ಗಲ್ಫ್ ಆಫ್ ಏಡನ್‌ನಲ್ಲಿ 9 ಭಾರತೀಯರಿದ್ದ ವ್ಯಾಪಾರಿ ಹಡಗಿನ ಮೇಲೆ ಡ್ರೋನ್ ದಾಳಿ; ರಕ್ಷಣೆಗೆ ಧಾವಿಸಿದ INS ವಿಶಾಖಪಟ್ಟಣಂ

ಗಲ್ಫ್ ಆಫ್ ಏಡನ್‌ನಲ್ಲಿ ಕಳೆದ ರಾತ್ರಿ 9 ಭಾರತೀಯರು ಸೇರಿ 22 ಸಿಬ್ಬಂದಿ ಇದ್ದ ಮಾರ್ಷಲ್ ಐಲ್ಯಾಂಡ್ಸ್-ಫ್ಲಾಗ್ಡ್ ವ್ಯಾಪಾರಿ ಹಡಗು ಎಂವಿ ಜೆನ್ಕೊ ಪಿಕಾರ್ಡಿ ಮೇಲೆ ಡ್ರೋನ್ ದಾಳಿ ನಡೆದಿದ್ದು ಕೂಡಲೇ ನೆರವಿಗೆ ಧಾವಿಸಿದ ಐಎನ್‌ಎಸ್ ವಿಶಾಖಪಟ್ಟಣಂ ರಕ್ಷಣೆ ನೀಡಿದೆ.
ವ್ಯಾಪಾರಿ ಹಡಗು ಎಂವಿ ಜೆನ್ಕೊ ಪಿಕಾರ್ಡಿ
ವ್ಯಾಪಾರಿ ಹಡಗು ಎಂವಿ ಜೆನ್ಕೊ ಪಿಕಾರ್ಡಿ

ನವದೆಹಲಿ: ಗಲ್ಫ್ ಆಫ್ ಏಡನ್‌ನಲ್ಲಿ ಕಳೆದ ರಾತ್ರಿ 9 ಭಾರತೀಯರು ಸೇರಿ 22 ಸಿಬ್ಬಂದಿ ಇದ್ದ ಮಾರ್ಷಲ್ ಐಲ್ಯಾಂಡ್ಸ್-ಫ್ಲಾಗ್ಡ್ ವ್ಯಾಪಾರಿ ಹಡಗು ಎಂವಿ ಜೆನ್ಕೊ ಪಿಕಾರ್ಡಿ ಮೇಲೆ ಡ್ರೋನ್ ದಾಳಿ ನಡೆದಿದ್ದು ಕೂಡಲೇ ನೆರವಿಗೆ ಧಾವಿಸಿದ ಐಎನ್‌ಎಸ್ ವಿಶಾಖಪಟ್ಟಣಂ ರಕ್ಷಣೆ ನೀಡಿದೆ.

ಡ್ರೋನ್ ದಾಳಿಯಿಂದ ಹಡಗಿನಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಆ ನಂತರ ಬೆಂಕಿ ನಂದಿಸಿ ನಿಯಂತ್ರಣಕ್ಕೆ ತರಲಾಯಿತು. ಅರಬ್ಬಿ ಸಮುದ್ರದಲ್ಲಿ ಕಡಲ್ಗಳ್ಳರು ನಿರಂತರವಾಗಿ ದಾಳಿ ನಡೆಸಿ ಲೂಟಿ ಮಾಡುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಡ್ರೋನ್‌ಗಳ ಮೂಲಕ ವ್ಯಾಪಾರಿ ಹಡಗುಗಳ ಮೇಲೆ ದಾಳಿ ನಡೆಸಲಾಗುತ್ತಿದೆ. 

ಇದೀಗ ಗಲ್ಫ್ ಆಫ್ ಏಡನ್ ನಲ್ಲಿ ಹಡಗಿನ ಮೇಲೆ ಡ್ರೋನ್ ದಾಳಿ ನಡೆಸಲಾಗಿದೆ. ಘಟನೆಯಲ್ಲಿ ಹಡಗಿಗೆ ಬೆಂಕಿ ಹೊತ್ತಿಕೊಂಡಿತ್ತು. ಆದರೆ, ಈ ಬೆಂಕಿಯನ್ನು ಸಕಾಲದಲ್ಲಿ ನಂದಿಸಲಾಯಿತು. ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್‌ಎಸ್ ವಿಶಾಖಪಟ್ಟಣಂಗೆ ಮಾಹಿತಿ ಸಿಕ್ಕಿದ್ದು ತಕ್ಷಣವೇ ಹಡಗಿನ ನೆರವಿಗೆ ಧಾವಿಸಿತು. ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ ತಂಡವು ಸ್ಥಳಕ್ಕೆ ಆಗಮಿಸಿ ದಾಳಿಕೋರರಿಗೆ ತಕ್ಕ ಪ್ರತ್ಯುತ್ತರ ನೀಡಿದೆ ಎಂದು ನೌಕಾಪಡೆ ಹೇಳುತ್ತದೆ.

ಭಾರತೀಯ ನೌಕಾಪಡೆಯ ಐಎನ್‌ಎಸ್ ವಿಶಾಖಪಟ್ಟಣಂ ಅನ್ನು ಕಡಲ್ಗಳ್ಳತನ ವಿರೋಧಿ ಕಾರ್ಯಾಚರಣೆಗಳಿಗಾಗಿ ಅಡೆನ್ ಕೊಲ್ಲಿಯಲ್ಲಿ ನಿಯೋಜಿಸಲಾಗಿದೆ. ಸಮುದ್ರದಲ್ಲಿ ಹಡಗುಗಳ ಮೇಲೆ ಹೌತಿಗಳು ಮತ್ತು ಕಡಲ್ಗಳ್ಳರ ದಾಳಿಗಳು ಅನೇಕ ದೇಶಗಳ ಉದ್ವಿಗ್ನತೆಯನ್ನು ಹೆಚ್ಚಿಸಿವೆ. ಕಳೆದ ಕೆಲವು ದಿನಗಳಲ್ಲಿ ಭಾರತಕ್ಕೆ ಬರುತ್ತಿದ್ದ ಹಲವು ಹಡಗುಗಳ ಮೇಲೂ ದಾಳಿ ನಡೆಸಲಾಗಿದೆ. ಡಿಸೆಂಬರ್ 23ರಂದು ಭಾರತಕ್ಕೆ ಬರುತ್ತಿದ್ದ ಕೆಮ್ ಪ್ಲುಟೊ ಸರಕು ಸಾಗಣೆ ಹಡಗಿನ ಮೇಲೆ ಹಿಂದೂ ಮಹಾಸಾಗರದಲ್ಲಿ ದಾಳಿ ನಡೆದಿತ್ತು.

ಮಾಹಿತಿಯ ಪ್ರಕಾರ, ಬುಧವಾರ ರಾತ್ರಿ ಡ್ರೋನ್ ದಾಳಿಗೊಳಗಾದ ಹಡಗಿನಲ್ಲಿ ಮಾರ್ಷಲ್ ದ್ವೀಪಗಳ ಧ್ವಜವಿತ್ತು. ರಾತ್ರಿ 11 ಗಂಟೆ ಸುಮಾರಿಗೆ ದಾಳಿ ನಡೆದಿದೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ. ಹಡಗಿನಲ್ಲಿ ಒಟ್ಟು 22 ಸಿಬ್ಬಂದಿ ಇದ್ದರು. ಇದರಲ್ಲಿ 9 ಭಾರತೀಯ ನಾಗರಿಕರು ಸೇರಿದ್ದಾರೆ. ದಾಳಿಯಲ್ಲಿ ಯಾರಿಗೂ ಹಾನಿಯಾಗಿಲ್ಲ. ಡ್ರೋನ್ ದಾಳಿಯ ನಂತರ MV Genco Picardy ಹಡಗಿನಿಂದ ತುರ್ತು ಎಚ್ಚರಿಕೆಯನ್ನು ಸ್ವೀಕರಿಸಿದ ನಂತರ ಭಾರತೀಯ ನೌಕಾಪಡೆ ಕ್ರಮ ಕೈಗೊಂಡಿತ್ತು.

ಹಡಗಿನ ದಾರಿ ಸುಲಭಗೊಳಿಸಿದ ನೌಕಾಪಡೆ
INS ವಿಶಾಖಪಟ್ಟಣಂ MV Genco Picardy ಗೆ ನೆರವು ನೀಡಿತು. ಕಳೆದ ಮಧ್ಯರಾತ್ರಿ 12.30ಕ್ಕೆ ಹಡಗನ್ನು ನಿಲ್ಲಿಸಿತು. ತಕ್ಷಣವೇ ಬೆಂಕಿಯನ್ನು ನಿಯಂತ್ರಿಸಲಾಯಿತು ಎಂದು ಭಾರತೀಯ ನೌಕಾಪಡೆ ಪ್ರಕಟಣೆಯಲ್ಲಿ ತಿಳಿಸಿದೆ. ಭಾರತೀಯ ನೌಕಾಪಡೆಯ ಇಒಡಿ ತಜ್ಞರು ಹಾನಿಗೊಳಗಾದ ಹಡಗನ್ನು ಪರಿಶೀಲಿಸಿ ಸುರಕ್ಷಿತವೆಂದು ಘೋಷಿಸಿದರು. ಈ ಹಡಗು ಈಗ ತನ್ನ ಮುಂದಿನ ಬಂದರಿನತ್ತ ಸಾಗುತ್ತಿದೆ.

'ವಿಶೇಷ ತಂಡ ನಿಯೋಜನೆ'
ಅಂತಹ ಕಾರ್ಯಾಚರಣೆಗಳಲ್ಲಿ ಕೆಲಸ ಮಾಡಲು ಇಒಡಿ (ಸ್ಫೋಟಕ ಆರ್ಡನೆನ್ಸ್ ಡಿಸ್ಪೋಸಲ್) ಹೆಸರಿನ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ನೌಕಾಪಡೆ ಹೇಳುತ್ತದೆ. ಈ ತಂಡಕ್ಕೆ ತರಬೇತಿ ನೀಡಲಾಗಿದೆ. ಯಾವುದೇ ರೀತಿಯ ಸ್ಫೋಟಕ ದಾಳಿಯನ್ನು ಎದುರಿಸಬಹುದು. ಸ್ಫೋಟಗಳು ಮತ್ತು ಮದ್ದುಗುಂಡುಗಳನ್ನು ನಾಶಪಡಿಸುವಲ್ಲಿ ತಂಡವು ಪರಿಣತಿಯನ್ನು ಹೊಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com