ಗಡಿ ದಾಟಿ ಭಾರತದೊಳಗೆ ಬಂದಿದ್ದ 416 ಮ್ಯಾನ್ಮಾರ್ ಸೈನಿಕರು ವಾಪಸ್: ಸೇನಾ ಮುಖ್ಯಸ್ಥ
ನವದೆಹಲಿ: ಮ್ಯಾನ್ಮಾರ್ನ ಜನಾಂಗೀಯ ಸಶಸ್ತ್ರಗುಂಪುಗಳು ಮತ್ತು ಸರ್ಕಾರಿ ಪಡೆಗಳ ನಡುವಿನ ಕಾದಾಟದಿಂದ ಉಂಟಾಗುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಗಡಿ ದಾಟಿ ಬಂದಿದ್ದ ಸುಮಾರು 416 ಮ್ಯಾನ್ಮಾರ್ ಸೈನಿಕರನ್ನು ವಾಪಸ್ ಕಳುಹಿಸಲಾಗಿದ್ದು, ಅಲ್ಲಿಯ ಬೆಳವಣಿಗೆಗಳನ್ನು ಭಾರತೀಯ ಸೇನೆಯು 'ಸೂಕ್ಷ್ಮವಾಗಿ ಗಮನಿಸುತ್ತಿದೆ' ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಗುರುವಾರ ಹೇಳಿದ್ದಾರೆ.
ಸೇನಾ ದಿನದ ಮುನ್ನಾ ವಾರ್ಷಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂಡೋ-ಮ್ಯಾನ್ಮಾರ್ ಗಡಿಯ ಸಮೀಪವಿರುವ ಪರಿಸ್ಥಿತಿಯನ್ನು ವಿವರಿಸಿದರು ಮತ್ತು ಕೆಲವು ಬಂಡುಕೋರ ಗುಂಪುಗಳು ಆ ದೇಶದ ಗಡಿ ಪ್ರದೇಶದಲ್ಲಿ ಒತ್ತಡವನ್ನು ಅನುಭವಿಸುತ್ತಿದ್ದು, ಮಣಿಪುರವನ್ನು ಪ್ರವೇಶಿಸಲು ಪ್ರಯತ್ನಿಸುತ್ತಿವೆ ಎಂದರು.
"ಇಂಡೋ-ಮ್ಯಾನ್ಮಾರ್ ಗಡಿಯುದ್ದಕ್ಕೂ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಎಲ್ಲಾ 416 ಮ್ಯಾನ್ಮಾರ್ ಮಿಲಿಟರಿ ಸಿಬ್ಬಂದಿಯನ್ನು ಈಗಾಗಲೇ ವಾಪಸ್ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಕಳೆದ ತಿಂಗಳು, ಭಾರತ-ಮ್ಯಾನ್ಮಾರ್ ಗಡಿಯ ಬಳಿ ಮ್ಯಾನ್ಮಾರ್ನ ಮಿಲಿಟರಿ ಮತ್ತು ಜುಂಟಾ ವಿರೋಧಿ ಗುಂಪುಗಳ ನಡುವಿನ ಹೋರಾಟವನ್ನು ನಿಲ್ಲಿಸುವಂತೆ ಭಾರತ ಕರೆ ನೀಡಿತ್ತು. ನಾವು ಯಾವಾಗಲೂ ಅಲ್ಲಿ ಶಾಂತಿ ಅಥವಾ ಪ್ರಜಾಪ್ರಭುತ್ವಕ್ಕೆ ಮರಳುವುದನ್ನು ಪ್ರೋತ್ಸಾಹಿಸುತ್ತಿದ್ದೇವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರು ಹೇಳಿದ್ದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟಾರೆ ಹಿಂಸಾಚಾರದ ಘಟನೆಗಳು ಕಡಿಮೆಯಾಗಿವೆ. ಆದರೆ ರಜೌರಿ-ಪೂಂಚ್ ವಲಯದಲ್ಲಿ ಇಂತಹ ಘಟನೆಗಳು ಹೆಚ್ಚಿವೆ ಎಂದು ಜನರಲ್ ಪಾಂಡೆ ಹೇಳಿದರು. ಕಳೆದ 5-6 ತಿಂಗಳುಗಳಲ್ಲಿ ರಜೌರಿ ಮತ್ತು ಪೂಂಚ್ನಲ್ಲಿನ ಪರಿಸ್ಥಿತಿ ಮತ್ತು ಭಯೋತ್ಪಾದಕ ಚಟುವಟಿಕೆಗಳು ನಮಗೆ ಕಳವಳಕಾರಿ ವಿಷಯವಾಗಿದೆ ಎಂದರು.