ರಾಂಚಿ: ಜಾರ್ಖಂಡ್ನಲ್ಲಿ ರಾಜಕೀಯ ಬಿಕ್ಕಟ್ಟಿನ ನಡುವೆ, ಜೆಎಂಎಂ ಶಾಸಕಾಂಗ ಪಕ್ಷದ ನಾಯಕ ಚಂಪೈ ಸೋರೆನ್ ಅವರು ಬುಧವಾರ ರಾಜಭವನಕ್ಕೆ ತೆರಳಿ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರನ್ನು ಭೇಟಿ ಮಾಡಿದರು.
ರಾಜ್ಯಪಾಲರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಚಂಪೈ ಸೋರೆನ್ ಅವರು, ರಾಜ್ಯದಲ್ಲಿ ನೂತನ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದೇವೆ. ನಮ್ಮ ಮನವಿಯ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳುವುದಾಗಿ ರಾಜ್ಯಪಾಲರು ಭರವಸೆ ನೀಡಿದ್ದಾರೆ. ನಾವು ಒಗ್ಗಟ್ಟಾಗಿದ್ದೇವೆ. ಎಲ್ಲಾ 43 ಶಾಸಕರು ಸರ್ಕ್ಯೂಟ್ ಹೌಸ್ನಲ್ಲಿ ಉಳಿದುಕೊಂಡಿದ್ದಾರೆ ಎಂದರು.
ಸೋರೆನ್ ಅವರೊಂದಿಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಅಲಂಗೀರ್ ಆಲಂ, ಆರ್ಜೆಡಿ ಶಾಸಕ ಸತ್ಯಾನಂದ್ ಭೋಕ್ತಾ, ಸಿಪಿಐ(ಎಂಎಲ್) ಎಲ್ ಶಾಸಕ ವಿನೋದ್ ಸಿಂಗ್ ಮತ್ತು ಶಾಸಕ ಪ್ರದೀಪ್ ಯಾದವ್ ಇದ್ದರು.
"ಜಾರ್ಖಂಡ್ ರಾಜಭವನವು ಸರ್ಕಾರ ರಚನೆಗೆ ಆಹ್ವಾನಿಸದಿದ್ದರೆ, ಶುಕ್ರವಾರ ಮಧ್ಯಾಹ್ನ ಮತ್ತೆ ರಾಜ್ಯಪಾಲರ ಭೇಟಿಗೆ ಸಮಯ ಕೇಳುತ್ತೇನೆ" ಎಂದು ಕಾಂಗ್ರೆಸ್ ನಾಯಕ ಅಲಂಗೀರ್ ಆಲಂ ಹೇಳಿದ್ದಾರೆ.
"ಆದಷ್ಟು ಬೇಗ ಸರ್ಕಾರ ರಚಿಸಲು ನಮ್ಮನ್ನು ಆಹ್ವಾನಿಸುವಂತೆ ರಾಜ್ಯಪಾಲರಿಗೆ ವಿನಂತಿಸುತ್ತೇವೆ" ಎಂದು ರಾಜಭವನ ಪ್ರವೇಶಿಸುವ ಮುನ್ನ ವಿನೋದ್ ಸಿಂಗ್ ಅವರು ಹೇಳಿದ್ದರು.
ಮನಿ ಲಾಂಡರಿಂಗ್ ಪ್ರಕರಣದಲ್ಲಿ ಇಡಿಯಿಂದ ಬಂಧನಕ್ಕೊಳಗಾಗಿರುವ ಹೇಮಂತ್ ಸೋರೆನ್ ಅವರು ಬುಧವಾರ ರಾತ್ರಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಚಂಪೈ ಸೋರೆನ್ ಜೆಎಂಎಂ ಶಾಸಕಾಂಗ ಪಕ್ಷದ ಹೊಸ ನಾಯಕರಾಗಿ ಆಯ್ಕೆಯಾಗಿದ್ದಾರೆ.
Advertisement