Delhi Rains: ವರುಣಾರ್ಭಟಕ್ಕೆ ರಾಜಧಾನಿ ತತ್ತರ; ಗಂಟೆಯಲ್ಲಿ 11.2 ಸೆಂ.ಮೀ ಮಳೆ; 2 ಸಾವು, ಜನಜೀವನ ಅಸ್ಥವ್ಯಸ್ಥ!

ದೆಹಲಿಯಲ್ಲಿ ಇಂದು ಸಂಜೆ ಭಾರಿ ಮಳೆ ಸುರಿದಿದ್ದು, ರಾಜಧಾನಿಯ ಪ್ರಮುಖ ರಸ್ತೆಗಳಲ್ಲಿ ಭಾರೀ ಮಳೆಯಿಂದ ರಸ್ತೆಗಳು ಜಲಾವ್ರತವಾಗಿವೆ. ಈ ಹಿಂದೆ ಪ್ರವಾಹದ ನೀರಿನಲ್ಲಿ ಮೂವರು ವಿದ್ಯಾರ್ಥಿಗಳು ಸಾವನಪ್ಪಿದ ಐಎಎಸ್ ಕೋಚಿಂಗ್ ಸೆಂಟರ್ ಇರುವ ರಾಜೇಂದ್ರ ನಗರ ಕೂಡ ಮತ್ತೆ ಜಲಾವೃತವಾಗಿದೆ.
heavy rain batters Delhi
ವರುಣಾರ್ಭಟಕ್ಕೆ ರಾಜಧಾನಿ ತತ್ತರ
Updated on

ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ವರುಣಾರ್ಭಟಕ್ಕೆ ಸಂಚಾರ, ಜನಜೀವನ ಅಸ್ಥವ್ಯಸ್ಥಗೊಂಡಿದ್ದು, ಕೇವಲ ಒಂದು ಗಂಟೆಯಲ್ಲಿ 11.2 ಸೆಂ.ಮೀ ಮಳೆಯಾಗಿದೆ.

ಹೌದು..ದೆಹಲಿಯಲ್ಲಿ ಇಂದು ಸಂಜೆ ಭಾರಿ ಮಳೆ ಸುರಿದಿದ್ದು, ರಾಜಧಾನಿಯ ಪ್ರಮುಖ ರಸ್ತೆಗಳಲ್ಲಿ ಭಾರೀ ಮಳೆಯಿಂದ ರಸ್ತೆಗಳು ಜಲಾವ್ರತವಾಗಿವೆ.

ಈ ಹಿಂದೆ ಪ್ರವಾಹದ ನೀರಿನಲ್ಲಿ ಮೂವರು ವಿದ್ಯಾರ್ಥಿಗಳು ಸಾವನಪ್ಪಿದ ಐಎಎಸ್ ಕೋಚಿಂಗ್ ಸೆಂಟರ್ ಇರುವ ರಾಜೇಂದ್ರ ನಗರ ಕೂಡ ಮತ್ತೆ ಜಲಾವೃತವಾಗಿದೆ.

ಈ ಭಾಗದಲ್ಲಿ 20 ನಿಮಿಷ ಸುರಿದ ಮಳೆಗೆ ರಸ್ತೆ ಕೆರೆಯಂತಾಗಿದ್ದು, ಸೊಂಟದವರೆಗೂ ಮಳೆ ನೀರು ನಿಂತಿದೆ. ಇದರಿಂದ ನ್ಯಾಯ ಬೇಕೆಂದು ಯುವಕರು ಕೋಚಿಂಗ್ ಸೆಂಟರ್ ಎದುರು ನಿಂತ ಮಳೆನೀರಿನಲ್ಲಿ ಕೈ ಕೈ ಹಿಡಿದು ಘೋಷಣೆ ಕೂಗುತ್ತಿದ್ದಾರೆ.

2 ಸಾವು, ಇಬ್ಬರಿಗೆ ಗಾಯ

ಇನ್ನು ಭಾರಿ ಮಳೆಯಿಂದಾಗಿ ದೆಹಲಿಯ ವಿವಿಧೆಡೆ ಹಲವು ಮಳೆ ಸಂಬಂಧಿತ ದುರಂತಗಳು ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ದೆಹಲಿಯ ಗಾಜಿಪುರ ಪ್ರದೇಶದಲ್ಲಿ 22 ವರ್ಷದ ಮಹಿಳೆ ಮತ್ತು ಆಕೆಯ ಮಗು ನೀರಿನಿಂದ ತುಂಬಿರುವ ಚರಂಡಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೃತರನ್ನು ತನುಜಾ ಮತ್ತು ಅವರ ಮೂರು ವರ್ಷದ ಮಗ ಪ್ರಿಯಾಂಶ್ ಎಂದು ಗುರುತಿಸಲಾಗಿದೆ. ಇಬ್ಬರೂ ಖೋಡಾ ಕಾಲೋನಿ ಬಳಿಯ ವಾರದ ಮಾರುಕಟ್ಟೆಗೆ ಹೋಗಿದ್ದರು.

ನಿರ್ಮಾಣ ಹಂತದ ಕಟ್ಟಡದ ಬಳಿಕ ಚರಂಡಿ ಬಳಿ ಜಾರಿ ಬಿದ್ದಿದ್ದಾರೆ. ನೀರಿನ ಹರಿವು ವೇಗವಾಗಿದ್ದರಿಂದ ಕೊಚ್ಚಿಕೊಂಡು ಹೋಗಿ ರಾತ್ರಿ 8 ವೇಳೆ ಪತ್ತೆಯಾಗಿದ್ದಾರೆ. ಡೈವರ್‌ಗಳು ಮತ್ತು ಕ್ರೇನ್‌ಗಳ ಸಹಾಯದಿಂದ ಜೋಡಿಯನ್ನು ಹೊರತೆಗೆದು ಲಾಲ್ ಬಹದ್ದೂರ್ ಶಾಸ್ತ್ರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ವೈದ್ಯರು ಸಾವು ಖಚಿತಪಡಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಮಳೆ ಸಂಬಂಧಿದ ಇತರೆ ದುರ್ಘಟನೆಗಳಲ್ಲಿ ಇಬ್ಬರು ಗಾಯಗೊಂಡಿದ್ದು, ಉತ್ತರ ದೆಹಲಿಯ ಸಬ್ಜಿ ಮಂಡಿ ಪ್ರದೇಶದಲ್ಲಿ ಧಾರಾಕಾರ ಮಳೆಯಿಂದಾಗಿ ಮನೆ ಕುಸಿದು ಒಬ್ಬ ವ್ಯಕ್ತಿಗೆ ಗಂಭೀರ ಗಾಯಗಳಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂರನೇ ಘಟನೆಯಲ್ಲಿ, ನೈಋತ್ಯ ದೆಹಲಿಯ ವಸಂತ್ ಕುಂಜ್ ಪ್ರದೇಶದಲ್ಲಿ ಗೋಡೆ ಕುಸಿದು ಮಹಿಳೆ ಗಾಯಗೊಂಡಿದ್ದಾರೆ.

ಗಂಟೆಯಲ್ಲಿ 11.2 ಸೆಂ.ಮೀ ಮಳೆ

ರಾಜಧಾನಿಯ ಹಲವೆಡೆ ಭಾರಿ ಮಳೆಯಾಗಿದ್ದು, ಕೇವಲ ಒಂದು ಗಂಟೆಯ ಅವಧಿಯಲ್ಲಿ ಬರೊಬ್ಬರಿ 11.2 ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ನಗರದ ಪ್ರಮುಖ ಹವಾಮಾನ ಕೇಂದ್ರವಾದ ಸಫ್ದರ್‌ಜಂಗ್‌ನಲ್ಲಿ ಸಂಜೆ 5:30 ರಿಂದ ರಾತ್ರಿ 8:30 ರವರೆಗೆ 79.2 ಮಿಮೀ ಮಳೆ ದಾಖಲಾಗಿದೆ, ಮಯೂರ್ ವಿಹಾರ್‌ನಂತಹ ಇತರ ಪ್ರದೇಶಗಳಲ್ಲಿ 119 ಮಿಮೀ ಮಳೆಯಾಗಿದೆ.

ಶಾಲೆಗಳಿಗೆ ರಜೆ

ಭಾರೀ ಮಳೆಯಿಂದಾಗಿ ಲುಟ್ಯೆನ್ಸ್ ದೆಹಲಿ, ಕಾಶ್ಮೀರ್ ಗೇಟ್ ಮತ್ತು ರಾಜಿಂದರ್ ನಗರ ಸೇರಿದಂತೆ ಹಲವು ಪ್ರದೇಶಗಳು ಜಲಾವೃತವಾಗಿವೆ. ಲುಟ್ಯೆನ್ಸ್‌ನ ದೆಹಲಿ, ಕಾಶ್ಮೀರ್ ಗೇಟ್, ಕರೋಲ್ ಬಾಗ್ ಮತ್ತು ಪ್ರಗತಿ ಮೈದಾನ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯ ನಂತರ ಪ್ರವಾಹ ಪರಿಸ್ಥಿತಿ ಏರ್ಪಟ್ಟಿದೆ.

ಮುಂಜಾಗ್ರತಾ ಕ್ರಮವಾಗಿ ದೆಹಲಿಯಾದ್ಯಂತ ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಭಾರೀ ಮಳೆಯ ಮುನ್ಸೂಚನೆಯಿಂದಾಗಿ ದೆಹಲಿಯ ಎಲ್ಲಾ ಶಾಲೆಗಳನ್ನು ಆಗಸ್ಟ್ 1 ರಂದು ಮುಚ್ಚಲಾಗುವುದು ಎಂದು ಶಿಕ್ಷಣ ಸಚಿವ ಅತಿಶಿ ಘೋಷಿಸಿದ್ದಾರೆ. ಹಳೇ ದೆಹಲಿಯ ದರಿಯಾಗಂಜ್ ಪ್ರದೇಶದಲ್ಲಿ, ಶಾಲೆಯೊಂದರ ಗಡಿ ಗೋಡೆಯು ಹೊರಗೆ ನಿಲ್ಲಿಸಿದ್ದ ಕಾರುಗಳ ಮೇಲೆ ಕುಸಿದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com