
ಮುಂಬೈ: ಲೋಕಸಭಾ ಚುನಾವಣೆಯ ಫಲಿತಾಂಶ ಘೋಷಣೆಗೆ ಇನ್ನೇನು ಕೆಲವು ಗಂಟೆಗಳಷ್ಟೇ ಬಾಕಿ ಉಳಿದಿದ್ದು, ಸದ್ಯ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದೆ. ಈ ಮಧ್ಯೆ ದೇಶದ ಎಲ್ಲ 543 ಲೋಕಸಭಾ ಕ್ಷೇತ್ರಗಳ ಚಿತ್ರಣ ಈಗ ಲಭ್ಯವಿದ್ದು, ಇದು ನರೇಂದ್ರ ಮೋದಿಯವರಿಗೆ ರಾಜಕೀಯವಾಗಿ ಮತ್ತು ನೈತಿಕವಾಗಿ ಆಘಾತಕಾರಿ ಸೋಲು ಎಂಬುದು ಸ್ಪಷ್ಟವಾಗಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಎಲ್ಲ 543 ಸೀಟುಗಳ ಟ್ರೆಂಡ್ಗಳು ಈಗ ಲಭ್ಯವಿದ್ದು, ಒಂದಷ್ಟು ವಿಚಾರಗಳು ಸ್ಪಷ್ಟವಾಗಿವೆ. ಇದು ನರೇಂದ್ರ ಮೋದಿಯವರಿಗೆ ರಾಜಕೀಯವಾಗಿ ಮತ್ತು ನೈತಿಕವಾಗಿ ಆಘಾತಕಾರಿ ಸೋಲಾಗಿದೆ. ಮೋದಿ ಪ್ರಾಯೋಜಿತ ಚುನಾವಣೋತ್ತರ ಸಮೀಕ್ಷೆಗಳ ಬಣ್ಣ ಸಂಪೂರ್ಣವಾಗಿ ಬಯಲಾಗಿದ್ದು, ಅವುಗಳು ನುಡಿದಿದ್ದ ಭವಿಷ್ಯ ಒಟ್ಟಾರೆ ಹುಸಿಯಾಗಿದೆ ಎಂದಿದ್ದಾರೆ.
ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವುತ್ ಮಾತನಾಡಿ, ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಇಂಡಿಯಾ ಮೈತ್ರಿಕೂಟವು ಊಹಿಸಿದ ಸಂಖ್ಯೆಯನ್ನು ಮೀರಿ ಮುನ್ನಡೆ ಕಾಯ್ದುಕೊಂಡಿದೆ ಮತ್ತು ವಿಪಕ್ಷಗಳ ಮೈತ್ರಿಕೂಟವು 295 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುತ್ತದೆ ಎಂದು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ರಾವುತ್, 2019ರ ಲೋಕಸಭೆ ಚುನಾವಣೆಯಲ್ಲಿ ಕೇವಲ 50 ಸ್ಥಾನಗಳನ್ನು ಗಳಿಸಿದ್ದ ಕಾಂಗ್ರೆಸ್ ಈಗ 150 ಸ್ಥಾನಗಳನ್ನು ಗಳಿಸಲು ಸಜ್ಜಾಗಿದೆ. ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ (ಎಂವಿಎ) ಮುನ್ನಡೆ ಕಾಯ್ದುಕೊಂಡಿದೆ ಮತ್ತು ದೇಶದಲ್ಲಿ ಇಂಡಿಯಾ ಮೈತ್ರಿಕೂಟವು 295 ಸ್ಥಾನಗಳಲ್ಲಿ ಗೆಲ್ಲುತ್ತದೆ ಎಂದರು.
543 ಸದಸ್ಯ ಬಲದ ಲೋಕಸಭೆಗೆ ನಡೆದ ಚುನಾವಣೆಗೆ ಮಂಗಳವಾರ ದೇಶಾದ್ಯಂತ ಮತ ಎಣಿಕೆ ನಡೆಯುತ್ತಿದೆ.
ಇಂಡಿಯಾ ಮೈತ್ರಿಕೂಟವು ಎಕ್ಸಿಟ್ ಪೋಲ್ಗಳು ಭವಿಷ್ಯ ನುಡಿದ ಅಂಕಿಅಂಶಗಳನ್ನು ದಾಟಿದೆ ಮತ್ತು ಮುಂದೆ ಸಾಗಿದೆ. ಅದು 295 ಸ್ಥಾನಗಳನ್ನು ದಾಟಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆರಂಭಿಕ ಟ್ರೆಂಡ್ಗಳಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟವು 200 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇದು ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿದ್ದಕ್ಕಿಂತ ಉತ್ತಮವಾಗಿದೆ.
Advertisement