ಗುವಾಹಟಿ: ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಜನರ ಮುಕ್ತ ಸಂಚಾರವನ್ನು ಸರ್ಕಾರ ತಡೆಯಲಿದೆ ಮತ್ತು ಬಾಂಗ್ಲಾದೇಶದಂತೆ ಮ್ಯಾನ್ಮಾರ್ ಗಡಿಯಲ್ಲೂ ಸೂಕ್ತ ಭದ್ರತೆ ಒದಗಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಹೇಳಿದ್ದಾರೆ.
ಇಂದು ಅಸ್ಸಾಂ ಪೊಲೀಸ್ ಪಡೆಗೆ ಹೊಸದಾಗಿ ರಚಿಸಲಾದ ಐದು ಕಮಾಂಡೋ ಬೆಟಾಲಿಯನ್ಗಳ ಮೊದಲ ಬ್ಯಾಚ್ನ ಪಾಸಿಂಗ್ ಔಟ್ ಪರೇಡ್ ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಮ್ಯಾನ್ಮಾರ್ನೊಂದಿಗೆ ಮುಕ್ತ-ಸಂಚಾರ ಸೌಲಭ್ಯವನ್ನು ಕೇಂದ್ರ ಸರ್ಕಾರ ಮರುಪರಿಶೀಲಿಸುತ್ತಿದೆ ಎಂದು ತಿಳಿಸಿದರು.
ಭಾರತ-ಮ್ಯಾನ್ಮಾರ್ ಗಡಿಯಲ್ಲೂ ಬಾಂಗ್ಲಾದೇಶದ ಗಡಿಯಂತೆ ಸೂಕ್ತ ಭದ್ರತೆ ಒದಗಿಸಲಾಗುವುದು... ಭಾರತ ಸರ್ಕಾರವು ಮ್ಯಾನ್ಮಾರ್ ಜೊತೆಗಿನ ಮುಕ್ತ ಸಂಚಾರವನ್ನು ನಿಲ್ಲಿಸಲಿದೆ ಎಂದು ಅವರು ಹೇಳಿದರು.
ಕಳೆದ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶದ ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಭಾರಿ ಬದಲಾವಣೆಯಾಗಿದೆ ಎಂದು ಅಮಿತ್ ಶಾ ತಿಳಿಸಿದರು.
ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಸರ್ಕಾರಿ ನೌಕರಿ ಪಡೆಯಲು ಜನರು ಲಂಚ ನೀಡಬೇಕಾಗಿತ್ತು ಎಂದು ಆರೋಪಿಸಿದ ಅವರು, ಬಿಜೆಪಿ ಆಡಳಿತದಲ್ಲಿ ಉದ್ಯೋಗಕ್ಕಾಗಿ ಒಂದು ಪೈಸೆಯೂ ನೀಡಬೇಕಾಗಿಲ್ಲ ಎಂದರು.
ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನಾ ಸಮಾರಂಭದ ಬಗ್ಗೆ ಮಾತನಾಡಿದ ಅಮಿತ್ ಶಾ, 550 ವರ್ಷಗಳ ನಂತರ ಭಗವಾನ್ ರಾಮ ತವರಿಗೆ ಮರಳುತ್ತಿದ್ದಾನೆಎಂದು ಹೇಳಿದರು.
Advertisement