ನವದೆಹಲಿ: ಆಮ್ ಆದ್ಮಿ ಪಕ್ಷ ಮಂಗಳವಾರ ಲೋಕಸಭೆ ಚುನಾವಣೆಗೆ ದೆಹಲಿ ಮತ್ತು ಹರಿಯಾಣದಲ್ಲಿ ಐವರು ಅಭ್ಯರ್ಥಿಗಳನ್ನು ಘೋಷಿಸಿದ್ದು, ಹಿರಿಯ ನಾಯಕ ಸೋಮನಾಥ್ ಭಾರ್ತಿ ಅವರನ್ನು ನವದೆಹಲಿ ಕ್ಷೇತ್ರದಿಂದ ಕಣಕ್ಕಿಳಿಸಿದೆ.
ದೆಹಲಿ ಮುಖ್ಯಮಂತ್ರಿ ಮತ್ತು ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜಕೀಯ ವ್ಯವಹಾರಗಳ ಸಮಿತಿಯ ಸಭೆಯ ನಂತರ ಪಕ್ಷ ಐವರು ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ.
ದೆಹಲಿ ಜಲ ಮಂಡಳಿ ಉಪಾಧ್ಯಕ್ಷರೂ ಆಗಿರುವ ಸೋಮನಾಥ್ ಭಾರ್ತಿ ಅವರು ನವದೆಹಲಿ ಕ್ಷೇತ್ರದಿಂದ, ಕೊಂಡ್ಲಿ ಶಾಸಕ ಕುಲದೀಪ್ ಕುಮಾರ್ ಅವರು ಪೂರ್ವ ದೆಹಲಿಯಿಂದ, ಸಾಹಿರಾಮ್ ಪೆಹೆಲ್ವಾನ್ ಅವರು ದಕ್ಷಿಣ ದೆಹಲಿಯಿಂದ ಮತ್ತು ಮಾಜಿ ಸಂಸದ ಮಹಾಬಲ್ ಮಿಶ್ರಾ ಅವರನ್ನು ಪಶ್ಚಿಮ ದೆಹಲಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದೆ.
ರಾಜ್ಯಸಭಾ ಮಾಜಿ ಸಂಸದ ಸುಶೀಲ್ ಗುಪ್ತಾ ಅವರು ಹರಿಯಾಣದ ಕುರುಕ್ಷೇತ್ರದಿಂದ ಎಎಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.
ದೆಹಲಿಯಲ್ಲಿ,ಲೋಕಸಭೆ ಚುನಾವಣೆಗೆ ಇಂಡಿಯಾ ಮೈತ್ರಿಕೂಟದ ಮಿತ್ರಪಕ್ಷ ಕಾಂಗ್ರೆಸ್ ಜೊತೆ ಎಎಪಿ ಕೈಜೋಡಿಸಿದೆ.
ದೆಹಲಿಯಲ್ಲಿ ಎಎಪಿ ನಾಲ್ಕು ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ, ಕಾಂಗ್ರೆಸ್ ಮೂರು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಎಎಪಿ ಈಗಾಗಲೇ ಅಸ್ಸಾಂಗೆ ಮೂರು ಮತ್ತು ಗುಜರಾತ್ಗೆ ಇಬ್ಬರು ಅಭ್ಯರ್ಥಿಗಳನ್ನು ಘೋಷಿಸಿದೆ.
Advertisement