ಮಿಜೋರಾಂ: ಬಂಡುಕೋರ ಪಡೆಗಳೊಂದಿಗೆ ಗುಂಡಿನ ಚಕಮಕಿಯ ನಂತರ ಕಳೆದ ವಾರ ಮಿಜೋರಾಂಗೆ ಪಲಾಯನ ಮಾಡಿದ 276 ಮ್ಯಾನ್ಮಾರ್ ಸೈನಿಕರನ್ನು ಭಾರತ ವಾಪಸ್ ಕಳುಹಿಸಲಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಈ ವಾಪಸಾತಿ ಪ್ರಕ್ರಿಯೆ ಸೋಮವಾರ ಮತ್ತು ಮಂಗಳವಾರ ಎರಡು ದಿನಗಳವರೆಗೆ ಮುಂದುವರಿಯಲಿದ್ದು, ಮ್ಯಾನ್ಮಾರ್ ನಿಂದ ಮಿಜೋರಾಂಗೆ ಪಲಾಯನ ಮಾಡಿದ 600ಕ್ಕೂ ಹೆಚ್ಚು ಸೈನಿಕರನ್ನು ಅವರ ದೇಶಕ್ಕೆ ಕಳುಹಿಸಲಾಗುವುದು ಎಂದು ಅವರು ಹೇಳಿದ್ದಾರೆ.
276 ಸೈನಿಕರನ್ನು ಮ್ಯಾನ್ಮಾರ್ ವಾಯುಪಡೆಯ ವಿಮಾನಗಳ ಮೂಲಕ ಐಜ್ವಾಲ್ ಬಳಿಯ ಲೆಂಗ್ಪುಯಿ ವಿಮಾನ ನಿಲ್ದಾಣದಿಂದ ನೆರೆಯ ದೇಶದ ರಾಖೈನ್ ರಾಜ್ಯದ ಸಿಟ್ವೆಗೆ ಕಳುಹಿಸಲಾಗುವುದು ಎಂದು ಅಸ್ಸಾಂ ರೈಫಲ್ಸ್ ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.
ಭಾರತ-ಮಯನ್ಮಾರ್-ಬಾಂಗ್ಲಾದೇಶದ ಗಡಿ ಭಾಗದ ಜಂಕ್ಷನ್ ಎಂದು ಗುರುತಿಸಲಾಗಿರುವ ಮಿಜೋರಾಂನ ಬಂಡುಕ್ಬಂಗಾ ಗ್ರಾಮದೊಳಗೆ ಜನವರಿ 17 ರಂದು ಮಧ್ಯಾಹ್ನ ಕನಿಷ್ಠ 276 ಮಯನ್ಮಾರ್ ಸೈನಿಕರು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳೊಂದಿಗೆ ಭಾರತದ ಭೂಪ್ರದೇಶ ಪ್ರವೇಶಿಸಿದ್ದರು.
ಅವರನ್ನು ಸಮೀಪದ ಪರ್ವಾದಲ್ಲಿರುವ ಅಸ್ಸಾಂ ರೈಫಲ್ಸ್ ಶಿಬಿರಕ್ಕೆ ಕರೆದೊಯ್ಯಲಾಯಿತು ಮತ್ತು ನಂತರ ಅವರಲ್ಲಿ ಹೆಚ್ಚಿನವರನ್ನು ಲುಂಗ್ಲೈಗೆ ಸ್ಥಳಾಂತರಿಸಲಾಯಿತು. ಅಂದಿನಿಂದ ಅವರು ಅಸ್ಸಾಂ ರೈಫಲ್ಸ್ನ ಮೇಲ್ವಿಚಾರಣೆಯಲ್ಲಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮಯನ್ಮಾರ್ನಲ್ಲಿ ತೀವ್ರ ಘರ್ಷಣೆಯ ನಡುವೆ ಸುಮಾರು 600 ಮ್ಯಾನ್ಮಾರ್ ಸೇನೆಯ ಸೈನಿಕರು ಭಾರತವನ್ನು ದಾಟಿದ್ದಾರೆ. ಪಶ್ಚಿಮ ಮಯನ್ಮಾರ್ ರಾಜ್ಯದ ರಾಖೈನ್ನಲ್ಲಿ ಜನಾಂಗೀಯ ಸಶಸ್ತ್ರ ಗುಂಪು ಅರಕನ್ ಆರ್ಮಿ (ಎಎ) ಉಗ್ರಗಾಮಿಗಳು ತಮ್ಮ ಶಿಬಿರಗಳನ್ನು ವಶಪಡಿಸಿಕೊಂಡ ನಂತರ ಸೈನಿಕರು ಭಾರತದೊಳಗೆ ಬಂದಿದ್ದು, ಸೈನಿಕರು ಅಸ್ಸಾಂ ರೈಫಲ್ಸ್ ಶಿಬಿರದಲ್ಲಿ ಆಶ್ರಯ ಪಡೆದಿದ್ದಾರೆ.
Advertisement