ಬದರಿನಾಥ ಕ್ಷೇತ್ರದ ಮೇಲೆ ಹವಾಮಾನ ಬದಲಾವಣೆ ಪರಿಣಾಮ: 6 ತಿಂಗಳಿನಿಂದ ಹಿಮಪಾತವೇ ಇಲ್ಲ!

ಬದರಿನಾಥ ದೇವಾಲಯದ ಅರ್ಚಕರು ಹಾಗೂ ಹವಾಮಾನ ತಜ್ಞರು ಕ್ಷೇತ್ರದ ಮೇಲೆ ಉಂಟಾಗಿರುವ ಪರಿಣಾಮದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
Badrinath
ಬದರಿನಾಥ ಕ್ಷೇತ್ರonline desk
Updated on

ಬದರಿನಾಥ್: ಹವಾಮಾನ ಬದಲಾವಣೆ ಬದರಿನಾಥ ಕ್ಷೇತ್ರದ ಮೇಲೆ ಪರಿಣಾಮ ಉಂಟುಮಾಡಿದೆ.

ಬದರಿನಾಥ ದೇವಾಲಯದ ಅರ್ಚಕರು ಹಾಗೂ ಹವಾಮಾನ ತಜ್ಞರು ಕ್ಷೇತ್ರದ ಮೇಲೆ ಉಂಟಾಗಿರುವ ಪರಿಣಾಮದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಕ್ಷೇತ್ರದಲ್ಲಿ ಹಿಮಪಾತದ ಕಾರಣದಿಂದ 6 ತಿಂಗಳ ಕಾಲ ದೇವಾಲಯ ಬಂದ್ ಆಗಿರುತ್ತದೆ. ಆದರೆ ಈ ಬಾರಿ ಡಿಸೆಂಬರ್ ವರೆಗೂ ಈ ಪ್ರದೇಶದಲ್ಲಿ ಹಿಮಪಾತವೇ ಇಲ್ಲದಂತಾಗಿರುವುದು ಎಲ್ಲರ ಆತಂಕಕ್ಕೆ ಕಾರಣವಾಗಿದೆ. ಈ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪರಿಸರ ಸಂರಕ್ಷಣೆಯ ಗುರಿಯನ್ನು ಹೊಂದಿರುವ ವೈಜ್ಞಾನಿಕವಾಗಿ ಆಧಾರಿತ ಅಭಿವೃದ್ಧಿ ಉಪಕ್ರಮಗಳ ತುರ್ತು ಅಗತ್ಯವನ್ನು ತಜ್ಞರು ಒತ್ತಿ ಹೇಳಿದ್ದಾರೆ.

ದೇವಪ್ರಯಾಗದ ಅರ್ಚಕ ಉತ್ತಮ್ ಭಟ್ ಅವರು ಪ್ರತಿ ವರ್ಷ ಆರು ತಿಂಗಳ ಕಾಲ ದೇಗುಲದಲ್ಲಿ ನೆಲೆಸುತ್ತಾರೆ, "2024 ರಲ್ಲಿ ನೋಡಿದಂತೆ ಎತ್ತರದ ಹಿಮಾಲಯ ಪ್ರದೇಶದಲ್ಲಿ ನಾವು ಎಂದಿಗೂ ಈ ರೀತಿಯ ಪರಿಸ್ಥಿತಿಯನ್ನು ನೋಡಿಲ್ಲ. ಗಮನಾರ್ಹವಾಗಿ, ಅಲ್ಲಿ ಈ ಆರು ತಿಂಗಳ ಅವಧಿಯಲ್ಲಿ ಯಾವುದೇ ಹಿಮಪಾತವಾಗಿಲ್ಲ, ಆದರೆ ಅಕ್ಟೋಬರ್ 2023 ರಲ್ಲಿ ಮಾತ್ರ, ಈ ಪ್ರದೇಶವು ಮೂರು ಬಾರಿ ಹಿಮಪಾತವನ್ನು ಕಂಡಿದೆ ಎಂದು ಹೇಳಿದ್ದಾರೆ.

ಬದರಿನಾಥ ದೇವಾಲಯದ ದ್ವಾರಗಳನ್ನು ಮುಚ್ಚಿ ಮೂರು ವಾರಗಳು ಕಳೆದರೂ ಬದ್ರಿಪುರಿಯಲ್ಲಿ ಹಿಮಪಾತವಾಗಿಲ್ಲ. ದೇವಸ್ಥಾನದ ಅರ್ಚಕರು ಈ ಬಗ್ಗೆ ಕಳವಳ ವ್ಯಕ್ತಪಡಿಸಲು ಆರಂಭಿಸಿದ್ದು, "ಬದ್ರಿಧಾಮ್‌ನಲ್ಲಿ ಅತಿರೇಕದ ವಾಹನಗಳ ಸಂಚಾರ ಮತ್ತು ಸರ್ವಋತು ರಸ್ತೆಗಳ ನಿರ್ಮಾಣ ಈ ಪರಿಸ್ಥಿತಿಗೆ ಕೊಡುಗೆ ನೀಡಿರುವ ಅಂಶಗಳಾಗಿವೆ. ಈ ವಿಷಯದ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸುವುದು ಅತ್ಯಗತ್ಯ" ಎಂದು ಹೇಳಿದ್ದಾರೆ.

ಉತ್ತರಾಖಂಡದ ತೋಟಗಾರಿಕೆ ಮತ್ತು ಅರಣ್ಯ ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗದ ಪ್ರೊಫೆಸರ್ ಎಸ್.ಸಿ.ಸತಿ ಅವರ ಪ್ರಕಾರ, ಬದರಿನಾಥದಂತಹ ಎತ್ತರದ ಹಿಮಾಲಯ ಪ್ರದೇಶಗಳಲ್ಲಿ ಪ್ರಸ್ತುತ ಎದುರಾಗಿರುವ ಪರಿಸ್ಥಿತಿ ಋತುಮಾನದ ವ್ಯತ್ಯಾಸದ ಪರಿಣಾಮವಾಗಿದೆ. "ಈ ಪ್ರದೇಶಗಳಲ್ಲಿ ಮಳೆಯ ಕೊರತೆಯು ಹಿಮಪಾತ ಕಡಿಮೆಯಾಗಲು ಕಾರಣವಾಗಿದೆ" ಎಂದು ಅವರು ಹೇಳಿದರು.

ಕಳೆದ 100,000 ವರ್ಷಗಳಲ್ಲಿ ಕಳೆದ ವರ್ಷ (2024) ತಾಪಮಾನ ಅತ್ಯಂತ ಹೆಚ್ಚು ಇದ್ದ ವರ್ಷ ಎಂದು ದಾಖಲಾಗಿದೆ ಎಂದು ಪ್ರೊಫೆಸರ್ ಸತಿ ಗಮನಿಸಿದರು. "ಆದಾಗ್ಯೂ, 2024 ರಲ್ಲಿ ಗಮನಿಸಲಾದ ತಾಪಮಾನದಲ್ಲಿ ನಿರಂತರ ಏರಿಕೆಯೊಂದಿಗೆ, ಮುಂದಿನ ವರ್ಷ ಕಳೆದ ವರ್ಷಕ್ಕಿಂತ ಹೆಚ್ಚು ಬಿಸಿಯಾಗಬಹುದು" ಎಂದು ಅವರು ಹೇಳಿದರು. ಬದರಿನಾಥದಲ್ಲಿ ತಾಪಮಾನದ ಹೆಚ್ಚಳವು ಋತುಮಾನದ ವ್ಯತ್ಯಾಸಕ್ಕೆ ಕಾರಣವಾಗಿದೆ ಎಂದು ಅವರು ವಿವರಿಸಿದರು, ಇದು ಹಿಮಪಾತ ಮಾತ್ರವಲ್ಲದೆ ಸ್ಥಳೀಯ ನೀರಿನ ಮೂಲಗಳ ಮೇಲೂ ಪರಿಣಾಮ ಬೀರುತ್ತಿದೆ.

ಹಿಂದೆಂದೂ ಕಾಣದಂತಹ ಘಟನೆಗಳ ತಿರುವಿನಲ್ಲಿ, ಕೇದಾರನಾಥದಲ್ಲಿ ಹಿಮಪಾತವಿಲ್ಲದೆ ಡಿಸೆಂಬರ್ ಮೊದಲ ವಾರ ಕಳೆದಿರುವುದು ಇದೇ ಮೊದಲಾಗಿದೆ.

Badrinath
ಕಸದಿಂದ ರಸ: ಯಾತ್ರಾರ್ಥಿಗಳು ಎಸೆಯುವ ತ್ಯಾಜ್ಯದಿಂದ ಲಾಭ; ಜೋಷಿಮಠ ಸ್ಥಳೀಯ ಸಂಸ್ಥೆ ಮಾರ್ಗ!

ಶ್ರೀನಗರದ ಎಚ್‌ಎನ್‌ಬಿ ಕೇಂದ್ರೀಯ ವಿಶ್ವವಿದ್ಯಾಲಯದ ಹೈ ಆಲ್ಟಿಟ್ಯೂಡ್ ಪ್ಲಾಂಟ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ ಡಾ ವಿಜಯ್ ಕಾಂತ್ ಪುರೋಹಿತ್ ಬದಲಾಗುತ್ತಿರುವ ಹವಾಮಾನದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು. "ಹವಾಮಾನ ಚಕ್ರದಲ್ಲಿನ ಬದಲಾವಣೆಗಳು ಅನುಕೂಲಕರವಾಗಿಲ್ಲ. ಹಿಮಪಾತದ ಕೊರತೆ ಎಂದರೆ ಹಿಮನದಿಗಳು ಹೊಸ ಹಿಮವನ್ನು ಪಡೆಯುತ್ತಿಲ್ಲ ಎಂದರ್ಥ, ಇದು ಫೆಬ್ರವರಿಯ ಆರಂಭದಲ್ಲಿ ಕರಗಲು ಕಾರಣವಾಗುತ್ತದೆ. ಇದು ಗಂಭೀರ ಸಮಸ್ಯೆಯನ್ನು ಉಂಟುಮಾಡುತ್ತದೆ." ಎಂದು ಅವರು ಹೇಳಿದ್ದಾರೆ.

ಪರಿಸರವಾದಿ ದೇವ್ ರಾಘವೇಂದ್ರ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಮಾಹಿತಿ ನೀಡಿದ್ದು "ಡಿಸೆಂಬರ್ ಮೊದಲ ವಾರ ಕಳೆದಿದೆ, ಆದರೂ ಕೇದಾರನಾಥ ಮತ್ತು ಇತರ ಎತ್ತರದ ಪರ್ವತಗಳು ಹಿಮರಹಿತವಾಗಿವೆ. ಹಿಮಾಲಯದ ಶಿಖರಗಳು ಸಹ ಅತ್ಯಲ್ಪ ಪ್ರಮಾಣದ ಹಿಮವನ್ನು ಹೊಂದಿವೆ, ಇದು ಗಂಭೀರವಾದ ಪರಿಸ್ಥಿತಿಯಾಗಿದೆ. ಈ ವರ್ಷದ ಸೆಪ್ಟೆಂಬರ್‌ನಿಂದ ಕೇದಾರನಾಥದಲ್ಲಿ ಮಳೆಯಾಗಲಿ ಅಥವಾ ಹಿಮಪಾತವಾಗಲಿ ಆಗಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com