ಮೂರನೇ ದಿನಕ್ಕೆ ಕಾಲಿಟ್ಟ 'ದೆಹಲಿ ಚಲೋ' : ಸರ್ಕಾರ-ರೈತರ ಮಧ್ಯೆ ಇಂದು ಮತ್ತೊಂದು ಸುತ್ತಿನ ಮಾತುಕತೆ
ನವದೆಹಲಿ: ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಸರ್ಕಾರದ ಗಮನ ಸೆಳಯಲು ರೈತರು ಹಮ್ಮಿಕೊಂಡಿರುವ ದೆಹಲಿ ಚಲೋ ಪ್ರತಿಭಟನೆ ಗುರುವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಇಂದು ಮೂರನೇ ಸುತ್ತಿನ ಮಾತುಕತೆ: ಪಂಜಾಬ್-ಹರಿಯಾಣ ಗಡಿಯಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವಿನ ಘರ್ಷಣೆ ಇಂದು ಮೂರನೇ ದಿನಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ಮೂವರು ಕೇಂದ್ರ ಸಚಿವರು ಚಂಡೀಗಢದಲ್ಲಿ ಮತ್ತೊಂದು ಸುತ್ತಿನ ಮಾತುಕತೆಗಾಗಿ ರೈತ ಮುಖಂಡರನ್ನು ಭೇಟಿಯಾಗಲಿದ್ದಾರೆ.
ಮೊನ್ನೆ ಮಂಗಳವಾರ ಬೆಳಗ್ಗೆ ಪಂಜಾಬ್ನ ರೈತರು ರಾಷ್ಟ್ರ ರಾಜಧಾನಿ ಕಡೆಗೆ ತಮ್ಮ 'ದೆಹಲಿ ಚಲೋ' ಮೆರವಣಿಗೆಯನ್ನು ಪ್ರಾರಂಭಿಸಿದಾಗಿನಿಂದ, ಭದ್ರತಾ ಸಿಬ್ಬಂದಿಯೊಂದಿಗೆ ಪದೇ ಪದೇ ಘರ್ಷಣೆಗಳು ನಡೆಯುತ್ತಿದ್ದು, ಎರಡೂ ಕಡೆಯ ಸದಸ್ಯರು ಗಾಯಗೊಂಡಿದ್ದಾರೆ.
ರೈತರು ತಮ್ಮ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ(Minimum Supporting Price) ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಪ್ರತಿಭಟನಾ ದೆಹಲಿ ಚಲೋ ಮೆರವಣಿಗೆಯನ್ನು ಮುನ್ನಡೆಸುತ್ತಿವೆ.
ಶಂಭು ಗಡಿಯಲ್ಲಿರುವ ರೈತರು, ತಮ್ಮ ಟ್ರ್ಯಾಕ್ಟರ್-ಟ್ರಾಲಿಗಳಲ್ಲಿ ರಸ್ತೆಯುದ್ದಕ್ಕೂ ಸಾಲುಗಟ್ಟಿ ಪಂಜಾಬ್ನ ವಿವಿಧ ಭಾಗಗಳಿಂದ ಆಗಮಿಸುತ್ತಿದ್ದಾರೆ, ಅವರು ತಮ್ಮ ಗಮ್ಯಸ್ಥಾನವಾದ ದೆಹಲಿಯಿಂದ ಇನ್ನೂ 200 ಕಿಮೀ ದೂರದಲ್ಲಿದ್ದಾರೆ.
ನಿನ್ನೆ ಏನಾಯಿತು?: ನಿನ್ನೆ ಬುಧವಾರ, ಅಂಬಾಲಾ ನಗರದ ಸಮೀಪವಿರುವ ಪಂಜಾಬ್-ಹರಿಯಾಣ ನಡುವಿನ ಶಂಭು ಗಡಿ ಬಿಂದುವಿನಲ್ಲಿ, ರೈತರ ಗುಂಪು ಬ್ಯಾರಿಕೇಡ್ಗಳ ಕಡೆಗೆ ಹೋದಾಗ ಭದ್ರತಾ ಸಿಬ್ಬಂದಿ ಹಲವಾರು ಅಶ್ರುವಾಯು ಶೆಲ್ಗಳನ್ನು ಬಿಡುಗಡೆ ಮಾಡಲು ಡ್ರೋನ್ ಟಿಯರ್ ಸ್ಮೋಕ್ ಲಾಂಚರ್ಗಳನ್ನು ಬಳಸಿದರು. ಕೆಲವು ಪ್ರತಿಭಟನಾಕಾರರಿಂದ ಭದ್ರತಾ ಪಡೆಗಳು ಕಲ್ಲು ತೂರಾಟವನ್ನು ಎದುರಿಸಿದವು.
ಹರಿಯಾಣದ ಜಿಂದ್ ಜಿಲ್ಲೆಯ ಡಾಟಾ ಸಿಂಗ್ವಾಲಾ-ಖನೌರಿ ಗಡಿಯಲ್ಲಿ ಇದೇ ರೀತಿಯ ಪರಿಸ್ಥಿತಿ ಮುಂದುವರೆದಿದೆ.
ಮೊನ್ನೆ ಮಂಗಳವಾರ, ರೈತರು ತಮ್ಮ ಟ್ರ್ಯಾಕ್ಟರ್ಗಳೊಂದಿಗೆ ಶಂಭುವಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗ ಭದ್ರತಾ ಸಿಬ್ಬಂದಿ ಅವರ ಮೇಲೆ ರಬ್ಬರ್ ಬುಲೆಟ್ಗಳು ಮತ್ತು ಅಶ್ರುವಾಯು ಶೆಲ್ಗಳನ್ನು ಎಸೆದರು, ಕನಿಷ್ಠ 100 ಪ್ರತಿಭಟನಾಕಾರರು ಗಾಯಗೊಂಡರು. ಪ್ರತಿಭಟನಾಕಾರರ ಕಲ್ಲು ತೂರಾಟದಲ್ಲಿ 24 ಮಂದಿ ಪೊಲೀಸರು ಗಾಯಗೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ