ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ

'ಅಗ್ನಿಪಥ್ ಯೋಜನೆ' ನಮ್ಮ ಸೇನೆಯ ಸುಧಾರಣೆಗೆ ಅಗತ್ಯವಾಗಿದೆ, ದುರದೃಷ್ಟವಶಾತ್ ಈ ಹಿಂದೆ ಅದಕ್ಕೆ ಪ್ರಾಮುಖ್ಯತೆ ನೀಡಿರಲಿಲ್ಲ: ಪ್ರಧಾನಿ ಮೋದಿ

ಮಿಲಿಟರಿ ಸುಧಾರಣೆಗಳ ಬಗ್ಗೆ ಪ್ರತಿಪಕ್ಷಗಳು ದೇಶದ ಜನರನ್ನು ಅದರಲ್ಲೂ ಯುವಕರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿವೆ ಎಂದು ಪ್ರಧಾನಿ ಮೋದಿ ಆರೋಪಿಸಿದರು.
Published on

ನವದೆಹಲಿ: ದಶಕಗಳಿಂದ ಸಂಸತ್ತು ಮತ್ತು ವಿವಿಧ ಸಮಿತಿಗಳಲ್ಲಿ ಸಶಸ್ತ್ರ ಪಡೆಗಳಲ್ಲಿ ಯುವಕರಿಗೆ ಹೆಚ್ಚಿನ ಅವಕಾಶ ನೀಡುವ ಅಗತ್ಯತೆಯ ಬಗ್ಗೆ ಚರ್ಚೆಗಳು ನಡೆದಿವೆ. ಭಾರತೀಯ ಸೈನಿಕರ ಸರಾಸರಿ ವಯಸ್ಸು ಜಾಗತಿಕ ಸರಾಸರಿಗಿಂತ ಹೆಚ್ಚಿರುವುದು ಆತಂಕ ಮೂಡಿಸಿದೆ. ಇದರ ಹೊರತಾಗಿಯೂ, ಈ ನಿರ್ಣಾಯಕ ಭದ್ರತಾ ಸವಾಲನ್ನು ಎದುರಿಸುವ ಇಚ್ಛಾಶಕ್ತಿಯ ಕೊರತೆಯಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇಂದು ಕಾರ್ಗಿಲ್ ವಿಜಯ ದಿನದ 25ನೇ ವರ್ಷಾಚರಣೆ ಸಂದರ್ಭದಲ್ಲಿ ಲಡಾಕ್ ನ ದ್ರಾಸ್ ನಲ್ಲಿರುವ ಕಾರ್ಗಿಲ್ ಯುದ್ಧ ಹುತಾತ್ಮರಿಗೆ ಗೌರವ ಸಲ್ಲಿಸಿದ ಬಳಿಕ ಮಾತನಾಡಿದ ಪ್ರಧಾನ ಮಂತ್ರಿಗಳು, ದೇಶವು ಈಗ ಅಗ್ನಿಪಥ್ ಯೋಜನೆಯ ಮೂಲಕ ಈ ಸಮಸ್ಯೆಯನ್ನು ಪರಿಹರಿಸಿದೆ, ಇದು ಪಡೆಗಳನ್ನು ನಿರಂತರವಾಗಿ ಯುದ್ಧಕ್ಕೆ ಸಜ್ಜುಗೊಳಿಸುವ ಗುರಿಯನ್ನು ಹೊಂದಿದೆ, ಭಾರತೀಯ ಸೇನೆಯಲ್ಲಿ ಅಗ್ನಿಪಥ್ ಯೋಜನೆ ಒಂದು ಅಗತ್ಯದ ಸುಧಾರಣೆಯಾಗಿದೆ, ಆದರೆ ದುರದೃಷ್ಟವಶಾತ್ ದೇಶದ ಯುವಜನತೆಯನ್ನು ದಾರಿತಪ್ಪಿಸುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಈ ಸೂಕ್ಷ್ಮ ವಿಚಾರವನ್ನು ರಾಜಕೀಯಗೊಳಿಸಿದವರ ವಿರುದ್ಧವೂ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು. ದುರದೃಷ್ಟವಶಾತ್, ಕೆಲವರು ಇಂತಹ ಸೂಕ್ಷ್ಮ ವಿಷಯವನ್ನು ರಾಜಕೀಯದ ವಿಷಯವನ್ನಾಗಿ ಮಾಡಿದ್ದಾರೆ. ಇದೇ ಜನರು ಸಾವಿರಾರು ಕೋಟಿ ಹಗರಣಗಳನ್ನು ನಡೆಸುವ ಮೂಲಕ ನಮ್ಮ ದೇಶದ ಸಶಸ್ತ್ರ ಪಡೆಗಳನ್ನು ದುರ್ಬಲಗೊಳಿಸಿದರು. ನಮ್ಮ ವಾಯುಪಡೆಯ ಆಧುನೀಕರಣ ಮತ್ತು ತೇಜಸ್ ಯುದ್ಧ ವಿಮಾನದ ಅಭಿವೃದ್ಧಿಗೆ ಅಡ್ಡಿಪಡಿಸಿದರು ಎಂದು ಟೀಕಿಸಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ
ದಾಖಲಾದ ಒಂದು ವರ್ಷದೊಳಗೆ 20 ಅಗ್ನಿವೀರರ ಸಾವು: ದೇಶಾದ್ಯಂತ ಚರ್ಚೆಗೆ ಗ್ರಾಸ

ಪಿಂಚಣಿ ಹಣವನ್ನು ಉಳಿಸಲು ಅಗ್ನಿಪಥ್ ಯೋಜನೆಯನ್ನು ರೂಪಿಸಲಾಗಿದೆ ಎಂಬ ಪ್ರತಿಪಕ್ಷಗಳ ಹೇಳಿಕೆಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕೆಲವರು ಈ ಯೋಜನೆಯು ಪಿಂಚಣಿ ಉಳಿಸುವ ಗುರಿಯನ್ನು ಹೊಂದಿದೆ ಎಂದು ತಪ್ಪು ಕಲ್ಪನೆಯನ್ನು ಹರಡುತ್ತಿದ್ದಾರೆ. ಇಂದಿನ ನೇಮಕಾತಿಗಳಿಗೆ 30 ವರ್ಷಗಳ ನಂತರವೇ ಪಿಂಚಣಿ ಪ್ರಶ್ನೆ ಉದ್ಭವಿಸುತ್ತದೆ. ನಾವು ಇದನ್ನು ಗೌರವಿಸುತ್ತೇವೆ. ನಮಗೆ ದೇಶದ ಭದ್ರತೆಯೇ ಮುಖ್ಯ ಹೊರತು ರಾಜಕೀಯವಲ್ಲ ಎಂದರು.

ಮಿಲಿಟರಿ ಸುಧಾರಣೆಗಳ ಬಗ್ಗೆ ಪ್ರತಿಪಕ್ಷಗಳ ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿರುವ ಬಗ್ಗೆ ಇಂದಿನ ಭಾಷಣದಲ್ಲಿ ಪ್ರಧಾನಿ ಮೋದಿ ಎತ್ತಿ ತೋರಿಸಿದರು. 500 ಕೋಟಿ ತೋರಿಸಿ ಇದೇ ಜನ ಒನ್ ರ್ಯಾಂಕ್ ಒನ್ ಪಿಂಚಣಿ ಸುಳ್ಳು ಎಂದು ಹೇಳಿದರು. ಮಾಜಿ ಸೈನಿಕರಿಗೆ 1.25 ಲಕ್ಷ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಒನ್ ರ್ಯಾಂಕ್ ಒನ್ ಪಿಂಚಣಿ ಜಾರಿ ಮಾಡಿದ್ದು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ. ಸ್ವಾತಂತ್ರ್ಯ ದೊರಕಿ ಏಳು ದಶಕಗಳ ನಂತರವೂ ಹುತಾತ್ಮರಿಗೆ ಯುದ್ಧ ಸ್ಮಾರಕವನ್ನು ನಿರ್ಮಿಸಲು ಇವರಿಗೆ ಸಾಧ್ಯವಾಗಲಿಲ್ಲ. ಗಡಿಯಲ್ಲಿ ನಮ್ಮ ಸೈನಿಕರಿಗೆ ಸಾಕಷ್ಟು ಬುಲೆಟ್ ಪ್ರೂಫ್ ಜಾಕೆಟ್‌ಗಳನ್ನು ಒದಗಿಸಿಕೊಡಲಿಲ್ಲ ಎಂದು ವಿರೋಧ ಪಕ್ಷಗಳಿಗೆ ಪ್ರಧಾನಿ ಮೋದಿ ತಿರುಗೇಟು ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com