ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ರೈತರೊಂದಿಗೆ ಸಂವಾದ ನಡೆಸಬೇಕು, ಇಲ್ಲದಿದ್ದರೆ ಶಾಂತಿಯುತವಾಗಿ ಪ್ರತಿಭಟನೆಗೆ ಅವಕಾಶ ನೀಡಬೇಕು ಎಂದು ಪಂಜಾಬ್ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಪ್ರಧಾನ ಕಾರ್ಯದರ್ಶಿ ಸರ್ವಣ್ ಸಿಂಗ್ ಪಂಧೇರ್ ಹೇಳಿದ್ದಾರೆ.
ಇಂದು ಎಎನ್ ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ನಾವು ಇಂದು ಕೇಂದ್ರ ಸಚಿವರೊಂದಿಗೆ ಸಭೆ ನಡೆಸುತ್ತಿದ್ದೇವೆ. ನಮ್ಮ ಬೇಡಿಕೆಗಳನ್ನು ಈಡೇರಿಸಲು ಪ್ರಧಾನಿ ಮೋದಿ ಅವರೊಂದಿಗೆ ಮಾತುಕತೆ ನಡೆಸಬೇಕೆಂದು ನಾವು ಬಯಸುತ್ತೇವೆ. ಭಾರತ ಪ್ರಜಾಸತ್ತಾತ್ಮಕ ದೇಶ. ರಾಷ್ಟ್ರ ರಾಜಧಾನಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ನಮಗೆ ಅವಕಾಶ ನೀಡಬೇಕು. ಸರ್ಕಾರವು ಎಲ್ಲಾ ಪ್ರವೇಶ ಬಿಂದುಗಳಲ್ಲಿನ ನಿರ್ಬಂಧಗಳನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸಿದರು.
ಇಂದು ಸಂಜೆ ಸರ್ಕಾರ-ರೈತ ಸಂಘಟನೆಗಳ ಮಧ್ಯೆ ಮಾತುಕತೆ: ಇಂದು ಸಂಜೆ 5 ಗಂಟೆಗೆ ರೈತ ಸಂಘಗಳು ಮತ್ತು ಕೇಂದ್ರ ಸರ್ಕಾರದ ಸಭೆ ನಿಗದಿಯಾಗಿದೆ. ಒಕ್ಕೂಟಗಳು ನಿರ್ಣಯದ ಭರವಸೆಯಲ್ಲಿವೆ ಎಂದು ಸರ್ವನ್ ಸಿಂಗ್ ಪಂಧೇರ್ ಹೇಳಿದರು.
ನಾವು ಇಂದು ಸಂಪೂರ್ಣವಾಗಿ ಸಕಾರಾತ್ಮಕ ಮನಸ್ಥಿತಿಯಲ್ಲಿ ಸಭೆಗೆ ಹಾಜರಾಗಲಿದ್ದೇವೆ. ಈ ಸಭೆಯಿಂದ ಸಕಾರಾತ್ಮಕ ಪರಿಹಾರವು ಹೊರಹೊಮ್ಮುತ್ತದೆ ಎಂದು ನಮಗೆ ಸಂಪೂರ್ಣ ವಿಶ್ವಾಸವಿದೆ ಎಂದು ಪಂಧೇರ್ ಹೇಳಿದರು.
ಕೇಂದ್ರ ಸರ್ಕಾರದ ಮುಂದೆ ರೈತರು 12 ಬೇಡಿಕೆಗಳನ್ನು ಮುಂದಿಟ್ಟುಕೊಂಡು ದೆಹಲಿಗೆ ಪಾದಯಾತ್ರೆ ನಡೆಸುತ್ತಿದ್ದಾರೆ. ಈ ಬಾರಿಯ ಪ್ರತಿಭಟನೆಗೆ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಪಂಜಾಬ್ ಕಿಸಾನ್ ಮಜ್ದೂರ್ ಸಂಘರ್ಷ್ ಸಮಿತಿಯು ರೈತ ಸಂಘದ ಮುಖಂಡರಾದ ಜಗಜೀತ್ ಸಿಂಗ್ ದಲ್ಲೆವಾಲ್ ಮತ್ತು ಸರ್ವಾನ್ ಸಿಂಗ್ ಪಂಧೇರ್ ನೇತೃತ್ವದಲ್ಲಿ ಕರೆ ನೀಡಿದೆ.
ರೈತರ 12 ಬೇಡಿಕೆಗಳೇನೇನು?:
ಉತ್ತರ ಪ್ರದೇಶ, ಹರಿಯಾಣ ಮತ್ತು ಪಂಜಾಬ್ನಿಂದ 200 ಕ್ಕೂ ಹೆಚ್ಚು ರೈತ ಸಂಘಗಳು ಈ ಕೆಳಗಿನ ಬೇಡಿಕೆಗಳನ್ನು ಕೋರಿ ಪ್ರತಿಭಟನೆಯನ್ನು ಮುನ್ನಡೆಸುತ್ತಿವೆ:
ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ(Minimum Support Price) ಮೇಲೆ ಕಾನೂನು ಖಾತರಿ
ಎಮ್ ಎಸ್ ಸ್ವಾಮಿನಾಥನ್ ಆಯೋಗದ ಶಿಫಾರಸ್ಸುಗಳ ಅನುಷ್ಠಾನ ಮತ್ತು ಖರೀದಿಯ ಕಾನೂನುಬದ್ಧ ಖಾತರಿ
ರೈತರು ಮತ್ತು ರೈತ ಕಾರ್ಮಿಕರಿಗೆ ತಿಂಗಳಿಗೆ 10,000 ರೂ.ಗೆ ಪಿಂಚಣಿ ಹೆಚ್ಚಳ
ಉತ್ಪಾದನೆ ವೆಚ್ಚದಲ್ಲಿ ಕಡಿತದೊಂದಿಗೆ ಕೃಷಿ ಸಾಲ ಮನ್ನಾ
ಭೂಸ್ವಾಧೀನ ಕಾಯಿದೆ, 2013 ರ ಮರುಸ್ಥಾಪನೆ ಮತ್ತು ಪ್ರತಿ ಜಮೀನಿನ ಹಾನಿಗೆ ಪಾವತಿಸಬೇಕಾದ ಸಮಗ್ರ ಬೆಳೆ ವಿಮೆ
ಹೊಸ ವಿದ್ಯುತ್ ಬಿಲ್ ಪ್ರಕಾರ ವಿದ್ಯುತ್ ದರ ಹೆಚ್ಚಳ ಮತ್ತು ಸ್ಮಾರ್ಟ್ ಮೀಟರ್ ಬಳಕೆ ಬೇಡ
ನರೇಗಾ ಅಡಿಯಲ್ಲಿ ಕಾರ್ಮಿಕರಿಗೆ 700 ರೂಪಾಯಿ ದೈನಂದಿನ ವೇತನದೊಂದಿಗೆ ಪ್ರತಿ ವರ್ಷ 200 ದಿನಗಳ ಉದ್ಯೋಗ
ವಿಶ್ವ ವ್ಯಾಪಾರ ಸಂಸ್ಥೆಯಿಂದ ಹಿಂತೆಗೆದುಕೊಳ್ಳುವುದು ಮತ್ತು ಎಲ್ಲಾ ಮುಕ್ತ ವ್ಯಾಪಾರ ಒಪ್ಪಂದಗಳ ಮೇಲೆ ನಿಷೇಧ
2020–21ರ ರೈತರ ಆಂದೋಲನದಲ್ಲಿ ಭಾಗಿಯಾಗಿರುವವರ ವಿರುದ್ಧದ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯುವುದು
ಹಿಂದಿನ 2020-21 ರ ಆಂದೋಲನದ ಸಮಯದಲ್ಲಿ ಮೃತಪಟ್ಟ ರೈತರ ಕುಟುಂಬಗಳಿಗೆ ಪರಿಹಾರ
ಲಖಿಂಪುರ ಖೇರಿ ಹಿಂಸಾಚಾರದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಮತ್ತು ಸತ್ತವರಿಗೆ ಪರಿಹಾರ
Advertisement