
ನವದೆಹಲಿ: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ವಿರುದ್ಧದ ಹಿಂಸಾಚಾರಕ್ಕೆ ಭಾರತದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದು, ಇದೀಗ ದೆಹಲಿ ವ್ಯಾಪಾರಿಗಳು ಬಾಂಗ್ಲಾದೇಶಕ್ಕೆ ಮರ್ಮಾಘಾತ ನೀಡಿದ್ದಾರೆ.
ಹೌದು.. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಉದ್ವಿಗ್ನತೆ ಮತ್ತು ಅಲ್ಪಸಂಖ್ಯಾತರ ಮೇಲಿನ ದಾಳಿಗಳನ್ನು ಉಗ್ರವಾಗಿ ಖಂಡಿಸಿರುವ ದೆಹಲಿ ಆಟೋ ಪಾರ್ಟ್ಸ್ ವ್ಯಾಪಾರಿಗಳು, ಇನ್ನು ಮುಂದೆ ಬಾಂಗ್ಲಾದೇಶಕ್ಕೆ ವಾಹನಗಳ ಬಿಡಿಭಾಗಗಳನ್ನು ರಫ್ತು ಮಾಡದಿರಲು ನಿರ್ಧರಿಸಿದ್ದಾರೆ.
ಅಕ್ಷರಶಃ ದೆಹಲಿಯ ಆಟೋ ಪಾರ್ಟ್ಸ್ ವ್ಯಾಪಾರಿಗಳು ಬಾಂಗ್ಲಾದೇಶದೊಂದಿಗೆ ವ್ಯವಹಾರವನ್ನು ಬಹಿಷ್ಕರಿಸಿದ್ದಾರೆ. ದೆಹಲಿಯ ಕಾಶ್ಮೀರ್ ಗೇಟ್ನಲ್ಲಿರುವ ಆಟೋ ಪಾರ್ಟ್ಸ್ ವ್ಯಾಪಾರಿಗಳು ನೆರೆಯ ದೇಶದೊಂದಿಗೆ ವ್ಯವಹಾರವನ್ನು ನಿಲ್ಲಿಸಲು ನಿರ್ಧರಿಸಿದ್ದಾರೆ.
'ಹಿಂದೂಗಳ' ಮೇಲಿನ ಹಿಂಸಾಚಾರ ಮತ್ತು ಬಾಂಗ್ಲಾದೇಶದಲ್ಲಿ ದೇವಾಲಯಗಳ ಮೇಲಿನ 'ದಾಳಿ'ಗಳ ವರದಿಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವ್ಯಾಪಾರಿಗಳ ಒಕ್ಕೂಟ ಹೇಳಿದೆ. 'ಹಿಂದೂಗಳ' ವಿರುದ್ಧ ನಡೆದ ದೌರ್ಜನ್ಯಗಳು ಮತ್ತು ದೇವಾಲಯಗಳ ಮೇಲಿನ ಇತ್ತೀಚಿನ 'ದಾಳಿ'ಗಳಿಗೆ ಪ್ರತಿಕ್ರಿಯೆಯಾಗಿ ಕಾಶ್ಮೀರ್ ಗೇಟ್ ಆಟೋ ಪಾರ್ಟ್ಸ್ ಮಾರುಕಟ್ಟೆಯು ಬಾಂಗ್ಲಾದೇಶದೊಂದಿಗೆ ಜನವರಿ 15ರವರೆಗೂ ವ್ಯವಹಾರವನ್ನು ನಿಲ್ಲಿಸಲು ನಿರ್ಧರಿಸಿದೆ ಎಂದು ಆಟೋಮೋಟಿವ್ ಪಾರ್ಟ್ಸ್ ವ್ಯಾಪಾರಿಗಳ ಸಂಘದ ಅಧ್ಯಕ್ಷ ವಿನಯ್ ನಾರಂಗ್ ಹೇಳಿದ್ದಾರೆ.
"ಅಲ್ಲಿ (ಬಾಂಗ್ಲಾದೇಶ) ಹಿಂದೂಗಳ ಮೇಲೆ ನಡೆದ ದೌರ್ಜನ್ಯಗಳು, ನಮ್ಮ ದೇವಾಲಯಗಳು ನಾಶವಾಗಿವೆ ಮತ್ತು ನಮ್ಮ ಅನೇಕ ಹಿಂದೂ ಸಹೋದರರನ್ನು ಅಲ್ಲಿ ಕೊಲ್ಲಲಾಗಿದೆ.
ಅದು ಖಂಡನೀಯ ಮತ್ತು ಸಹಿಲಸಾಧ್ಯ.. ನಾವು ಬಾಂಗ್ಲಾದೇಶದೊಂದಿಗೆ ವ್ಯವಹಾರವನ್ನು ನಿಲ್ಲಿಸುತ್ತೇವೆ. ಇನ್ನು ಮುಂದೆ ಬಾಂಗ್ಲಾದೇಶಕ್ಕೆ ಯಾವುದೇ ರೀತಿಯ ಸ್ಪೇರ್ ಪಾರ್ಟ್ಸ್ ಗಳು ರಫ್ತಾಗುವುದಿಲ್ಲ.ಬಾಂಗ್ಲಾದೇಶ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದ್ದು, ಜನವರಿ 15 ರವರೆಗೆ ಕಾರು ಬಿಡಿಭಾಗಗಳ ರಫ್ತು ನಿಲ್ಲಿಸುವ ನಿರ್ಧಾರ ಕೈಗೊಳ್ಳಲಾಗಿದ್ದು, ಬಾಂಗ್ಲಾದೇಶದಲ್ಲಿ ಇದೇ ರೀತಿ ಹಿಂದೂಗಳ ಮೇಲಿನ ದಾಳಿ ಮುಂದುವರೆದರೆ ನಾವು ಇದನ್ನು ಕಠಿಣ ರೀತಿಯಲ್ಲಿ ಮುಂದುವರೆಸುತ್ತೇವೆ ಎಂದೂ ಎಚ್ಚರಿಕೆ ನಾರಂಗ್ ನೀಡಿದ್ದಾರೆ.
ಈಗಾಗಲೇ ಮಾರುಕಟ್ಟೆಯಲ್ಲಿರುವ ಸುಮಾರು 2,000 ಅಂಗಡಿಗಳು ಬಾಂಗ್ಲಾದೇಶಕ್ಕೆ ರಫ್ತು ಮಾಡುವುದನ್ನು ನಿಲ್ಲಿಸಿವೆ ಎಂದು ವ್ಯಾಪಾರಿ ಸಂಘದ ಅಧ್ಯಕ್ಷರು ತಿಳಿಸಿದ್ದಾರೆ.
Advertisement