ನಾಂದೇಡ್(ಮಹಾರಾಷ್ಟ್ರ): ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನ, ದೇಶದ ಅತ್ಯಂತ ಹಳೆಯ ಪಕ್ಷಕ್ಕೆ ತೀವ್ರ ಹಿನ್ನಡೆಯಾಗಿದ್ದು, ಸುಮಾರು 55 ಮಾಜಿ ಕಾಂಗ್ರೆಸ್ ಶಾಸಕರು ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಅವರ ಸಮ್ಮುಖದಲ್ಲಿ ಶನಿವಾರ ನಾಂದೇಡ್ನಲ್ಲಿ ಭಾರತೀಯ ಜನತಾ ಪಕ್ಷ(ಬಿಜೆಪಿ) ಸೇರಿದರು.
ಈ ವೇಳೆ ಎಎನ್ಐ ಜೊತೆ ಮಾತನಾಡಿದ ಬಿಜೆಪಿ ನಾಯಕ ಅಶೋಕ್ ಚವಾಣ್, "ಇಂದು ನಾವು ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಮತ್ತು ಅಧಿಕಾರಿಗಳೊಂದಿಗೆ ಮಾತನಾಡಿದ್ದೇವೆ. ಸಂಭಾಷಣೆ ಚೆನ್ನಾಗಿತ್ತು. ನಾವೆಲ್ಲರೂ ಒಟ್ಟಾಗಿ ನಾಂದೇಡ್ನಲ್ಲಿ ಬಿಜೆಪಿಯನ್ನು ಗೆಲ್ಲಿಸುತ್ತೇವೆ. ಅದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
55 ಕಾಂಗ್ರೆಸ್ ಮಾಜಿ ಶಾಸಕರು ಇಂದು ನನ್ನನ್ನು ಭೇಟಿ ಮಾಡಿ ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ. ನಾನು ಅವರೆಲ್ಲರಿಗೂ ಸ್ವಾಗತ ಎಂದು ಹೇಳಿ ಪಕ್ಷಕ್ಕೆ ಸೇರಿಸಿಕೊಂಡಿದ್ದೇನೆ ಎಂದು ಮಾಜಿ ಸಿಎಂ ತಿಳಿಸಿದ್ದಾರೆ.
ಇದಕ್ಕೂ ಮೊದಲು ಫೆಬ್ರವರಿ 21 ರಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಅಶೋಕ್ ಚವಾಣ್ ಸೇರಿದಂತೆ ಹೊಸದಾಗಿ ಆಯ್ಕೆಯಾದ ಬಿಜೆಪಿಯ ರಾಜ್ಯಸಭಾ ಸದಸ್ಯರನ್ನು ಅಭಿನಂದಿಸಿದ್ದರು.
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಅವರು ಫೆಬ್ರವರಿ 13 ರಂದು ಮುಂಬೈನಲ್ಲಿ ಭಾರತೀಯ ಜನತಾ ಪಕ್ಷವನ್ನು ಸೇರಿದರು.
65 ವರ್ಷದ ಅವರನ್ನು ದಕ್ಷಿಣ ಮುಂಬೈನ ಬಿಜೆಪಿ ಕಚೇರಿಯಲ್ಲಿ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.
Advertisement