ನವದೆಹಲಿ: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ವಿಪಕ್ಷಗಳ INDIಮೈತ್ರಿಕೂಟ ದುರ್ಬಲವಾಗುತ್ತಿರುವ ಲಕ್ಷಣಗಳು ಗೋಚರಿಸುತ್ತಿದೆ.
ಮೈತ್ರಿಕೂಟದಲ್ಲಿ ಗುರುತಿಸಿಕೊಂಡಿದ್ದ ಆಮ್ ಆದ್ಮಿ ಪಕ್ಷ ಪಂಜಾಬ್ ನಲ್ಲಿ , ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಶ್ಚಿಮ ಬಂಗಾಳದಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ ಬಳಿಕ ಈಗ ಬಿಹಾರದಲ್ಲಿ ನಿತೀಶ್ ಕುಮಾರ್ ಮೈತ್ರಿಕೂಟದಿಂದ ಹೊರಬರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಬಿಹಾರದ ಜನಪ್ರಿಯ ನಾಯಕ ಮಾಜಿ ಸಿಎಂ ದಿ. ಕರ್ಪೂರಿ ಠಾಕೂರ್ ಅವರಿಗೆ ಎನ್ ಡಿಎ ಸರ್ಕಾರ ಭಾರತ ರತ್ನ ನೀಡಿದ ಬೆನ್ನಲ್ಲೇ ನಿತೀಶ್ ಕುಮಾರ್ ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿ ಹೊಗಳಿದ್ದರು. ಈ ಬೆನ್ನಲ್ಲೇ ನಿತೀಶ್ ಕುಮಾರ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿಗೆ ಮುಂದಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
2013 ರಿಂದ ನಿತೀಶ್ ಕುಮಾರ್ ಆಗಾಗ್ಗೆ ಮೈತ್ರಿಕೂಟವನ್ನು ಬದಲಾವಣೆ ಮಾಡುತ್ತಿದ್ದಾರೆ. 2022 ರಲ್ಲಿ ಎನ್ ಡಿಎಯಿಂದ ಹೊರಬಂದಿದ್ದ ನಿತೀಶ್ ಕುಮಾರ್ ಮಹಾಮೈತ್ರಿಕೂಟ ಸೇರ್ಪಡೆಗೊಂಡಿದ್ದರು.
ಕಳೆದ ಕೆಲವು ವಾರಗಳಲ್ಲಿ ನಿತೀಶ್ ಕುಮಾರ್ ಕುಟುಂಬ ರಾಜಕಾರಣದ ವಿರುದ್ಧ ವಾಗ್ದಾಳಿ ನಡೆಸಿದ್ದು ಗಮನಾರ್ಹವಾಗಿದೆ. ಇನ್ನು INDI ಮೈತ್ರಿಕೂಟದಲ್ಲಿನ ಸ್ಪಷ್ಟತೆಯ ಕೊರತೆಯ ಬಗ್ಗೆ ಮತ್ತು ಸಂಭಾವ್ಯ ಪಿಎಂ ಅಭ್ಯರ್ಥಿ ವಿಷಯವಾಗಿ ತಮ್ಮನ್ನು ಕಡೆಗಣಿಸಿರುವುದರ ಬಗ್ಗೆಯೂ ನಿತೀಶ್ ಕುಮಾರ್ ಅಸಮಾಧಾನಗೊಂಡಿದ್ದಾರೆ ಎಂದು ತಿಳಿದುಬಂದಿದೆ.
Advertisement