಲ್ಲ. ಆದರೆ ನಟಿ ಕಂಗನಾ ಹೇಳಿಕೆ ನಮ್ಮ ಅಭ್ಯರ್ಥಿಗಳಿಗೆ ಸಮಸ್ಯೆಗಳನ್ನು ಉಂಟುಮಾಡಬಹುದು. ಚುನಾವಣಾ ಪ್ರಚಾರದ ವೇಳೆ ಅಭ್ಯರ್ಥಿಗಳು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಪಕ್ಷದ ಹರಿಯಾಣ ರಾಜ್ಯಾಧ್ಯಕ್ಷರು ಈ ವಿಡಿಯೋವನ್ನು ಇನ್ನೂ ನೋಡಿಲ್ಲ. ವೀಡಿಯೋ ನೋಡಿದ ನಂತರವಷ್ಟೇ ಅವರು ಈ ಬಗ್ಗೆ ಪ್ರತಿಕ್ರಿಯಿಸುತ್ತಾರೆ ಎಂದು ಹೇಳಿದ್ದಾರೆ.
ಏತನ್ಮಧ್ಯೆ ಹರ್ಯಾಣದಲ್ಲಿ ಕಂಗನಾ ಹೇಳಿಕೆಗೆ ರೈತಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ಪ್ರತಿಭಟನೆಯ ಎಚ್ಚರಿಕೆ ನೀಡಿವೆ.
ಅಂತರಕಾಯ್ದುಕೊಂಡ ಬಿಜೆಪಿ
ಇನ್ನು ತನ್ನದೇ ಸಂಸದೆ ಕಂಗನಾ ರಣಾವತ್ ಹೇಳಿಕೆ ವಿಚಾರವಾಗಿ ಬಿಜೆಪಿ ಅಂತರ ಕಾಯ್ದುಕೊಂಡಿದ್ದು, ರೈತರ ಆಂದೋಲನದ ಕುರಿತು ತನ್ನ ಸಂಸದೆ ಕಂಗನಾ ರಣಾವತ್ ಅವರ ಕಾಮೆಂಟ್ಗಳಿಗೆ ಬಿಜೆಪಿ ಅಸಮ್ಮತಿ ವ್ಯಕ್ತಪಡಿಸಿದೆ, ನೀತಿ ವಿಷಯಗಳ ಬಗ್ಗೆ ಮಾತನಾಡಲು ಕಂಗನಾ ಅವರಿಗೆ ಅಧಿಕಾರವಿಲ್ಲ ಎಂದು ಹೇಳಿದೆ.
Advertisement