ಲೋಕಸಭೆಯಲ್ಲಿ ರೈಲ್ವೆ ತಿದ್ದುಪಡಿ ಮಸೂದೆ ಅಂಗೀಕಾರ; ಖಾಸಗೀಕರಣಕ್ಕೆ ಅವಕಾಶ ಇಲ್ಲ ಎಂದ ವೈಷ್ಣವ್
ನವದೆಹಲಿ: ರೈಲ್ವೆ ಕಾನೂನುಗಳಿಗೆ ತಿದ್ದುಪಡಿ ತರುವ ರೈಲ್ವೆ (ತಿದ್ದುಪಡಿ) ಮಸೂದೆ-2024 ಅನ್ನು ಬುಧವಾರ ಲೋಕಸಭೆಯಲ್ಲಿ ಅಂಗೀಕರಿಸಿದ್ದು, ಇದು ಭಾರತೀಯ ರೈಲ್ವೆಯನ್ನು ಖಾಸಗೀಕರಣ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.
ರೈಲ್ವೆ ತಿದ್ದುಪಡಿ ಮಸೂದೆ ಮೇಲಿನ ಚರ್ಚೆಗೆ ಪ್ರತಿಕ್ರಿಯಿಸಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, ತಿದ್ದುಪಡಿಯು ರೈಲ್ವೆಯನ್ನು ಖಾಸಗೀಕರಣಗೊಳಿಸುತ್ತದೆ ಎಂಬ ನಕಲಿ ನಿರೂಪಣೆಯನ್ನು ಹುಟ್ಟುಹಾಕಲಾಗಿದೆ ಎಂದರು.
"ಸಂವಿಧಾನದ ಬಗ್ಗೆ ಅವರ (ವಿರೋಧ) ನಕಲಿ ನಿರೂಪಣೆ ವಿಫಲವಾಗಿದೆ ... ಈಗ ಇದು ಸಹ ವಿಫಲವಾಗಲಿದೆ" ಎಂದು ರೈಲ್ವೆ ಸಚಿವರು ಪ್ರತಿಪಾದಿಸಿದರು.
ಚರ್ಚೆಯ ನಂತರ ಧ್ವನಿ ಮತದ ಮೂಲಕ ಮಸೂದೆಯನ್ನು ಅಂಗೀಕರಿಸಲಾಯಿತು. ರೈಲ್ವೆ ಕಾಯಿದೆ-1989ಕ್ಕೆ ತಿದ್ದುಪಡಿ ಜೊತೆಗೆ ರೈಲ್ವೇ ಮಂಡಳಿಯ ಅಧಿಕಾರಗಳನ್ನು ಹೆಚ್ಚಿಸಲು ಮತ್ತು ಕಾರ್ಯಾಚರಣೆ ದಕ್ಷತೆ ಸುಧಾರಣೆಯ ಗುರಿಯನ್ನು ಇದು ಹೊಂದಿದೆ.
ಇಂಡಿಯನ್ ರೈಲ್ವೆ ಬೋರ್ಡ್ ಕಾಯ್ದೆ-1905 ಅನ್ನು ರೈಲ್ವೆ ಆ್ಯಕ್ಟ್-1989ಗೆ ಸೇರಿಸುವ ಉದ್ದೇಶವನ್ನು ಮಸೂದೆ ಹೊಂದಿದೆ. ಇದು ಭಾರತೀಯ ರೈಲ್ವೆಯ ಕಾನೂನಿನ ಚೌಕಟ್ಟನ್ನು ಸರಳೀಕರಿಸಲಿದೆ ಎಂದು ವೈಷ್ಣವ್ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ