ಸರ್ಕಾರ ರಚನೆಗೆ ಚಂಪೈ ಸೊರೆನ್ ಗೆ ಆಹ್ವಾನ ನೀಡಿದ ರಾಜ್ಯಪಾಲರು
ಸರ್ಕಾರ ರಚನೆಗೆ ಚಂಪೈ ಸೊರೆನ್ ಗೆ ಆಹ್ವಾನ ನೀಡಿದ ರಾಜ್ಯಪಾಲರು

ಜಾರ್ಖಂಡ್ ರಾಜಕೀಯ ಬಿಕ್ಕಟ್ಟು: ಕೊನೆಗೂ ಸರ್ಕಾರ ರಚನೆಗೆ ಚಂಪೈ ಸೊರೆನ್ ಗೆ ರಾಜ್ಯಪಾಲರು ಆಹ್ವಾನ!

ಜಾರ್ಖಂಡ್ ರಾಜಕೀಯ ಬಿಕ್ಕಟ್ಟು ಮುಂದುವರೆದಿರುವಂತೆಯೇ ಸರ್ಕಾರ ರಚನೆಗೆ ವಿಳಂಬ ಮಾಡುತ್ತಿದ್ದ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರು ಕೊನೆಗೂ ಗುರುವಾರ ತಡರಾತ್ರಿ ಸರ್ಕಾರ ರಚನೆಗೆ ಚಂಪೈ ಸೊರೆನ್ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ.
Published on

ರಾಂಚಿ: ಜಾರ್ಖಂಡ್ ರಾಜಕೀಯ ಬಿಕ್ಕಟ್ಟು ಮುಂದುವರೆದಿರುವಂತೆಯೇ ಸರ್ಕಾರ ರಚನೆಗೆ ವಿಳಂಬ ಮಾಡುತ್ತಿದ್ದ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರು ಕೊನೆಗೂ ಗುರುವಾರ ತಡರಾತ್ರಿ ಸರ್ಕಾರ ರಚನೆಗೆ ಚಂಪೈ ಸೊರೆನ್ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ.

ಜಾರ್ಖಂಡ್ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರು ಗುರುವಾರ ಜಾರ್ಖಂಡ್ ಮುಕ್ತಿ ಮೋರ್ಚಾ ಶಾಸಕಾಂಗ ಪಕ್ಷದ ನಾಯಕ ಚಂಪೈ ಸೊರೆನ್ ಅವರನ್ನು ಮುಖ್ಯಮಂತ್ರಿಯಾಗಿ ನಾಮ ನಿರ್ದೇಶನ ಮಾಡಿದ್ದು, ಪ್ರಮಾಣ ವಚನ ಸ್ವೀಕರಿಸಲು ಅವರನ್ನು ಆಹ್ವಾನಿಸಿದ್ದಾರೆ.

ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿ ನಿತಿನ್ ಮದನ್ ಕುಲಕರ್ಣಿ ಅವರು ಈ ಬಗ್ಗೆ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದು, "ನಾವು ಚಂಪೈ ಸೊರೆನ್ ಅವರನ್ನು ಪ್ರಮಾಣವಚನ ಸ್ವೀಕರಿಸಲು ಆಹ್ವಾನಿಸಿದ್ದೇವೆ. ಈಗ ಅದನ್ನು ಯಾವಾಗ ಮಾಡಬೇಕೆಂದು ಅವರು ನಿರ್ಧರಿಸುತ್ತಾರೆ ಎಂದು ಹೇಳಿದರು.

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಬಂಧನಕ್ಕೂ ಮುನ್ನ ಹೇಮಂತ್ ಸೊರೆನ್ ರಾಜ್ಯಪಾಲರನ್ನು ಭೇಟಿ ಮಾಡಿ ರಾಜಿನಾಮೆ ಸಲ್ಲಿಸಿದ್ದರು. ಈ ಬೆಳವಣೆಗೆ ಬೆನ್ನಲ್ಲೇ ಹೇಮಂತ್ ಸೊರೆನ್ ಬೆಂಬಲಿತ ಶಾಸಕರು ಚಂಪೈ ಸೊರೆನ್ ರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಿದ್ದರು.

ಸರ್ಕಾರ ರಚನೆ ಸಂಬಂಧ ಚಂಪೈ ಸೊರೆನ್ ಮತ್ತು ಅವರ ಬೆಂಬಲಿತ ಶಾಸಕರು ಕೂಡ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರು. ರಾಜ್ಯದಲ್ಲಿ "ಗೊಂದಲ" ಇರುವುದರಿಂದ ಶೀಘ್ರವಾಗಿ ಸರ್ಕಾರ ರಚಿಸುವ ಅವರ ಹಕ್ಕನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸಿದ್ದರು. 

ಆದರೆ ರಾಜ್ಯಪಾಲರು ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಳಂಬ ಧೋರಣೆ ಅನುಸರಿಸಿದ್ದರು. ಇದೀಗ ಕೊನೆಗೂ ರಾಜ್ಯಪಾಲರು ಚಂಪೈ ಸೊರೆನ್ ರನ್ನು ಸರ್ಕಾರ ರಚನೆಗೆ ಆಹ್ವಾನ ನೀಡಿದ್ದಾರೆ.

X
Open in App

Advertisement

X
Kannada Prabha
www.kannadaprabha.com