ಕೋಲ್ಕತ್ತಾ: ಇಂಡಿಯನ್ ಸೆಕ್ಯುಲರ್ ಫ್ರಂಟ್ (ಐಎಸ್ಎಫ್) ಶಾಸಕ ನೌಶಾದ್ ಸಿದ್ದಿಕಿಯನ್ನು ಕೋಲ್ಕತ್ತಾ ಪೊಲೀಸರು ಮಂಗಳವಾರ ವಶಕ್ಕೆ ಪಡೆದಿದ್ದಾರೆ. ಸಂದೇಶಖಾಲಿಗೆ ತೆರಳಲು ಸಿದ್ಧತೆ ನಡೆಸುತ್ತಿದ್ದಾಗ ಆತನನ್ನು ವಶಕ್ಕೆ ಪಡೆಯಲಾಗಿದ್ದು ಈ ವೇಳೆ ಪೊಲೀಸ್ ಅಧಿಕಾರಿಗಳೊಂದಿಗೆ ಸಿದ್ದಿಕಿ ತೀವ್ರ ವಾಗ್ವಾದ ನಡೆಸುತ್ತಿರುವುದು ಕಂಡು ಬಂದಿದೆ.
ನನ್ನನ್ನು ಏಕೆ ಬಂಧಿಸಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ಇದು ಸಂದೇಶಖಾಲಿಯಿಂದ ಹಲವಾರು ಕಿಲೋಮೀಟರ್ ದೂರದಲ್ಲಿದ್ದೇನೆ. ನಾನು ಗ್ರಾಮಸ್ಥರನ್ನು ಭೇಟಿ ಮಾಡಲು ಸಂದೇಶಖಾಲಿಗೆ ಹೋಗುತ್ತಿದ್ದೆ. ನಾನು ಯಾವುದೇ ನಿಯಮವನ್ನು ಉಲ್ಲಂಘಿಸಿಲ್ಲ ಎಂದು ಸಿದ್ದಿಕ್ ಹೇಳಿದ್ದಾರೆ.
ಕೋಲ್ಕತ್ತಾ ಪೊಲೀಸರು ನನ್ನನ್ನು ಸಂದೇಶ್ಖಾಲಿಯಿಂದ 62 ಕಿ.ಮೀ ದೂರದಲ್ಲಿ ತಡೆದಿದ್ದಾರೆ. ಆದರೆ ಇಬ್ಬರು ರಾಜ್ಯ ಸಚಿವರಾದ ಪಾರ್ಥ ಭೌಮಿಕ್ ಮತ್ತು ಸುಜಿತ್ ಬೋಸ್ ಅವರನ್ನು ತಡೆಯಲಿಲ್ಲ. ಪ್ರತಿಪಕ್ಷಗಳನ್ನು ಮಾತ್ರ ಸಂದೇಶಖಾಲಿಗೆ ಹೋಗದಂತೆ ಪೊಲೀಸರು ತಡೆಯುತ್ತಿದ್ದಾರೆ. ಅವರು ಏನು ಮರೆಮಾಡಲು ಪ್ರಯತ್ನಿಸುತ್ತಿದ್ದಾರೆ? ಎಂದು ಶಾಸಕರು ಪ್ರಶ್ನಿಸಿದರು.
ಉತ್ತರ 24 ಪರಗಣ ಜಿಲ್ಲಾಡಳಿತವು ಸಂದೇಶಖಾಲಿಯ ಸೂಕ್ಷ್ಮ ಪ್ರದೇಶಗಳಲ್ಲಿ ಯಾವುದೇ ಅಹಿತಕರ ಘಟನೆಯನ್ನು ತಡೆಯಲು ನಿಷೇಧಾಜ್ಞೆ ಜಾರಿಗೊಳಿಸಿದೆ. ಸಂದೇಶಖಾಲಿಯಲ್ಲಿ ಕೆಲವು ಪ್ರದೇಶಗಳಲ್ಲಿ CrPC ಯ ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಾಜ್ಞೆಗಳನ್ನು ವಿಧಿಸಲಾಗಿದೆ. ಜನರು ಆ ಪ್ರದೇಶಗಳಿಗೆ ಭೇಟಿ ನೀಡಲು ಅವಕಾಶ ನೀಡುವ ಮೂಲಕ ಕಾನೂನು ಮತ್ತು ಸುವ್ಯವಸ್ಥೆಗೆ ಅಡ್ಡಿಪಡಿಸಲು ನಾವು ಅನುಮತಿಸುವುದಿಲ್ಲ. ಅದಕ್ಕಾಗಿಯೇ ಅವರನ್ನು (ಸಿದ್ದಿಕ್) ನಿಲ್ಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದಕ್ಕೂ ಮೊದಲು, ಪ್ರಬಲ ನಾಯಕ ಮತ್ತು ಸಂದೇಶ್ಖಾಲಿ ಆರೋಪಿ ಶೇಖ್ ಷಹಜಹಾನ್ ಬಂಧನ ವಿಳಂಬಕ್ಕೆ ಆಡಳಿತಾರೂಢ ಟಿಎಂಸಿ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿತ್ತು. ಕಾಂಗ್ರೆಸ್ ರಾಜ್ಯ ಮುಖ್ಯಸ್ಥ ಅಧೀರ್ ರಂಜನ್ ಚೌಧರಿ ಅವರು ಕೋಲ್ಕತ್ತಾ ಹೈಕೋರ್ಟ್ ಆದೇಶವಿದ್ದರೂ ಶೇಖ್ ಷಹಜಹಾನ್ ನನ್ನ ಬಂಧಿಸದೆ ಇರುವುದು ನ್ಯಾಯಾಂಗ ನಿಂದನೆಗೆ ಸಮಾನವಾಗಿದೆ ಎಂದು ಹೇಳಿದರು. ಇನ್ನು ಸಂದೇಶಖಾಲಿ ಘಟನೆಗೆ ಕುರಿತಂತೆ ಪಶ್ಚಿಮ ಬಂಗಾಳದಾದ್ಯಂತ ಮಹಿಳೆಯರು ಬೀದಿಗಿಳಿದಿದ್ದಾರೆ.
ಹಿರಿಯ ತೃಣಮೂಲ ಕಾಂಗ್ರೆಸ್ ನಾಯಕ ಶಹಜಹಾನ್ ಶೇಖ್ ಮತ್ತು ಅವರ ಬೆಂಬಲಿಗರು ಬಲವಂತವಾಗಿ ಭೂಮಿಯನ್ನು ಕಬಳಿಸಿದ್ದಾರೆ. ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸಂದೇಶಖಾಲಿಯಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಆರೋಪಿಸಿದ್ದಾರೆ. ಶಹಜಹಾನ್ ನಿರಂತರವಾಗಿ ಬಂಧನದಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ರಾಜ್ಯ ಪೊಲೀಸರು ಮತ್ತು ಕೇಂದ್ರ ಸಂಸ್ಥೆಗಳೆರಡೂ ಆತನನ್ನು ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ.
Advertisement