ಉತ್ತರ ಪ್ರದೇಶ: ಮತಾಂತರ ಆರೋಪ; ದಲಿತನನ್ನು ಥಳಿಸಿ ತಲೆ ಬೋಳಿಸಿ, ಪರೇಡ್ ನಡೆಸಿದ ಬಜರಂಗದಳ!
ಉತ್ತರಪ್ರದೇಶದ ಫತೇಪುರ್ ನಲ್ಲಿ ದಲಿತ ವ್ಯಕ್ತಿಯೊಬ್ಬರನ್ನು ಥಳಿಸಿ ಅವಮಾನಿಸಿದ ಪ್ರಕರಣ ಬೆಳಕಿಗೆ ಬಂದಿದೆ. ದಲಿತ ವ್ಯಕ್ತಿ ಯೇಸು ಕ್ರಿಸ್ತನನ್ನು ಆರಾಧಿಸುತ್ತಾನೆ ಎಂದು ಆರೋಪಿಸಿ ಭಜರಂಗದಳದ ಕಾರ್ಯಕರ್ತರು ಮೊದಲು ಆತನಿಗೆ ಮನಬಂದಂತೆ ಥಳಿಸಿ ನಂತರ ತಲೆ ಬೋಳಿಸಿ ಮೆರವಣಿಗೆ ಮಾಡಿದ್ದಾರೆ. ಈ ಸಂಬಂಧ ಇದೀಗ ಗ್ರಾಮದ ಕೆಲವರು ಕೌಂಟರ್ ಎಫ್ಐಆರ್ ದಾಖಲಿಸಿದ್ದಾರೆ. ಗ್ರಾಮದ ಜನರನ್ನು ಕ್ರಿಶ್ಚಿಯನ್ ಧರ್ಮವನ್ನು ಅಳವಡಿಸಿಕೊಳ್ಳುವಂತೆ ದಲಿತ ವ್ಯಕ್ತಿ ಒತ್ತಾಯಿಸುತ್ತಿದ್ದಾನೆ ಎಂದು ಅವರು ಆರೋಪಿಸಿದ್ದಾರೆ. ಸದ್ಯ ಪ್ರಕರಣದಲ್ಲಿ ಯಾವುದೇ ಬಂಧನವಾಗಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಪ್ರಕಾರ, ಫತೇಪುರ್ ಜಿಲ್ಲೆಯ ಬಹ್ಲೋಪುರ್ ಅಲೈ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶುಕ್ರವಾರ, ಡಿಸೆಂಬರ್ 28 ರಂದು ಶಿವಬದನ್ ಎಂಬ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದರು. ಮೇಲ್ಜಾತಿ ಎಂದು ಆರೋಪಿಸಲಾದ ಕೆಲವರು ತಮ್ಮ ಮತ್ತು ಅವರ ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಶಿವಬದನ್ ಎರಡು ವರ್ಷಗಳ ಹಿಂದೆ ಕ್ರೈಸ್ತ ಧರ್ಮವನ್ನು ಆರಾಧಿಸಲು ಪ್ರಾರಂಭಿಸಿದರು ಎಂದು ಹೇಳಿದರು. ಇದರಿಂದ ಗ್ರಾಮದ ಕೆಲವು ಮೇಲ್ಜಾತಿಯ ಜನರು ಆತನ ಮೇಲೆ ಕೋಪಗೊಂಡು ತಕ್ಕ ಪಾಠ ಕಲಿಸಲು ಮುಂದಾಗಿದ್ದರು ಎಂದು ಆತ ಆರೋಪಿಸಿದ್ದಾನೆ.
ಶಿವಬದನ್ ದೂರಿನ ಆಧಾರದ ಮೇಲೆ, ಪೊಲೀಸರು ಈ ಪ್ರಕರಣದಲ್ಲಿ ರೋಹಿತ್ ದೀಕ್ಷಿತ್, ಲವ್ಲೇಶ್ ಸಿಂಗ್ ಮತ್ತು ಸೋಮಕರನ್ ಮತ್ತು ಇನ್ನೂ ಹಲವಾರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಎರಡು ವರ್ಷಗಳ ಹಿಂದಿನ ಮತಾಂತರ ವಿರೋಧಿ ಕಾನೂನು ಪ್ರಕರಣದಲ್ಲಿ ಶಿವಬದನ್ ಜಾಮೀನಿನ ಮೇಲೆ ಹೊರಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಇಡೀ ಗ್ರಾಮವನ್ನು ಸುತ್ತಿಸಿ ಮತ್ತೊಂದು ದೇವಸ್ಥಾನಕ್ಕೆ ಕರೆದೊಯ್ದರು ಎಂದು ಶಿವಬದನ್ ಹೇಳಿದರು. ಅಲ್ಲಿ ಆರೋಪಿಗಳು ತನಗೆ ಹನುಮಾನ್ ಚಾಲೀಸಾವನ್ನು ಪಠಿಸುವಂತೆ ಒತ್ತಾಯಿಸಿದರು ಎಂದು ಶಿವಬದನ್ ಆರೋಪಿಸಿದ್ದಾರೆ.
ವರದಿಯ ಪ್ರಕಾರ, ಇದರ ನಂತರ ಕೌಂಟರ್ ಎಫ್ಐಆರ್ ದಾಖಲಾಗಿದೆ. ಡಿಸೆಂಬರ್ 26ರಂದು ಹಳ್ಳಿಯಲ್ಲಿರುವ ತಮ್ಮ ಅಂಗಡಿಯಲ್ಲಿ ಕುಳಿತ್ತಿದ್ದಾಗ ಶಿವಬದನ್ ತನ್ನ ಮೂವರು ಸಹಚರರಾದ ರಾಮ್ ಬಹದ್ದೂರ್, ಸಂತೋಷ್ ಮತ್ತು ಶಿವಪಾಲ್ ಪಾಸ್ವಾನ್ ಜೊತೆ ಕಾರಿನಲ್ಲಿ ಬಂದರು. ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವಂತೆ ಶಿವಬದನ್ ಕೇಳಿಕೊಂಡಿದ್ದರು ಎಂದು ರೋಹಿತ್ ದೀಕ್ಷಿತ್ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಮಿಷನ್ ಆಸ್ಪತ್ರೆಯಲ್ಲಿ ಕೆಲಸ ಕೊಡಿಸುವುದಾಗಿ ಹಾಗೂ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಜನರಿಗೆ ಹಣ ನೀಡುವುದಾಗಿ ಭರವಸೆ ನೀಡಿದರು ಎಂದು ಹೇಳಿದ್ದಾರೆ.
ಇದಾದ ನಂತರ, ರೋಹಿತ್ ದೀಕ್ಷಿತ್ ದೂರಿನ ಆಧಾರದ ಮೇಲೆ ಪೊಲೀಸರು ಶಿವಬದನ್, ರಾಮ್ ಬಹದ್ದೂರ್, ಸಂತೋಷ್, ಶಿವಪಾಲ್ ಪಾಸ್ವಾನ್ ಮತ್ತು ನಾಲ್ವರು ಅಪರಿಚಿತರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಶಿವಬದನ್ ಈ ಆರೋಪಗಳನ್ನು ತಳ್ಳಿಹಾಕಿದ್ದು, ಪೊಲೀಸರು ಸುಳ್ಳು ಆರೋಪಗಳ ಆಧಾರದ ಮೇಲೆ ತಮ್ಮ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಹೇಳಿದರು. ಏತನ್ಮಧ್ಯೆ ವಿಶ್ವ ಹಿಂದೂ ಪರಿಷತ್ ರಾಜ್ಯ ಉಪಾಧ್ಯಕ್ಷ ವೀರೇಂದ್ರ ಪಾಂಡೆ ಈ ವಿಷಯದಲ್ಲಿ ಯಾವುದೇ ಬಜರಂಗದಳದ ಕಾರ್ಯಕರ್ತರ ಕೈವಾಡವಿಲ್ಲ ಎಂದು ಹೇಳಿದ್ದು ಇದು ಗ್ರಾಮದ ಜನರ ನಡುವಿನ ವಿಷಯವಾಗಿದೆ ಎಂದು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ