
ನವದೆಹಲಿ: ಮೂವರು ವಿದ್ಯಾರ್ಥಿಗಳ ಸಾವಿಗೆ ಕಾರಣವಾದ ದೆಹಲಿ ಕೋಚಿಂಗ್ ಸೆಂಟರ್ ದುರಂತಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯ (MHA) ಸಮಿತಿ ರಚನೆ ಮಾಡಿದ್ದು, 30 ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದೆ.
ದೆಹಲಿಯ ರಾಜಿಂದರ್ ನಗರದಲ್ಲಿರುವ ಕೋಚಿಂಗ್ ಸೆಂಟರ್ನಲ್ಲಿ ನಡೆದ ದುರಂತದ ಕುರಿತು ತನಿಖೆ ನಡೆಸಲು ಕೇಂದ್ರ ಗೃಹ ಸಚಿವಾಲಯ (ಎಂಎಚ್ಎ) ಸೋಮವಾರ ವಿವಿಧ ಕೇಂದ್ರ ಸಚಿವಾಲಯಗಳು ಮತ್ತು ದೆಹಲಿ ಸರ್ಕಾರದ ಅಧಿಕಾರಿಗಳನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದ್ದು, 30 ದಿನಗಳೊಳಗೆ ವರದಿ ನೀಡುವಂತೆ ಸೂಚನೆ ನೀಡಿದೆ.
ಅಧಿಕಾರಿಗಳ ಪ್ರಕಾರ ಸಮಿತಿಯು ನಗರ ಮತ್ತು ವಸತಿ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ (MOUHA), ದೆಹಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ (ಗೃಹ), ದೆಹಲಿ ಪೊಲೀಸ್ನ ವಿಶೇಷ ಪೊಲೀಸ್ ಆಯುಕ್ತರು ಮತ್ತು ಅಗ್ನಿಶಾಮಕ ಸಲಹೆಗಾರರನ್ನು ಒಳಗೊಂಡಿರುತ್ತದೆ. MHA ಯಲ್ಲಿನ ಜಂಟಿ ಕಾರ್ಯದರ್ಶಿ (UT) ಸಮಿತಿಯ ಸಂಚಾಲಕರಾಗಿರುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.
ಸಮಿತಿಯು ವಿದ್ಯಾರ್ಥಿಗಳ ಸಾವಿಗೆ ಕಾರಣವಾದ ದುರಂತಕ್ಕೆ ಕಾರಣಗಳನ್ನು ತನಿಖೆ ಮಾಡಲು, ಜವಾಬ್ದಾರಿಯನ್ನು ನಿಗದಿಪಡಿಸಲು ಮತ್ತು ಕ್ರಮಗಳನ್ನು ಸೂಚಿಸಲು ಆದೇಶಿಸಲಾಗಿದೆ. ಅಂತೆಯೇ ಭವಿಷ್ಯದಲ್ಲಿ ಇಂತಹ ದುರಂತ ಘಟನೆ ಮರುಕಳಿಸದಂತೆ ನೋಡಿಕೊಳ್ಳಲು ಅಗತ್ಯವಾದ ನೀತಿ ಬದಲಾವಣೆಗಳನ್ನು ಶಿಫಾರಸು ಮಾಡುತ್ತದೆ. ಸಮಿತಿಯು ತನ್ನ ವರದಿಯನ್ನು 30 ದಿನಗಳೊಳಗೆ ಸಲ್ಲಿಸಲು ತಿಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ಸುರಿದ ಭಾರೀ ಮಳೆಯ ನಂತರ ಕೇಂದ್ರ ದೆಹಲಿಯ IAS ಕೋಚಿಂಗ್ ಸೆಂಟರ್ನ ನೆಲಮಾಳಿಗೆಗೆ ನುಗ್ಗಿ ಅಲ್ಲಿದ್ದ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು. ಮೂವರೂ ಕೂಡ ಯುವ ಐಎಎಸ್ ಆಕಾಂಕ್ಷಿಗಳಾಗಿದ್ದು, ಸಾವನ್ನಪ್ಪಿದ ಮೂವರು ಐಎಎಸ್ ಆಕಾಂಕ್ಷಿಗಳು ಉತ್ತರ ಪ್ರದೇಶದ ಅಂಬೇಡ್ಕರ್ ನಗರದ ಶ್ರೇಯಾ ಯಾದವ್, ತೆಲಂಗಾಣದ ತಾನ್ಯಾ ಸೋನಿ ಮತ್ತು ಕೇರಳದ ಎರ್ನಾಕುಲಂನ ನವೀನ್ ಡಾಲ್ವಿನ್ ಎಂದು ತಿಳಿದುಬಂದಿದೆ. ಈ ದುರ್ಘಟನೆ ದೆಹಲಿಯ ಮೂಲಭೂತ ಸೌಕರ್ಯದ ಕುರಿತು ಮತ್ತು ಒಳಚರಂಡಿ ವ್ಯವಸ್ಥೆಯ ದುರವಸ್ಥೆಯನ್ನು ಜಗಜ್ಜಾಹಿರು ಮಾಡಿದೆ.
ಕೋಚಿಂಗ್ ಇನ್ಸ್ಟಿಟ್ಯೂಟ್ ನೆಲಮಾಳಿಗೆಯ ಪ್ರದೇಶದಲ್ಲಿ ಗ್ರಂಥಾಲಯವನ್ನು "ಕಾನೂನುಬಾಹಿರವಾಗಿ" ನಡೆಸುತ್ತಿದೆ ಎಂದು ಪ್ರಾಥಮಿಕ ಪೊಲೀಸ್ ತನಿಖೆಗಳು ಬಹಿರಂಗಪಡಿಸಿವೆ. ಅಂತೆಯೇ ಆರೋಪಿಗಳ ವಿರುದ್ಧ ಕೊಲೆ, BNS ನ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ಆರೋಪಿ ಮಾಲೀಕ ಮತ್ತು ಸಂಸ್ಥೆಯ ಸಂಯೋಜಕನನ್ನು ಭಾನುವಾರ ಬಂಧಿಸಲಾಗಿದೆ.
Advertisement