ಅಯೋಧ್ಯೆ ಶ್ರೀರಾಮಮಂದಿರಕ್ಕೆ ತಿರುಮಲ ದೇಗುಲದಿಂದ 1 ಲಕ್ಷ ಲಾಡು ಪೂರೈಕೆ
ಅಯೋಧ್ಯೆ: ಇನ್ನು ಕೆಲವೇ ದಿನಗಳಲ್ಲಿ ಉದ್ಘಾಟನೆಯಾಗಲಿರುವ ಅಯೋಧ್ಯೆಯ ಶ್ರೀರಾಮಮಂದಿರಕ್ಕೆ ಜಗತ್ ವಿಖ್ಯಾತ ಪವಿತ್ರ ಯಾತ್ರಾ ತಾಣ ತಿರುಪತಿ ತಿರುಮಲ ದೇಗುಲದಿಂದ ಸುಮಾರು 1 ಲಕ್ಷ ಲಾಡು ಪ್ರಸಾದ ವಿತರಣೆ ಮಾಡಲಾಗುತ್ತಿದೆ.
ಹೌದು.. ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನದ ಅಧಿಕೃತ ಪಾಲಕರಾದ ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆಗೆ ಒಂದು ಲಕ್ಷ ಲಡ್ಡುಗಳನ್ನು ಪೂರೈಸಲಿದೆ ಎಂದು ಶುಕ್ರವಾರ ಇಲ್ಲಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಯೋಧ್ಯೆಗೆ ಪೂರೈಕೆಯಾಗಲಿರುವ ಲಾಡು ತಲಾ 25 ಗ್ರಾಂ ತೂಕವಿರಲಿದ್ದು, ಕಾರ್ಯಕ್ರಮಕ್ಕೆ ಆಗಮಿಸಲಿರುವ ಭಕ್ತರಿಗೆ ವಿತರಿಸಲು ಉದ್ದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆಯುವ ಶ್ರೀರಾಮ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಪ್ರವಾಸಿಗರಿಗೆ ವಿತರಿಸಲು ತಲಾ 25 ಗ್ರಾಂ ತೂಕದ ಒಂದು ಲಕ್ಷ ಲಡ್ಡುಗಳನ್ನು ನೀಡಲು ಟಿಟಿಡಿ ಒಪ್ಪಿಗೆ ನೀಡಿದೆ ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಎ ವಿ ಧರ್ಮಾ ರೆಡ್ಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯನಿರ್ವಾಹಕ ಅಧಿಕಾರಿ ಭಕ್ತರೊಂದಿಗೆ 'ಡಯಲ್ ಯುವರ್ ಇಒ' ಸಂವಾದ ಕಾರ್ಯಕ್ರಮದಲ್ಲಿ ಅವರು ಈ ಘೋಷಣೆ ಮಾಡಿದರು. ಇದೇ ವೇಳೆ ದೇವಾಲಯಕ್ಕೆ ಭೇಟಿ ನೀಡುವಾಗ ಅರ್ಜಿತ ಸೇವೆಗಳು, ದೇಣಿಗೆಗಳು, ದರ್ಶನ ಮತ್ತು ಕೊಠಡಿಗಳನ್ನು ಕಾಯ್ದಿರಿಸಲು ttdevasthanams.ap.gov.in ಅನ್ನು ಮಾತ್ರ ಬಳಸಬೇಕೆಂದು ಅವರು ಭಕ್ತರಿಗೆ ತಿಳಿಸಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ